ದಾವಣಗೆರೆ: ಹೊರ ವರ್ತುಲ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಿದ್ದ ಚೌಟ್ರಿಯನ್ನು ಧೂಡಾ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ನಿಂತು ಶನಿವಾರ ತೆರವುಗೊಳಿಸಿದ್ದಾರೆ.
‘ಜಿಎಂಐಟಿ ಬಳಿ ಪಿ.ಬಿ.ರಸ್ತೆಗೆ ವರ್ತುಲ ರಸ್ತೆ ಸೇರುವ ಸ್ಥಳಕ್ಕೆ ಹತ್ತಿರದಲ್ಲಿ ವರ್ತುಲ ರಸ್ತೆಯನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. ಅದರಲ್ಲಿ ಜಬ್ಬರ್ಖಾನ್ ಎನ್ನುವವರು ಮೂರು ವರ್ಷಗಳ ಹಿಂದೆ ಎಕೆಎಸ್ ಕನ್ವಿನ್ಷನಲ್ ಹಾಲ್ ಕಟ್ಟಿದ್ದರು. ಕಟ್ಟುವ ಸಂದರ್ಭದಲ್ಲಿಯೇ ಅಧಿಕಾರಿಗಳು ನಿಲ್ಲಿಸಿದ್ದರು. ಆದರೆ ಆಗ ಸಚಿವರಾಗಿದ್ದವರು ಅನಧಿಕೃತವಾಗಿ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು. ನಾನು ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಲಾಬಿ, ಆಮಿಷಗಳಿಗೆ ಬಲಿಯಾಗದೇ ಸರ್ವೆ ಮಾಡಿಸಿ ಒತ್ತುವರಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಂಡಿದ್ದೇನೆ’ ಎಂದು ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಉದ್ದೇಶಿತ ಮಹಾಯೋಜನೆಯ ಹೊರವರ್ತುಲ ರಸ್ತೆಗೆ ಕಾಯ್ದಿರಿಸಿದ 120 ಅಡಿ ಅಗಲದ ಜಾಗದಲ್ಲಿ ನಿಯಮ ಬಾಹಿರರವಾಗಿ ಚೌಟ್ರಿ ಕಟ್ಟಿದ್ದರು. ಅವರಿಗೆ ನೋಟಿಸ್ ನೀಡಲಾಗಿತ್ತು. ಮುಕ್ಕಾಲು ಭಾಗ ಅವರೇ ತೆರವು ಮಾಡಿದ್ದರು. ಉಳಿದಿರುವುದನ್ನು ಧೂಡಾದಿಂದ ತೆರವುಗೊಳಿಸಲಾಯಿತು’ ಎಂದು ಧೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.
ಬೇತೂರು ರೋಡ್ನಿಂದ ಬಾಡಾ ಕ್ರಾಸ್ವರೆಗೆ ಏಳು ಕಿಲೋಮೀಟರ್ ಮತ್ತು ಕುಂದವಾಡ, ಬಾತಿಕೆರೆಯಾಗಿ ಯರಗುಂಟೆವರೆಗೆ ಆರು ಕಿಲೋಮೀಟರ್ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಒಟ್ಟು ₹ 320 ಕೋಟಿ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಿದ್ದೇವೆ’ ಎಂದು ರಾಜನಹಳ್ಳಿ ಶಿವಕುಮಾರ್ ವಿವರ ನೀಡಿದರು.
ತೆರವು ಕಾರ್ಯಾಚರಣೆ ಸಂದರ್ಭದಲ್ಲಿಎಇಇ ಶ್ರೀಕರ್, ಜೆಇ ಸುಜಯ್ ಕುಮಾರ್ ಧೂಡಾ ಸದಸ್ಯರಾದ ದೇವಿರಮ್ಮ, ಸೌಭಾಗ್ಯ ಮುಕುಂದ್, ಜಯರುದ್ರೇಶ್ ಅವರೂ ಇದ್ದರು.