ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಜ.26ಕ್ಕೆ ನವೀಕೃತ ರೈಲುನಿಲ್ದಾಣ ಲೋಕಾರ್ಪಣೆ-ಸಂಸದ ಸಿದ್ದೇಶ್ವರ

ಪ್ರಯಾಣಿಕರ ಅನುಕೂಲಕ್ಕಾಗಿ ಎಕ್ಸಲೇಟರ್‌ ಸೌಲಭ್ಯ
Last Updated 20 ನವೆಂಬರ್ 2020, 13:46 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ರೈಲುನಿಲ್ದಾಣ ಅಭಿವೃದ್ಧಿ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದ್ದು, ಜನವರಿ 26ಕ್ಕೆ ನವೀಕೃತ ರೈಲುನಿಲ್ದಾಣವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದರು.

ಅಶೋಕ ರಸ್ತೆಯ ಬಳಿ ನಿರ್ಮಿಸಲು ಉದ್ದೇಶಿಸಿರುವ ರೈಲ್ವೆ ಕೆಳಸೇತುವೆ (ಆರ್‌ಯುಬಿ) ಸ್ಥಳ ಹಾಗೂ ಡಿಸಿಎಂ ರೈಲ್ವೆ ಕೆಳಸೇತುವೆ, ರೈಲುನಿಲ್ದಾಣದ ಕಾಮಗಾರಿಗಳನ್ನು ಶುಕ್ರವಾರ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸಂಸದರು ಈ ವಿಷಯ ಪ್ರಕಟಿಸಿದರು.

ರೈಲುನಿಲ್ದಾಣದ ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಮುಗಿದಿದ್ದು, ಒಳಾಂಗಣ ವಿನ್ಯಾಸ ಕೈಗೊಳ್ಳುವುದು ಮಾತ್ರ ಬಾಕಿ ಇದೆ. ಗಣರಾಜ್ಯೋತ್ಸವ ದಿನದಂದು ನಿಲ್ದಾಣದ ನೂತನ ಕಟ್ಟಡ ಲೋಕಾರ್ಪಣೆ ಮಾಡಲು ರೈಲ್ವೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು.

ಪ್ಲಾಟ್‌ಫಾರಂಗಳಿಗೆ ಹೋಗಿ ಬರಲು ಪ್ರಯಾಣಿಕರ ಅನುಕೂಲಕ್ಕಾಗಿ ಎರಡು ಕಡೆಯೂ ಸ್ವಯಂ ಚಾಲಿತ ಮೆಟ್ಟಿಲುಗಳ (ಎಕ್ಸಲೇಟರ್‌) ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಎರಡು ಕಡೆ ಮೇಲಕ್ಕೆ ಹೋಗಲು ಹಾಗೂ ಕೆಳಗೆ ಇಳಿಯಲು ಎಕ್ಸಲೇಟರ್‌ ನಿರ್ಮಿಸಲಾಗುತ್ತಿದೆ ಎಂದು ಸಂಸದರು ತಿಳಿಸಿದರು.

ಡಿಸಿಎಂ ಟೌನ್‌ಷಿಪ್‌ ಬಳಿಯ ರೈಲ್ವೆ ಕೆಳಸೇತುವೆ ನಿರ್ಮಾಣ ಕಾರ್ಯವು ಡಿಸೆಂಬರ್‌ 31ರೊಳಗೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಸೇತುವೆ ಕೆಳಭಾಗದಲ್ಲಿ ನೀರು ನಿಲ್ಲದಂತೆ ಚರಂಡಿ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ನೂತನ ಉಪವಿಭಾಗಾಧಿಕಾರಿ ಕಚೇರಿ ನಿರ್ಮಿಸಲು ರಾಜ್ಯ ಸರ್ಕಾರ ₹ 5 ಕೋಟಿ ಅನುದಾನ ನೀಡಿದೆ. ಸದ್ಯ ಇರುವ ಉಪವಿಭಾಗಾಧಿಕಾರಿ ಕಚೇರಿಯ 3 ಎಕರೆ ಜಾಗವನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗುತ್ತಿದ್ದು, ಅದಕ್ಕೆ ಬದಲಾಗಿ ರೈಲ್ವೆ ಇಲಾಖೆ ಬಾತಿ ಬಳಿ ಜಾಗ ನೀಡುತ್ತಿದೆ. ಆ ಜಾಗದಲ್ಲಿ ಎಸ್‌ಟಿಪಿ ಘಟಕ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸಂಸದರು ಮಾಹಿತಿ ನೀಡಿದರು.

ತೋಳಹುಣಸೆಯ 193 ರೈಲ್ವೆ ಗೇಟ್‌ ಬಂದ್‌ ಮಾಡುವುದರಿಂದ ಗ್ರಾಮದ ಶಾಲಾ ಮಕ್ಕಳಿಗೆ ಹಾಗೂ ವೃದ್ಧರಿಗೆ ತೊಂದರೆಯಾಗಲಿದೆ. ರೈಲ್ವೆ ಮೇಲ್ಸೇತುವೆ ಮೇಲೆ ನಡೆದುಕೊಂಡು ಹೋದರೆ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ರೈಲ್ವೆ ಗೇಟ್‌ ಜಾಗದಲ್ಲಿ ನಡೆದುಕೊಂಡು ಹೋಗಲು ಕೆಳಸೇತುವೆ ನಿರ್ಮಿಸಬೇಕು. ಈ ಬಗ್ಗೆ ಇಲಾಖೆಗೆ ಪ್ರಸ್ತಾವ ಕಳುಹಿಸಿಕೊಡಿ ಎಂದು ಸಂಸದರು ಅಧಿಕಾರಿಗಳಿಗೆ ಸೂಚಿಸಿದರು.

ಮೇಯರ್‌ ಬಿ.ಜಿ. ಅಜಯ್‌ಕುಮಾರ್‌, ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ರೈಲ್ವೆ ಇಲಾಖೆಯ ಡೆಪ್ಯುಟಿ ಚೀಫ್‌ ಎಂಜಿನಿಯರ್‌ ದೇವೇಂದ್ರ ಗುಪ್ತಾ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಿಂಗಳೊಳಗೆ ರೈತರಿಗೆ ಪರಿಹಾರ

ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗ ನಿರ್ಮಾಣಕ್ಕಾಗಿ 226 ಎಕರೆಯನ್ನು ಭೂಸ್ವಾಧೀನ ಮಾಡಿಕೊಳ್ಳಲು ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. 10 ದಿನಗಳ ಒಳಗೆ ಅದಕ್ಕೆ ಒಪ್ಪಿಗೆ ಸಿಗಲಿದ್ದು, ತಕ್ಷಣವೇ ಭೂಸ್ವಾಧೀನ ಮಾಡಿಕೊಂಡು ರೈಲ್ವೆ ಇಲಾಖೆಗೆ ಭೂಮಿ ಹಸ್ತಾಂತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

‘ಅಂತಿಮ ಅಧಿಸೂಚನೆಗೆ ಒಪ್ಪಿಗೆ ಸಿಕ್ಕಿದ ತಕ್ಷಣವೇ ಒಂದು ತಿಂಗಳ ಒಳಗೆ ರೈತರಿಗೆ ಪರಿಹಾರ ವಿತರಿಸಲಾಗುವುದು. ಪರಿಹಾರ ವಿತರಿಸುವ ಸಲುವಾಗಿ ಈಗಾಗಲೇ ₹ 60 ಕೋಟಿ ಲಭ್ಯವಿದೆ. ಹೆಚ್ಚುರಿಯಾಗಿ 26 ಎಕರೆ ಭೂಸ್ವಾಧೀನಪಡಿಸಿಕೊಳ್ಳಲು ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ’ ಎಂದು ವಿಶೇಷ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್‌ ಮಾಹಿತಿ ನೀಡಿದರು.

ಆರ್‌ಯುಬಿ ಶೀಘ್ರ ನಿರ್ಮಾಣ

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಅಶೋಕ ರೈಲ್ವೆ ಗೇಟ್‌ ಬಳಿ ಕೆಳಸೇತುವೆ (ಆರ್‌ಯುಬಿ) ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ.

ಅಶೋಕ ರೈಲ್ವೆ ಗೇಟ್‌ನಿಂದ ಸುಮಾರು 60 ಮೀಟರ್‌ ದೂರದಲ್ಲಿ ಕಾರು ಹಾಗೂ ಬೈಕ್‌ ಸಂಚರಿಸಲು ಅನುಕೂಲವಾಗುವಂತೆ 7.5 ಮೀಟರ್‌ ಅಗಲ ಹಾಗೂ 3 ಮೀಟರ್‌ ಎತ್ತರದ ಕೆಳಸೇತುವೆ ನಿರ್ಮಿಸಲು ರೈಲ್ವೆ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು, ಸಂಸದ ಸಿದ್ದೇಶ್ವರ ಶುಕ್ರವಾರ ಸ್ಥಳ ಪರಿಶೀಲಿಸಿದರು.

10 ದಿನದೊಳಗೆ ವಿದ್ಯುತ್‌ ತಂತಿ ಸ್ಥಳಾಂತರ ಕಾಮಗಾರಿಯನ್ನು ಬೆಸ್ಕಾಂ ಪೂರ್ಣಗೊಳಿಸುವ ನಿರೀಕ್ಷೆ ಇದ್ದು, ಆ ಬಳಿಕ ಇಲ್ಲಿ ರೈಲ್ವೆ ಇಲಾಖೆ ಆರ್‌ಯುಬಿಯ ಬಾಕ್ಸ್‌ ಕೂರಿಸಲಿದೆ.

ಈ ರೈಲ್ವೆ ಕೆಳಸೇತುವೆಯಿಂದ ಸುಮಾರು 300 ಮೀಟರ್‌ ಕೆಳಭಾಗದಲ್ಲಿ 7.5 ಮೀಟರ್‌ ಅಗಲ ಹಾಗೂ 4.5 ಮೀಟರ್‌ ಎತ್ತರದ ಆರ್‌ಯುಬಿಯನ್ನು ಹೋಗುವ ಹಾಗೂ ಬರುವ ಸಲುವಾಗಿ ಪ್ರತ್ಯೇಕವಾಗಿ ನಿರ್ಮಿಸಲು ಉದ್ದೇಶಿಸಲಾಗಿದೆ. ಇಲ್ಲಿ ಲಾರಿಯಂತಹ ಭಾರಿ ವಾಹನಗಳೂ ಸಂಚರಿಸಬಹುದಾಗಿದೆ

‘ದೊಡ್ಡ ಆರ್‌ಯುಬಿ ನಿರ್ಮಿಸಲು ನಾಲ್ಕು ಜನರ ಜಾಗ ಭೂಸ್ವಾಧೀನ ಪಡಿಸಿಕೊಳ್ಳಬೇಕಾಗಿದ್ದು, ಮೂವರು ಜಾಗ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ನ.25ರೊಳಗೆ ಪಾಲಿಕೆ ಆಯುಕ್ತರು ಮತ್ತೊಮ್ಮೆ ಜಮೀನಿನ ಮಾಲೀಕರೊಂದಿಗೆ ಮಾತುಕತೆ ನಡೆಸಿ, ಒಪ್ಪಿಗೆ ಪಡೆದು ಶೀಘ್ರದಲ್ಲೇ ಜಾಗವನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗುವುದು. ಆ ಬಳಿಕ ರೈಲ್ವೆ ಇಲಾಖೆ ಕಾಮಗಾರಿ ಆರಂಭಿಸಬೇಕು’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT