ಹರಪನಹಳ್ಳಿ: ಕೊಟ್ಟೂರು ತಾಲ್ಲೂಕಿನ ಉಜ್ಜಯಿನಿ ಪೀಠಾಧ್ಯಕ್ಷ ಸಿದ್ದಲಿಂಗ ಶಿವಾಚಾರ್ಯ ರಾಜದೇಶಿಕೇಂದ್ರ ಸ್ವಾಮೀಜಿ ಅವರನ್ನು ಬದಲಾಯಿಸಲು ನಡೆಸಿರುವ ಹುನ್ನಾರವನ್ನು ಖಂಡಿಸುವುದು ಹಾಗೂ ಪೀಠದ ರಕ್ಷಣೆಗೆ ಹೋರಾಟ ನಡೆಸುವ ಸಂಬಂಧ ಚಿರಸ್ತಹಳ್ಳಿ ಗ್ರಾಮದ ಮುಖಂಡರು ನಿರ್ಧಾರ ಕೈಗೊಂಡರು.
ಭಾನುವಾರ ಮಹಾದೇವ ತಾತನವರ ಮಠದಲ್ಲಿ ತುರ್ತು ಸಭೆ ನಡೆಸಿದ ಗ್ರಾಮಸ್ಥರು ಈ ನಿರ್ಧಾರ ಕೈಗೊಂಡರು.ಸಭೆಯಲ್ಲಿ ಮಠದ ದೈವಸ್ಥರು ಸುದೀರ್ಘ ಚರ್ಚೆ ನಡೆಸಿದರು.
ಮುಖಂಡ ಟಿ.ಎಂ. ರಾಜಶೇಖರ್, ‘ಪೀಠದಲ್ಲಿ ಈಗಿರುವ ಸ್ವಾಮೀಜಿ ಅವರ ರಕ್ಷಣೆಗೆ ತೀರ್ಮಾನಿಸಲಾಗಿದೆ. ಪಂಚಪೀಠಗಳಿಗೆ ಇತಿಹಾಸವಿದೆ. ಅವುಗಳ ಪೀಠಾಧ್ಯಕ್ಷರಿಗೆ ಪೂಜ್ಯನೀಯ ಸ್ಥಾನ ಕೊಡಲಾಗಿದೆ. ಈಗಲೂ ಅದೇ ಭಕ್ತಿ, ಅಭಿಮಾನ ಹೊಂದಿದ್ದೇವೆ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಪೂಜ್ಯರಿಗೆ ದೀಕ್ಷೆ ನೀಡಲಾಗಿದೆ. ಈಗ ಏಕಾಏಕಿ ಸ್ವಾಮೀಜಿ ಅವರನ್ನು ವಿರೋಧಿಸುವುದು ಸರಿಯಲ್ಲ’ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಬಿ.ಎಚ್. ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಸಿ.ಮರಿಯಪ್ಪ, ವಿಎಸ್ಎಸ್ಎನ್ ಅಧ್ಯಕ್ಷ ಪರಮೇಶ್ವರಪ್ಪ, ಮಂಜುನಾಥ್, ಹೊನ್ನಪ್ಪ, ಹನುಮಂತಪ್ಪ, ಚೆನ್ನಮಲ್ಲಿಕಾರ್ಜುನ ಸ್ವಾಮಿ ಇದ್ದರು.