ಹರಿಹರ: ಸ್ನಾನ ಮಾಡಲೆಂದು ಗ್ಯಾಸ್ ಗೀಸರ್ ಆನ್ ಮಾಡಿದಾಗ ಸ್ಫೋಟಗೊಂಡು ಗಾಯಗೊಂಡಿದ್ದ ಪತ್ರಕರ್ತ ರಾಘವೇಂದ್ರ(42) ಗುರುವಾರ ಮೃತಪಟ್ಟಿದ್ದಾರೆ.
ಶನಿವಾರ ಈ ದುರ್ಘಟನೆ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಎಸ್ ಎಸ್ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಒಯ್ಯಲಾಗಿತ್ತು. ಅಲ್ಲಿ ಗುರುವಾರ ಮುಂಜಾನೆ ಮೃತಪಟ್ಟಿದ್ದರು.
ಹರಿಹರ ವಿದ್ಯಾನಗರ ನಿವಾಸಿಯಾದ ಅವರು ಆರಂಭದಲ್ಲಿ ಪತ್ರಿಕಾ ಏಜೆಂಟ್ ಆಗಿದ್ದರು. ಬಳಿಕ ಪತ್ರಕರ್ತರಾಗಿದ್ದರು. ಒಂದು ದಶಕಕ್ಕೂ ಅಧಿಕ ಸಮಯ 'ಪ್ರಜಾವಾಣಿ' ಅರೆಕಾಲಿಕ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಇತ್ತೀಚೆಗೆ ಪಾಲುದಾರಿಕೆಯಲ್ಲಿ ಹೋಟೆಲ್ ಆರಂಭಿಸಿದ್ದರು.
ಅವರಿಗೆ ತಂದೆ, ತಾಯಿ, ಪತ್ನಿ, ಪುತ್ರಿ, ಒಬ್ಬ ಸಹೋದರ ಇದ್ದಾರೆ.