ದಾವಣಗೆರೆ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣದ ತನಿಖೆಯನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ನಿಗಮದ ಅಧ್ಯಕ್ಷ ನಾಗೇಂದ್ರ ರಾಜೀನಾಮೆ ನೀಡಬೇಕು’ ಎಂದು ವಕೀಲ ಗುಮ್ಮನೂರು ಮಲ್ಲಿಕಾರ್ಜುನಪ್ಪ ಆಗ್ರಹಿಸಿದರು.
‘ನಿಗಮದಲ್ಲಿ ₹187.33 ಕೋಟಿ ಅವ್ಯವಹಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಅಧೀಕ್ಷಕ ಚಂದ್ರಶೇಖರನ್ ಅವರು ಬರೆದಿಟ್ಟ ಡೆತ್ನೋಟ್ ಆಧಾರದಡಿ ನಿಗಮದ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಲ್ಲರ ವಿರುದ್ಧ ಅಧಿಕಾರ ದುರ್ಬಳಕೆ ಹಿನ್ನೆಲೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
‘ಗಂಗಾ ಕಲ್ಯಾಣ ಯೋಜನೆ, ಸ್ವಯಂ ಉದ್ಯೋಗ, ಶಿಕ್ಷಣಕ್ಕೆ ಮಹತ್ವ ನೀಡಬೇಕಿದ್ದ ಎಸ್ಟಿ ನಿಗಮದಲ್ಲಿ ಹಣ ದುರ್ಬಳಕೆಯಾಗಿದೆ. ಬಡವರಿಗೆ ಸಲ್ಲಬೇಕಾದ ಹಣವನ್ನು ನಕಲಿ ದಾಖಲೆ ಸೃಷ್ಟಿಸಿ ಪಡೆಯಲಾಗಿದೆ. ಎಸ್ಟಿ ಜನರ ಬದಲಾಗಿ ಮೇಲ್ವರ್ಗದವರಿಗೂ ಈ ಹಣ ಬಳಕೆಯಾಗಿದೆ’ ಎಂದು ದೂರಿದರು.
‘ಸಮಾಜದ ಜನಪ್ರತಿನಿಧಿಗಳು, ಸ್ವಾಮೀಜಿಗಳು ಇಷ್ಟು ದೊಡ್ಡ ಹಗರಣದ ವಿರುದ್ಧ ಬಾಯಿ ಬಿಡುತ್ತಿಲ್ಲ. ಅವರಿಗೆ ಸಮಾಜದ ಬಗ್ಗೆ ಕಾಳಜಿ ಇಲ್ಲ. ಸ್ವಾಮೀಜಿಯೊಬ್ಬರು ಎಸ್ಟಿ ಫಲಾನುಭವಿಯ ಪಟ್ಟಿ ತಯಾರು ಮಾಡಿ ನಿಗಮಕ್ಕೆ ಕಳುಹಿಸಿರುವ ಸಾಧ್ಯತೆ ಇದೆ’ ಎಂದು ಆರೋಪಿಸಿದರು.
‘ಇದೇ ರೀತಿಯಲ್ಲಿ ಹಣ ಬಿಡುಗಡೆಗೆ ಅಧಿಕಾರಿಗಳು ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ 2023ರಲ್ಲಿ ಧಾರವಾಡದ ಪರಿಶಿಷ್ಟ ಪಂಗಡ ಇಲಾಖೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ವಿಷ ಸೇವಿಸಿ ಪಾಯದಿಂದ ಪಾರಾಗಿದ್ದಾರೆ. ಅವರು ದೂರು ಸಲ್ಲಿಸಿದ್ದರು. ಅವ್ಯವಹಾರಕ್ಕೆ ಸ್ಪಂದಿಸದ ಕಾರಣಕ್ಕೆ ಆ ಮಹಿಳೆಯನ್ನು ಅಮಾನತು ಮಾಡಲಾಗಿತ್ತು’ ಎಂದರು.
‘ಅವ್ಯವಹಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಸಾಕ್ಷಾೃಧಾರ ಒದಗಿಸಿ ಮುಂದೆ ಈ ರೀತಿಯ ಘಟನೆ ಮರುಕಳಿಸುವಂತೆ ಸರ್ಕಾರ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.