ಕಡರನಾಯ್ಕನಹಳ್ಳಿ: ಇದುವರೆಗೆ ಅಡಿಕೆ, ತೆಂಗಿನಕಾಯಿಗಳನ್ನು ಕುದಿಯುತ್ತಿದ್ದ ದುಷ್ಕರ್ಮಿಗಳು ಈಗ ಲಾಭದಾಯಕ ಬೆಳ್ಳುಳ್ಳಿಯನ್ನು ಕದಿಯಲು ಶುರು ಮಾಡಿದ್ದಾರೆ. ಸಮೀಪದ ಎರೆ ಹೊಸಳ್ಳಿ ಗ್ರಾಮದಲ್ಲಿ ಬೆಳ್ಳುಳ್ಳಿ ಫಸಲನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.
ಚಂದ್ರಮ್ಮ ಎಂಬುವರು ಎರಡು ಎಕರೆ ಜಮೀನು ಗುತ್ತಿಗೆ ಪಡೆದು ಬರಗಾಲದಲ್ಲೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳ್ಳುಳ್ಳಿ ಬೆಳೆದಿದ್ದರು. ಮಂಗಳವಾರ ಬೆಳಗಿನ ಜಾವ ಸುಮಾರು 2 ಕ್ವಿಂಟಲ್ ತೂಕದ ಬೆಳ್ಳುಳ್ಳಿಯನ್ನು ದುಷ್ಕರ್ಮಿಗಳು ಕದ್ದಿದ್ದಾರೆ. ಇದರ ಮೌಲ್ಯ ಸುಮಾರು ₹80,000 ಎಂದು ಅಂದಾಜಿಸಲಾಗಿದೆ. ಗ್ರಾಮದಲ್ಲಿ ರೇಣುಕಾ ಯಲ್ಲಮ್ಮನ ಜಾತ್ರೆಯ ಸಮಯದಲ್ಲಿ ಈ ಘಟನೆ ನಡದಿದೆ.
ಎರೆ ಹೊಸಳ್ಳಿ ಗ್ರಾಮದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಹಾಗೂ ತರಕಾರಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಭದ್ರಾ ಅಚ್ಚುಕಟ್ಟು ಪ್ರದೇಶವಾಗಿದ್ದೂ, ಕಾಲುವೆ ನೀರು ಇಲ್ಲಿಗೆ ತಲುಪುವುದಿಲ್ಲ. ಮಳೆಯಾಶ್ರಿತ ಬೆಳೆಗಳ ಮೇಲೆ ರೈತರು ಅವಲಂಬಿತರಾಗಿದ್ದಾರೆ.
ಬೋರ್ವೆಲ್ ನೀರು ಬಳಸಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗಳಿಗೆ ಇಂತಹ ಪರಿಸ್ಥಿತಿ ಎದುರಾದರೆ ರೈತರು ಫಸಲನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ರೈತ ಮುಖಂಡ ಸಂಜೀವ ರೆಡ್ಡಿ ಪ್ರಶ್ನಿಸಿದ್ದಾರೆ. ರೈತರು ಕಷ್ಟಪಟ್ಟು ಬೆಳೆದ ಫಸಲು ಕೈಗೆ ಬರುವ ಸಂದರ್ಭದಲ್ಲಿ ಈ ರೀತಿಯಾಗಿದೆ ಎಂದು ಎಂದು ರೈತ ಕೃಷ್ಣಪ್ಪ ದುಃಖ ತೋಡಿಕೊಂಡರು.