ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಹಿಮ್ಮೆಟ್ಟಿಸಲು ಆಯುಷ್ ಇಲಾಖೆಯೂ ಟೊಂಕಕಟ್ಟಿ ನಿಂತಿದೆ. ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿರುವ ಕೋವಿಡ್–19 ರೋಗಿಗಳಿಗೆ ಆಯುಷ್ ಚಿಕಿತ್ಸೆ ನೀಡುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ರೋಗಿಗಳ ಜೀವ ಉಳಿಸಲು ಜಿಲ್ಲಾಡಳಿತದ ಜೊತೆಗೆ ಕೈಜೋಡಿಸಿದೆ.
ಮೇ ಮೊದಲ ವಾರ ಜಿಲ್ಲೆಯಲ್ಲಿ ಕೋವಿಡ್ನಿಂದ ರೋಗಿಗಳು ಮೃತಪಟ್ಟಾಗ ಉಳಿದ ರೋಗಿಗಳ ಜೀವ ಉಳಿಸಿಕೊಳ್ಳುವ ಸವಾಲು ಜಿಲ್ಲಾಡಳಿತಕ್ಕೆ ಎದುರಾಯಿತು. ಆಗ ಆಯುಷ್ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಕೋವಿಡ್ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನೂ ಅಳವಡಿಸಿಕೊಳ್ಳಲು ಒಪ್ಪಿಗೆ ಸೂಚಿಸಿದರು.
ಇದುವರೆಗೆ ಸುಮಾರು 140 ರೋಗಿಗಳಿಗೆ ಆಯುಷ್ ಇಲಾಖೆಯ ಮಾರ್ಗಸೂಚಿ ಪ್ರಕಾರ ಚಿಕಿತ್ಸೆ ನೀಡಲಾಗಿದೆ. ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದ 130ಕ್ಕೂ ಹೆಚ್ಚು ಜನರಿಗೂ ರೋಗ ನಿರೋಧಕ ಶಕ್ತಿ ವೃದ್ಧಿಗೆ ಮದ್ದು ನೀಡಲಾಗಿದೆ. ಜಿಲ್ಲಾ ಆಸ್ಪತ್ರೆಯಿಂದ ಕೋವಿಡ್ ರೋಗಿಗಳು ಗುಣಮುಖರಾಗಿ ಬಿಡುಗಡೆಗೊಳ್ಳುತ್ತಿದ್ದು, ಇದರ ಹಿಂದೆ ಆಯುಷ್ ಇಲಾಖೆಯ ಔಷಧೋಪಚಾರದ ಪರಿಶ್ರಮವೂ ಇದೆ.
‘ತುರ್ತು ನಿಗಾ ಘಟಕ ಹಾಗೂ ವೆಂಟಿಲೇಟರ್ನಲ್ಲಿರುವ ರೋಗಿಗಳನ್ನು ಹೊರತುಪಡಿಸಿ ಉಳಿದ ರೋಗಿಗಳ ರೋಗ ನಿರೋಧಕ ಶಕ್ತಿ ವೃದ್ಧಿಗಾಗಿ ಪೂರಕ ಚಿಕಿತ್ಸೆ ನೀಡುತ್ತಿದ್ದೇವೆ. ಇಲಾಖೆಯ ಆಯುಕ್ತೆ ಮೀನಾಕ್ಷಿ ನೇಗಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಉಳಿದ ಜಿಲ್ಲೆಗಳಿಗೂ ಇದನ್ನು ವಿಸ್ತರಿಸುವಂತೆ ಸೂಚಿಸಿದ್ದಾರೆ’ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಶಂಕರಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಕೋವಿಡ್ ರೋಗ ಬಂದಾಗ ಶ್ವಾಸಕೋಶಕ್ಕೆ ತೊಂದರೆಯಾಗುತ್ತದೆ. ರಸಶಾಸ್ತ್ರದ ಪ್ರಕಾರ ಚ್ಯವನ್ಪ್ರಾಶ್ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಬಾರದಂತೆ ನೋಡಿಕೊಳ್ಳುತ್ತದೆ. ಹೀಗಾಗಿ ಕೋವಿಡ್ ರೋಗಿಗಳಿಗೆ ದಿನಾಲೂ ಬೆಳಿಗ್ಗೆ ಹಾಗೂ ಸಂಜೆ ಆಹಾರ ತೆಗೆದುಕೊಳ್ಳುವ ಒಂದು ಗಂಟೆ ಮೊದಲು 5 ಗ್ರಾಂ ಚ್ಯವನ್ಪ್ರಾಶ್ ಕೊಡುತ್ತಿದ್ದೇವೆ’ ಎಂದು ತಿಳಿಸಿದರು.
ಗೋಲ್ಡನ್ ಮಿಲ್ಕ್: ‘ರೋಗಿಗಳಿಗೆ ದಿನಾಲೂ ಸಂಜೆ 7 ಗಂಟೆಗೆ ಕುಡಿಯಲು ಗೋಲ್ಡನ್ ಮಿಲ್ಕ್ ಕೊಡುತ್ತಿದ್ದೇವೆ. 150 ಎಂ.ಎಲ್ ಹಾಲಿಗೆ ತಲಾ 1.66 ಗ್ರಾಂ ಅಶ್ವಗಂಧ ಚೂರ್ಣ ಹಾಗೂ ಅರಿಷಿಣ ಹಾಕಿ ಕುದಿಸಿ ಗೋಲ್ಡನ್ ಮಿಲ್ಕ್ ಮಾಡಲಾಗುತ್ತಿದೆ. ಅಶ್ವಗಂಧವು ಮಾನಸಿಕ ಒತ್ತಡ ಕಡಿಮೆ ಮಾಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತಿದ್ದು, ಇದರ ಬಗ್ಗೆ ಐಸಿಎಂಆರ್ ಸಂಶೋಧನೆ ನಡೆಸುತ್ತಿದೆ. ಅಮೃತಬಳ್ಳಿಯಿಂದ ತಯಾರಿಸಿದ ಸಂಶಮನ ವಟಿ (500 ಎಂ.ಜಿ) ಮಾತ್ರೆಯನ್ನು 15 ದಿನಗಳ ಕಾಲ ಆಹಾರ ಸೇವನೆಯ ನಂತರ ಬೆಳಿಗ್ಗೆ ಹಾಗೂ ರಾತ್ರಿ ನೀಡಲಾಗುತ್ತಿದೆ. ಈ ಚಿಕಿತ್ಸಾ ವಿಧಾನದಿಂದ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತಿದ್ದು, ಅವರಲ್ಲಿ ಕೋವಿಡ್ ಮರುಕಳಿಸುವ ಸಾಧ್ಯತೆ ಬಹಳ ಕಡಿಮೆಯಾಗಲಿದೆ’ ಎಂದು ಡಾ. ಶಂಕರಗೌಡ ಮಾಹಿತಿ ನೀಡಿದರು.
‘ಕೋವಿಡ್ ವಾರ್ಡ್ನಲ್ಲಿ ಆಯುಷ್ ಚಿಕಿತ್ಸೆಗಾಗಿ ಒಬ್ಬ ಸಿಸ್ಟರ್ ನಿಯೋಜಿಸಲಾಗಿದೆ. ಡಾ. ಸಿದ್ದೇಶ್ ಇಟ್ನಳ್ಳಿ ಅವರು ಚಿಕಿತ್ಸಾ ವಿಧಾನದ ಮೇಲೆ ನಿಗಾ ವಹಿಸುತ್ತಿದ್ದಾರೆ. ಫೋನ್ ಮೂಲಕ ರೋಗಿಗಳೊಂದಿಗೆ ಮಾತನಾಡಿ ಅವರ ಪ್ರತಿಕ್ರಿಯೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ’ ಎಂದು ತಿಳಿಸಿದರು.
ರೋಗನಿರೋಧಕ ಔಷಧ ಕಿಟ್ ವಿತರಣೆ
ರೋಗ ನಿರೋಧಕ ಶಕ್ತಿ ವೃದ್ಧಿಸುವ ಹೋಮಿಯೋಪಥಿಯ ‘ಆರ್ಸೆನಿಕ್ ಅಲ್ಬಾ 30 ಪೊಟೆನ್ಸಿ’ (1 ಗ್ರಾಂ) ಮಾತ್ರೆಗಳು ಹಾಗೂ ಅಮೃತಬಳ್ಳಿಯಿಂದ ತಯಾರಿಸಿದ ‘ಸಂಶಮನ ವಟಿ’ ಒಳಗೊಂಡಿರುವ 12,500 ಔಷಧ ಕಿಟ್ಗಳನ್ನು ಆಯುಷ್ ಇಲಾಖೆಯಿಂದ ಜಿಲ್ಲೆಗೆ ಕಳುಹಿಸಿಕೊಡಲಾಗಿದೆ. ಮೊದಲ ಮೂರು ದಿನ ಖಾಲಿ ಹೊಟ್ಟೆಯಲ್ಲಿ ಆರ್ಸೆನಿಕ್ ಅಲ್ಬಾ 30 ಪೊಟೆನ್ಸಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ನಂತರ 10 ದಿನಗಳ ಕಾಲ ಸಂಶಮನ ವಟಿಯನ್ನು ಬೆಳಿಗ್ಗೆ ಮತ್ತು ರಾತ್ರಿ ತೆಗೆದುಕೊಳ್ಳಬೇಕು. 1,725 ಪೊಲೀಸರಿಗೆ ಈ ಔಷಧ ಕಿಟ್ಗಳನ್ನು ಈಗಾಗಲೇ ವಿತರಿಸಲಾಗಿದೆ. 196 ಗ್ರಾಮ ಪಂಚಾಯಿತಿಗಳ ಸಿಬ್ಬಂದಿಗೆ ವಿತರಿಸಲಾಗುತ್ತಿದ್ದು, ಪೌರಕಾರ್ಮಿಕರಿಗೂ ವಿತರಿಸಲಾಗುವುದು ಎಂದು ಡಾ. ಶಂಕರಗೌಡ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿನ ಆರೋಗ್ಯ ದೃಷ್ಟಿಯಿಂದ ದುರ್ಬಲರಾಗಿರುವರಿಗೆ ಈ ಮಾತ್ರೆಗಳನ್ನು ನೀಡಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮೂಲಕ ಕೋವಿಡ್ನಿಂದಾಗುವ ಸಾವನ್ನು ತಡೆಯಲು ಇನ್ನೂ 30 ಸಾವಿರ ಔಷಧ ಕಿಟ್ಗಳಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
*
ಕೋವಿಡ್ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಇಲಾಖೆಯಿಂದ ಚಿಕಿತ್ಸೆ ನೀಡಿರುವುದರಲ್ಲಿ ದಾವಣಗೆರೆಯು ರಾಜ್ಯದ ಮೊದಲ ಜಿಲ್ಲೆಯಾಗಿದ್ದು, ಒಳ್ಳೆಯ ಫಲಿತಾಂಶ ಕಂಡುಬಂದಿದೆ.
– ಡಾ. ಶಂಕರಗೌಡ, ಜಿಲ್ಲಾ ಆಯುಷ್ ಅಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.