ಕಡರನಾಯ್ಕನಹಳ್ಳಿ: ಸುತ್ತಮುತ್ತಲಿನ ಪ್ರದೇಶದಲ್ಲಿ ಎರಡು ದಿನಗಳಿಂದ ಸುರಿದ ಗಾಳಿ ಸಹಿತ ಮಳೆಗೆ ತೋಟಗಳಲ್ಲಿ ಅಡಿಕೆ ಅಡಿಕೆ ಮರಗಳು ನೆಲಕ್ಕುರುಳಿವೆ.
ಮಾಗೋಡು ತಿಪ್ಪಣ್ಣ, ಸಂತೋಷ್ ಸಿರಿಗೆರೆ, ಕಡ್ಲೆಪ್ಳ ಮರುಳಸಿದ್ದಪ್ಪ, ನಲ್ಕುದರೆ ತೀರ್ಥಪ್ಪ, ನಿಬಗೂರ ತಿಪ್ಪೇಶ್ ಮೇಷ್ಟ್ರು ಅವರಿಗೆ ಸೇರಿದ ತೋಟಗಳಲ್ಲಿ ಫಸಲಿಗೆ ಬಂದ ಅಡಿಕೆ ಮರಗಳು ನೆಲಕ್ಕುರುಳಿವೆ. ಗಾಳಿಯ ಹೊಡೆತಕ್ಕೆ ಇನ್ನೂ ಕೆಲವು ಮರಗಳು ಬಾಗಿದ್ದು, ರೈತರು ಆತಂಕಪಡುವಂತಾಗಿದೆ.
ಅಲ್ಲಲ್ಲಿ ಮರ ಉರುಳಿ, ಕೊಂಬೆ–ರೆಂಬೆಗಳು ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ತಡರಾತ್ರಿಯವರೆಗೆ ಗ್ರಾಮಗಳಲ್ಲಿ ಕತ್ತಲು ಆವರಿಸಿತ್ತು. ಬೆಸ್ಕಾಂ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿದರು.
‘ಇಷ್ಟು ದಿನ ಮಳೆ ಇರಲಿಲ್ಲ, ಭದ್ರಾ ನಾಳೆಯ ನೀರೂ ಸಿಗಲಿಲ್ಲ. ಅಂತರ್ಜಲ ಕಡಿಮೆ ಇದ್ದರೂ ಸಹ ಬೋರ್ವೆಲ್ ಬಳಸಿ ಅಡಿಕೆ ಗಿಡಗಳನ್ನು ರಕ್ಷಣೆ ಮಾಡಿದ್ದೆವು. ಮಳೆ ಬಂದಾಗ ಸಂತೋಷವಾಯಿತು. ಆದರೆ ಮಳೆ, ಗಾಳಿಯಿಂದ ಫಸಲಿಗೆ ಬಂದ ಅಡಿಕೆ ಮರಗಳಿಗೆ ಹಾನಿಯಾಗಿದೆ. ಸರ್ಕಾರ ಪರಿಹಾರ ನೀಡಬೇಕು’ ಎಂದು ರೈತರಾದ ಮಾಗೋಡು ತಿಪ್ಪಣ್ಣ ಹಾಗೂ ಇತರರು ಆಗ್ರಹಿಸಿದ್ದಾರೆ.
ಗಾಳಿ, ಮಳೆಗೆ ಬಿದ್ದ ಅಡಿಕೆ ಮರಗಳಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ ಎಂದು ತೋಟಗಾರಿಕೆ ಇಲಾಖೆಯ ಎ.ಎಚ್.ಓ ಸಂತೋಷ್ ತಿಳಿಸಿದ್ದಾರೆ.