ದಾವಣಗೆರೆ: ‘ನನಗೆ ಇಲ್ಲವೇ ನಮ್ಮ ಕುಟುಂಬದವರಿಗೆ ದಾವಣಗೆರೆ ಲೋಕಸಭಾ ಸಭೆಗೆ ಟಿಕೆಟ್ ಸಿಗುವುದು ಖಚಿತ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಇಲ್ಲಿನ ಜಯದೇವ ವೃತ್ತದಲ್ಲಿ ಭಾರತ್ ರೈಸ್ ಯೋಜನೆಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಟಿಕೆಟ್ ತಪ್ಪಿಸಲು ಯಾರು ಏನಾದರೂ ಪ್ರಯತ್ನ ಮಾಡಿದರೂ ತೊಂದರೆ ಇಲ್ಲ. ಬಿಜೆಪಿ ಟಿಕೆಟ್ ನಮ್ಮ ಕುಟುಂಬಕ್ಕೆ ಸಿಗುವುದು ಪಕ್ಕಾ. ನಾನಂತೂ ದೆಹಲಿಗೆ ಹೋಗುವುದಿಲ್ಲ’ ಎಂದರು.
‘ಟಿಕೆಟ್ ಯಾರಿಗೆ ನೀಡಬೇಕು ಎಂಬುದು ಚರ್ಚೆಯಾಗುತ್ತಿದೆ. ಈಗಾಗಲೇ ಬಿ.ಎಸ್. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ಜೆ ಪಿ. ನಡ್ಡಾ, ಅಮಿತ್ ಶಾ ಅವರು ಭರವಸೆ ನೀಡಿದ್ದಾರೆ. ಹೈಕಮಾಂಡ್ ಸಮೀಕ್ಷೆಯಲ್ಲೂ ನನ್ನ ಹೆಸರು ಮುಂದಿದೆ. ನಾನೇ ಸ್ಪರ್ಧಿಸಬೇಕು ಎಂಬುದು ಜನರ ಅಪೇಕ್ಷೆಯಾಗಿದೆ’ ಎಂದರು.
‘₹29ಕ್ಕೆ ಒಂದು ಕೆ.ಜಿ.ಯಂತೆ 10 ಕೆ.ಜಿ. ಅಕ್ಕಿ ವಿತರಿಸುತ್ತಿದ್ದು, ದಾವಣಗೆರೆಯಲ್ಲಿ ಈಗಾಗಲೇ ಎರಡು ಬಾರಿ ಅಕ್ಕಿ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ತಾಲ್ಲೂಕುಗಳಲ್ಲೂ ವಿತರಣೆ ಮಾಡಲಾಗುವುದು. ಇದೇ ನರೇಂದ್ರಮೋದಿಯವರ ಗ್ಯಾರಂಟಿ ಯೋಜನೆ. ಕೊರೊನಾ ವೇಳೆ ಉಚಿತವಾಗಿ 10 ಕೆ.ಜಿ. ವಿತರಣೆ ಮಾಡಲಾಗಿತ್ತು. ಈಗಲೂ ಕೇಂದ್ರದಿಂದ 5ಕೆ.ಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ನಾಗಪ್ಪ, ಮಹಾನಗರ ಪಾಲಿಕೆ ಸದಸ್ಯ ಎಸ್.ಟಿ.ವೀರೇಶ್ ಇತರರು ಇದ್ದರು.