ಮಾಯಕೊಂಡ: ಕೃಷಿ ಭಾಗ್ಯ ಯೋಜನೆ ರೈತರಿಗೆ ವರದಾನವಾಗಿದೆ. ಯೋಜನೆಯ ಸದ್ಬಳಕೆಯಿಂದ ಸ್ವಾವಲಂಬಿ ಜೀವನ ನಡೆಸಬಹುದಾಗಿದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ತಿಳಿಸಿದರು.
ಸಮೀಪದ ಆನಗೋಡು ಗ್ರಾಮದಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ 2023-24 ನೇ ಸಾಲಿನ ಕೃಷಿ ಭಾಗ್ಯ ಯೋಜನೆಯಡಿ ಆಯ್ಕೆಯಾದ ರೈತ ವಿಶ್ವವಿಜೇತ ಎಂಬುವವರ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಮಳೆಯಾಧಾರಿತ ಕೃಷಿ ಮಾಡುವ ರೈತರಿಗೆ ನೀರಿನ ಸಮಸ್ಯೆಯನ್ನು ನಿವಾರಿಸಲು ಸರ್ಕಾರ ಕೃಷಿ ಭಾಗ್ಯ ಯೋಜನೆ ಪ್ರಾರಂಭಿಸಿದೆ. ಸಹಾಯಧನದೊಂದಿಗೆ ಜಾರಿಯಾಗಿರುವ ಕೃಷಿಹೊಂಡವನ್ನು ನಿರ್ಮಿಸಿಕೊಂಡು ನೀರಿನ ಸಮಸ್ಯೆಯನ್ನು ದೂರವಾಗಿಸಬೇಕು ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ಶ್ರೀಧರ್ಮೂರ್ತಿ ಮಾತನಾಡಿ, ಇಲಾಖೆ ರೈತರ ನೆರವಿಗೆ ಸದಾ ಇರುತ್ತದೆ. ರೈತರು ಅಧಿಕಾರಿಗಳ ಸಲಹೆ ಪಡೆದು ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಈ ವೇಳೆ ಕೃಷಿ ಅಧಿಕಾರಿ ಶ್ರೀನಿವಾಸ್ ಆರ್., ಎಸ್.ಬಿ. ಯೋಗೇಶಪ್ಪ, ಹುಣ್ಸೆಹಳ್ಳಿ ಚಂದ್ರಪ್ಪ, ಆರ್.ವಿ.ತೇಜವರ್ಧನ್, ರೈತ ವಿಶ್ವವಿಜೇತ ಆನಗೋಡು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಇದ್ದರು.