ಮಾಯಕೊಂಡ: ಮಳೆಯ ಕೊರತೆ, ತೀವ್ರ ಬರದಿಂದ ಅಂತರ್ಜಲ ಪಾತಾಳ ತಲುಪಿದೆ. ಕೊಳವೆ ಬಾವಿಗಳಲ್ಲಿ ನೀರು ಸಂಪೂರ್ಣ ಖಾಲಿಯಾಗಿದ್ದು, ಅಡಕೆ ತೋಟಗಳು ಒಣಗಿ ಸುಳಿ ಮುರಿದು ಬೀಳುತ್ತಿವೆ.
ದಾವಣಗೆರೆ ತಾಲ್ಲೂಕಿನಾದ್ಯಂತ ಅಂತರ್ಜಲ ಮಟ್ಟ ಕುಸಿತದಿಂದ ಕಳೆದ 4–6 ತಿಂಗಳಿಂದ ರೈತರು ತಮ್ಮ ಅಡಿಕೆ ತೋಟಗಳನ್ನ ಉಳಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನ ಮಾಡುತ್ತಾ ಬಂದಿದ್ದರು. ಆದರೆ, ಈಗ ಹಲವು ರೈತರು ಅಡಕೆ ತೋಟ ಉಳಿಸಿಕೊಳ್ಳುವ ‘ದುಬಾರಿ’ ಪ್ರಯತ್ನಕ್ಕೆ ಇತಿಶ್ರೀ ಆಡುತ್ತಿದ್ದಾರೆ.
ಏಪ್ರಿಲ್ ತಿಂಗಳಿನಲ್ಲಿ ಒಂದೆರಡು ಬಾರಿ ಮಳೆಯ ವಾತಾವರಣ ಇದ್ದುದರಿಂದ ರೈತರಲ್ಲಿ ಮಳೆ ಬೇಗ ಬರಬಹುದೆಂಬ ಆಶಾಭಾವನೆ ಇತ್ತು. ಆದರೆ, ಇದುವರೆಗೂ ಉತ್ತಮ ಮಳೆಯಾಗಿಲ್ಲ. ಮೇ ತಿಂಗಳ ಮೊದಲ ವಾರದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದ್ದು, ರೈತರ ಸ್ಥಿತಿ ಹೇಳತೀರದಾಗಿದೆ.
ಟ್ಯಾಂಕರ್ ನೀರಿಗೆ ಬೇಡಿಕೆ:
ರೈತರ ಕೊಳವೆ ಬಾವಿಯ ನೀರು ಖಾಲಿಯಾದಾಗಿನಿಂದ ಬೇರೆ ರೈತರ ಜಮೀನಿನಲ್ಲಿ ಸಿಗುವ ಕೊಳವೆಬಾವಿಗಳ ನೀರಿಗೆ ಬೇಡಿಕೆ ಹೆಚ್ಚಿದೆ. ನೀರು ಖರೀದಿಸಿ ಪ್ರತಿದಿನ ದಿನ ಟ್ಯಾಂಕರ್ ಮೂಲಕ ತಂದು ಕೃಷಿ ಹೊಂಡಗಳಿಗೆ ತುಂಬಿಸಿ ತೋಟಗಳಿಗೆ ಉಣಿಸುತ್ತಿದ್ದಾರೆ. ಟ್ಯಾಂಕರ್ಗಳ ಸಂಖ್ಯೆ ಹೆಚ್ಚಿದ್ದು, ಎಷ್ಟು ಹಣ ನೀಡಿದರೂ ಟ್ಯಾಂಕರ್ ಬಾಡಿಗೆಗೆ ಸಿಗುತ್ತಿಲ್ಲ. ಸದ್ಯ ನೀರು ಸಿಗುತ್ತಿದ್ದ ಕೆಲ ಕೊಳವೆಬಾವಿಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ.
‘ಈಗಾಗಲೇ ಲಕ್ಷಾಂತರ ರೂಪಾಯಿ ವ್ಯಯಿಸಿ ಟ್ಯಾಂಕರ್ ಮೂಲಕ ನೀರು ಖರೀದಿಸಿ ತೋಟಗಳಿಗೆ ಉಣಿಸುತ್ತಿದ್ದೇವೆ. ಆದರೂ, ಅಡಕೆ ಬೆಳೆ ಉಳಿಸಿಕೊಳ್ಳುವ ಭರವಸೆಯೇ ಇಲ್ಲದಂತಾಗಿದೆ’ ಎನ್ನುತ್ತಾರೆ ಬಾವಿಹಾಳು ಗ್ರಾಮದ ರವಿ, ಹರೀಶ್, ಶರಣ್.
ತಗ್ಗಿದ ಪ್ರಮಾಣ:
ಇದೇ ವರ್ಷದ ಜನವರಿ, ಫೆಬ್ರುವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಅತೀ ಹೆಚ್ಚು ಕೊಳವೆಬಾವಿಗಳನ್ನು ಕೊರೆಸಲಾಗಿತ್ತು. ಒಂದು ಅಡಿ ಕೊರೆಯಲು ₹ 125 ದರ ನಿಗದಿಯಾಗಿತ್ತು. ಆದರೆ, ಸಾವಿರ ಅಡಿ ಕೊರೆದರೂ ನೀರು ಸಿಗದ ಕಾರಣ, ಇದೀಗ ಕೊಳವೆಬಾವಿ ಕೊರೆಸುವವರ ಸಂಖ್ಯೆ ತಗ್ಗಿದೆ.
ದಾವಣಗೆರೆ ತಾಲ್ಲೂಕಿನ ಎಲ್ಲ ಹೋಬಳಿಗಳಲ್ಲಿ ನೀರಿಲ್ಲದೆ ಅಡಕೆ ಸೇರಿದಂತೆ ತೋಟಗಾರಿಕೆ ಬೆಳೆಗಳು ಸಂಪೂರ್ಣ ಒಣಗಿವೆ. ಇನ್ನು ಹಲವು ತೋಟಗಳು ಈಗಲೋ, ಆಗಲೋ ಎನ್ನುವಂತ ಸ್ಥಿತಿಗೆ ಬಂದು ನಿಂತಿವೆ. ಶೀಘ್ರವೇ ಮಳೆ ಬಂದರೆ ಮಾತ್ರವೇ ರೈತರ ತೋಟಗಳು ಉಳಿಯುವ ಸಾಧ್ಯತೆ ಇದೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.