ದಾವಣಗೆರೆ: ಹೋರಾಟದ ಹಾದಿಯನ್ನು ಮುಂದುವರಿಸಲು ಹುತಾತ್ಮರ ಆದರ್ಶ ದಾರಿದೀಪವಾಗಬೇಕು. ಅವರ ಆದರ್ಶಗಳನ್ನು ಮುಂದುವರಿಸಬೇಕು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ ಆವರಗೆರೆ ಚಂದ್ರು ಹೇಳಿದರು.
ಸಿಪಿಐ ಮತ್ತು ಎಐಟಿಯುಸಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಆವರಗೆರೆಯಲ್ಲಿ ಶನಿವಾರ ನಡೆದ ಶೇಖರಪ್ಪ, ಸುರೇಶ್ ಅವರ 53ನೇ ವರ್ಷದ ಹುತಾತ್ಮರ ದಿನಾಚರಣೆ ಮತ್ತು ಮಾಜಿ ಶಾಸಕ ಪಂಪಾಪತಿಯವರ 21ನೇ ವರ್ಷದ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶೇಖರಪ್ಪ ಮತ್ತು ಸುರೇಶ್ ಕಾರ್ಮಿಕರ ಸಂಘಟನೆ ಕಟ್ಟಿ, ಕಾರ್ಮಿಕರ ಹಕ್ಕುಗಳನ್ನು ಕೊಡಿಸುವಲ್ಲಿ ಮುಂದಾದಾಗ ಮಾಲೀಕರ ಕುತಂತ್ರಕ್ಕೆ ಬಲಿಯಾಗಿ ಹುತಾತ್ಮರಾದರು. ಸಾಮಾನ್ಯ ಕಾರ್ಮಿಕರಾಗಿದ್ದ ಪಂಪಾಪತಿ ನಗರಸಭಾ ಸದಸ್ಯರಾಗಿ, ಅಧ್ಯಕ್ಷರಾಗಿ ನಂತರ ದಾವಣಗೆರೆ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಜನಪರವಾಗಿ ಕೆಲಸ ಮಾಡಿದ್ದರು. ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ಸ್ಮರಿಸಿದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ರಾಘವೇಂದ್ರ ನಾಯರಿ ಮಾತನಾಡಿ, ‘ಹಿಂದೆಂದಿಗಿಂತಲೂ ಇಂದು ಕಾರ್ಮಿಕ ವರ್ಗ ಬಹಳ ಎಚ್ಚರಿಕೆಯಿಂದ ಮುನ್ನಡೆಯಬೇಕಾಗಿದೆ. ದುಡಿಯುವ ಜನರ ಮೇಲೆ ಆಳುವ ಸರ್ಕಾರಗಳು ಮತ್ತು ಮಾಲೀಕ ವರ್ಗದಿಂದ ನಿರಂತರ ಶೋಷಣೆ ನಡೆಯುತ್ತಿದೆ’ ಎಂದು ಹೇಳಿದರು.
ದುಡಿಯುವ ವರ್ಗ ಹೆಚ್ಚು ಪ್ರಜ್ಞಾವಂತರಾಗಿ ಮುಂದುವರಿಯಬೇಕು. ತ್ಯಾಗ ಬಲಿದಾನಗಳಿಂದ ಕಟ್ಟಿದ ನಮ್ಮ ಸಂಘಟನೆಗಳನ್ನು ಹೆಚ್ಚು ಬಲಪಡಿಸುವುದರ ಮೂಲಕ ಮುನ್ನಡೆಸಿಕೊಂಡು ಹೋಗಬೇಕು ಎಂದರು.
ಬ್ಯಾಂಕ್ ನೌಕರರ ಸಂಘಟನೆಯ ಜಿಲ್ಲಾಧ್ಯಕ್ಷ ಬಿ. ಆನಂದಮೂರ್ತಿ, ಷಣ್ಮುಖ ಸ್ವಾಮಿ, ಎಂ.ಬಿ. ಶಾರದಮ್ಮ, ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಆವರಗೆರೆ ವಾಸು ಮಾತನಾಡಿದರು.
ಎಐಟಿಯುಸಿ ರಾಜ್ಯ ವರ್ಕಿಂಗ್ ಕಮಿಟಿ ಸದಸ್ಯರಾದ ಆನಂದ ರಾಜ್ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಎಚ್.ಜಿ. ಉಮೇಶ್, ಟಿ.ಎಸ್. ನಾಗರಾಜ್, ಜಿ.ಎಸ್. ಬಸವರಾಜ್, ವಿ. ಲಕ್ಷ್ಮಣ, ಜಿ. ಎಲ್ಲಪ್ಪ, ಜ್ಯೋತಿ ಲಕ್ಷ್ಮಿ, ಟಿ.ಎಚ್. ನಾಗರಾಜ್, ಜಯಪ್ಪ, ಕೆ.ಜಿ. ಶಿವಮೂರ್ತಿ, ಎಸ್.ಎಸ್. ಮಲ್ಲಮ್ಮ, ವಿಶಾಲಾಕ್ಷಿ, ಮಹಮ್ಮದ್ ರಫೀಕ್ ಮುಂತಾದವರು ಇದ್ದರು.
ಇಫ್ಟಾ ಕಲಾವಿದರಾದ ಐರಣಿ ಚಂದ್ರು, ಕುಕ್ಕವಾಡ ಮಹಾಂತೇಶ್ ಬಳಗ ಜಾಗೃತಿ ಗೀತೆ ಹಾಡಿದರು. ಕೆ. ಬಾನಪ್ಪ ಸ್ವಾಗತಿಸಿದರು. ಎ. ತಿಪ್ಪೇಶ್ ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.