ಘಟನೆಯ ವಿವರ: ಜಾನುವಾರುಗಳಿಗೆ ಬಣವೆಯಿಂದ ಮೇವು ತೆಗೆದುಕೊಂಡು ಬರಲು ಯಕ್ಕನಹಳ್ಳಿ ಗ್ರಾಮದ ಭದ್ರಾ ನಾಲೆ ದಂಡೆಯಲ್ಲಿನ ಕಣಕ್ಕೆ ಮನೋಜ್ಕುಮಾರ್ನ ಹಿರಿಯ ಸಹೋದರ ಜಿ.ಆರ್. ಯಶವಂತ್ ಹೋಗಿದ್ದ. ಅಣ್ಣನನ್ನು ಹಿಂಬಾಲಿಸಿದ ಮನೋಜ್ಕುಮಾರನೂ ಹೋಗಿದ್ದ. ಆದರೆ, ಇದನ್ನು ಗಮನಿಸದ ಯಶವಂತ್ ಬಣವೆಯಿಂದ ಮೇವು ತೆಗೆದುಕೊಂಡು ಮನೆಗೆ ಮರಳಿದ. ಒಂದೆರಡು ಗಂಟೆಗಳಾದರೂ ಮಗು ಕಾಣಿಸದ ಕಾರಣ ಪೋಷಕರು ಹಾಗೂ ಗ್ರಾಮಸ್ಥರು ಹುಡುಕಾಟ ನಡೆಸಿದರು. ಕೊನೆಗೆ ನಾಲೆಯ ಬಳಿ ಬಾಲಕನ ಹೆಜ್ಜೆ ಗುರುತುಗಳನ್ನು ಗಮನಿಸಿ ನಾಲೆಗೆ ಬಿದ್ದಿರಬಹುದು ಎಂಬ ಅನುಮಾನದಿಂದ ನಾಲೆಗುಂಟ ಪಯಣಿಸಿ ಹುಡುಕಾಡಿದರು. ಸುಮಾರು ಎರಡು ಗಂಟೆಗಳ ಶೋಧದ ನಂತರ ಬಾಲಕನ ಶವ ತಾಲ್ಲೂಕಿನ ಚಿಕ್ಕಹಾಲಿವಾಣ ಹಾಗೂ ಹರಿಹರ ತಾಲ್ಲೂಕು ಕೊಪ್ಪ ಗ್ರಾಮಗಳ ಮಧ್ಯೆ ನಾಲೆಯಲ್ಲಿ ಪತ್ತೆಯಾಯಿತು.