ಚನ್ನಗಿರಿ: ಪಟ್ಟಣದ ಹೊರ ವಲಯದ ಲ್ಲಿರುವ ಅಜ್ಜಿಹಳ್ಳಿ ಗ್ರಾಮದ 4 ಎಕರೆ ಜಾಗದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೋ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, ಇನ್ನು 6 ತಿಂಗಳಲ್ಲಿ ಲೋಕಾರ್ಪಣೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಪಟ್ಟಣ ಸೇರಿದಂತೆ ತಾಲ್ಲೂಕಿನ ಸಂತೇಬೆನ್ನೂರು ಭಾಗದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 90ಕ್ಕಿಂತ ಹೆಚ್ಚು ಕೆಎಸ್ಆರ್ಟಿಸಿ ಬಸ್ಗಳು ಶಿವಮೊಗ್ಗ-ಬಳ್ಳಾರಿ- ಬೆಂಗಳೂರು- ಚಿತ್ರದುರ್ಗ- ಚಿಕ್ಕಮಗಳೂರು- ಬೀರೂರು- ಕಡೂರು- ಹೊಳಲ್ಕೆರೆ- ರಾಣೇಬೆನ್ನೂರು- ಭದ್ರಾವತಿಗೆ ಪ್ರತಿ ನಿತ್ಯ ಸಂಚರಿಸುತ್ತಿವೆ. ಆದರೆ, ಜಿಲ್ಲೆಯಲ್ಲಿಯೇ ಅತಿ ದೊಡ್ಡ ತಾಲ್ಲೂಕು ಕೇಂದ್ರವಾಗಿರುವ ಪಟ್ಟಣದಲ್ಲಿ ಡಿಪೋ ಇರಲಿಲ್ಲ.
ಇದನ್ನು ಮನಗಂಡು 2022-23ನೇ ಸಾಲಿನಲ್ಲಿ ಅಂದಿನ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಡಿಪೋ ನಿರ್ಮಾಣಕ್ಕಾಗಿ ಪಟ್ಟಣದ ಹೊರ ವಲಯದ ಅಜ್ಜಿಹಳ್ಳಿ ಗ್ರಾಮದ ಸರ್ಕಾರಿ ಗೋಮಾಳದಲ್ಲಿ 4 ಎಕರೆ ಭೂಮಿಯನ್ನು ಮಂಜೂರು ಮಾಡಿಸಿ, ಜತೆಗೆ ಕಾಮಗಾರಿಗಾಗಿ ₹8 ಕೋಟಿ ಅನುದಾನ ಬಿಡುಗಡೆ ಮಾಡಿಸಿ, 2023ನೇ ಸಾಲಿನ ಏಪ್ರಿಲ್ ತಿಂಗಳಲ್ಲಿ ಭೂಮಿಪೂಜೆ ನೆರವೇರಿಸಿದ್ದರು.
ಡಿಪೋ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಇನ್ನಾರು ತಿಂಗಳಲ್ಲಿ ಲೋಕಾರ್ಪಣೆ ಮಾಡಲು ಅಗತ್ಯ ಕ್ರಮಗಳನ್ನು ರಸ್ತೆ ಸಾರಿಗೆ ಸಂಸ್ಥೆ ಕೈಗೊಳ್ಳುತ್ತಿದೆ. ಡಿಪೋ ನಿರ್ಮಾಣವಾದರೆ 30ರಿಂದ 40 ಕೆಎಸ್ಆರ್ಟಿಸಿ ಬಸ್ಗಳನ್ನು ಈ ಡಿಪೋಗೆ ನಿಯೋಜಿಸಲಾಗುತ್ತದೆ. ತಾಲ್ಲೂಕಿನ ಕೆಎಸ್ಆರ್ಟಿಸಿ ಬಸ್ ಸೌಕರ್ಯ ವಂಚಿತ ಗ್ರಾಮಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಬಹುದಾಗಿದೆ.
ಬಸ್ ಸೌಕರ್ಯ ವಂಚಿತ ಗ್ರಾಮಗಳ ಜನರು ಈಗ ಹೆಚ್ಚು ಹಣ ನೀಡಿ ಆಟೊಗಳಲ್ಲಿ ಸಂಚರಿಸುತ್ತಿದ್ದು, ಬಸ್ ಸೌಕರ್ಯ ಕಲ್ಪಿಸಿದ ಮೇಲೆ ಜನರು ಎದುರಿಸುತ್ತಿರುವ ಸಾರಿಗೆ ತೊಂದರೆಗೆ ಇದರಿಂದ ಪರಿಹಾರ ಸಿಗಲಿದೆ.