ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19: ಒತ್ತಡಕ್ಕೆ ಸುಸ್ತಾಗಿ ಹೋಗುತ್ತೇವೆ

Last Updated 6 ಮೇ 2021, 3:34 IST
ಅಕ್ಷರ ಗಾತ್ರ

‘ಕೊರೊನಾ ಬಗ್ಗೆ ಆರಂಭದಲ್ಲಿ ಭಯ ಇತ್ತು. ಈಗ ಅಂಥ ಭಯವಿಲ್ಲ. ಆದರೆ ತೀವ್ರ ಒತ್ತಡದಿಂದಾಗಿ ಸುಸ್ತಾಗಿ ಹೋಗುತ್ತೇವೆ’ ಎಂದು ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಶುಶ್ರೂಷಕರಾಗಿ ಕೆಲಸ ಮಾಡುತ್ತಿರುವ ಕೊರೊನಾ ವಾರಿಯರ್‌ ಉಮಾಪತಿ ತಿಳಿಸಿದ್ದಾರೆ.

23 ವರ್ಷಗಳಿಂದ ಶುಶ್ರೂಷಕರಾಗಿರುವ ಅದರಲ್ಲಿ 15 ವರ್ಷಗಳಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಇರುವ ಉಮಾಪತಿ ಅವರು ಕಳೆದ ವರ್ಷ ಕೊರೊನಾ ಸೋಂಕು ಹರಡಿದ ಬಳಿಕ ಕೊರೊನಾ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

‘ಒಂದನೇ ಅಲೆ ಬಂದಾಗ ರೋಗ ಏನು ಎಂಬುದು ಸ್ಪಷ್ಟ ಇಲ್ಲದೆಯೇ ಚಿಕಿತ್ಸೆ ನೀಡಬೇಕಿತ್ತು. ಹಾಗಾಗಿ ಎಲ್ಲರಿಗೂ ಆತಂಕ ಇತ್ತು. ಈಗ ಎರಡನೇ ಅಲೆ ಬಂದಿದೆ. ಸೋಂಕು ಏನು ಎಂಬುದು ಗೊತ್ತಾಗಿರುವುದರಿಂದ ಆತಂಕ ಕಡಿಮೆಯಾಗಿದೆ. ಆದರೆ ಒಮ್ಮೆ ಪಿಪಿಇ ಕಿಟ್‌ ಹಾಕಿದ ಮೇಲೆ ಆರೂವರೆ–ಏಳುಗಂಟೆ ತೆಗೆಯದೇ ಕೆಲಸ ಮಾಡಬೇಕು. ನೀರು ಕುಡಿಯದೇ, ಶೌಚಾಲಯಕ್ಕೂ ಹೋಗದೇ ಕೆಲಸ ಮಾಡುವುದು ಸುಲಭವಲ್ಲ’ ಎಂದು ‘ಪ್ರಜಾವಾಣಿ’ಗೆ ವಿವರ ನೀಡಿದರು.

‘ಈಗ ಒಂದೇ ಸಮನೆ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಎಷ್ಟು ಬೆಡ್‌ಗಳಿವೆ. ಭರ್ತಿಯಾದ ಬೆಡ್‌ಗಳು ಯಾವಾಗ ಖಾಲಿ ಆಗುತ್ತವೆ. ಮುಂತಾದ ಮಾಹಿತಿಗಳನ್ನು ಮೇಲಧಿಕಾರಿಗಳಿಗೆ ನಿರಂತರ ತಿಳಿಸುತ್ತಾ ಇರಬೇಕಾಗುತ್ತದೆ. ಬೆಡ್‌ಗಾಗಿ ಜನ ಕಾಯುತ್ತಿರುವುದನ್ನು ಕಂಡಾಗ ಒತ್ತಡ ಇನ್ನಷ್ಟು ಹೆಚ್ಚಾಗುತ್ತದೆ’ ಎಂದು ಹೇಳಿದರು.

‘ನನಗೀಗ 54 ವರ್ಷ. ನನ್ನ ಜತೆ ಕೆಲಸ ಮಾಡುವವರಿಗೆಲ್ಲ ಕೊರೊನಾ ಸೋಂಕು ಬಂತು. ನಾನು ಆರು ಬಾರಿ ಟೆಸ್ಟ್‌ ಮಾಡಿಸಿದೆ. ಪಾಸಿಟಿವ್‌ ಬಂದಿಲ್ಲ. ಸ್ವಲ್ಪ ಬಿ.ಪಿ. ಇದೆ. ಬೇರೇನು ಆರೋಗ್ಯ ಸಮಸ್ಯೆಯಾಗಿಲ್ಲ. 22 ವರ್ಷ ಮಾಡಿದ ಕೆಲಸಕ್ಕೂ ಕಳೆದ ಒಂದು ವರ್ಷದಿಂದ ಮಾಡಿದ ಕೆಲಸಕ್ಕೂ ಅಜಗಜ ವ್ಯತ್ಯಾಸ ಇದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT