ದಾವಣಗೆರೆ: ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆ ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ಗಳ ಹೊರಭಾಗದಲ್ಲಿದ್ದ ಇಂದಿರಾಗಾಂಧಿ ಚಿತ್ರಗಳಿಗೆ ಕಿಡಿಗೇಡಿಗಳು ವೇಸ್ಟ್ ಆಯಿಲ್ ಬಳಿದು ವಿರೂಪಗೊಳಿಸಿದ್ದಾರೆ.
ಶನಿವಾರ ರಾತ್ರಿ ವೇಳೆ ಕೃತ್ಯ ನಡೆದಿದ್ದು, ಈ ಕುರಿತು ಇಂದಿರಾ ಕ್ಯಾಂಟೀನ್ ಮ್ಯಾನೇಜರ್ ನವೀನ್ ಕುಮಾರ್ ಅವರು ಕೆಟಿಜೆ ನಗರ ಹಾಗೂ ಬಡಾವಣೆ ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾರೆ.
‘ಎರಡೂ ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು, ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇನೆ’ ಎಂದು ದೂರುದಾರ ನವೀನ್ಕುಮಾರ್ ತಿಳಿಸಿದರು.
‘ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.
ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸಿದರು.