ದಾವಣಗೆರೆ: ನಾರಿ ಶಕ್ತಿ ವಂದನಾ ಮ್ಯಾರಥಾನ್ ಅಂಗವಾಗಿ ಪ್ರಯುಕ್ತ ದಾವಣಗೆರೆ ಜಿಲ್ಲಾ ಮಹಿಳಾ ಮೋರ್ಚಾದಿಂದ ಜಾಥಾ ನಡೆಯಿತು.
ನಗರದ ಕೆ.ಬಿ. ಬಡಾವಣೆಯ ಬಿಜೆಪಿಯ ಜಿಲ್ಲಾ ಕಚೇರಿಯಿಂದ ಆರಂಭಗೊಂಡ ಜಾಥಾ ನಗರದ ವಿವಿಧೆಡೆ ಸಂಚರಿಸಿ, ಮತ್ತೆ ಬಿಜೆಪಿ ಕಚೇರಿಗೆ ಅಗಮಿಸಿ, ಪಶ್ಚಿಮ ಬಂಗಾಳದ ಬರ್ಸಾತ್ನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ನೇರ ಪ್ರಸಾರ ಕಾರ್ಯಕ್ರಮವನ್ನು ವೀಕ್ಷಿಸಿದರು.
‘ದೇಶದ ಎಲ್ಲಾ ವರ್ಗದ ಜನರನ್ನು ಸ್ವಾವಲಂಬನೆಯ ಕಡೆಗೆ ಕೊಂಡೊಯ್ಯಲು ನರೇಂದ್ರ ಮೋದಿ ಅವರು ಮಕ್ಕಳಿಂದ ವೃದ್ಧರವರೆಗೂ ಹಲವು ಉತ್ತಮ ಕಾರ್ಯಕ್ರಮ ರೂಪಿಸಿದ್ದಾರೆ. ಇದಲ್ಲದೇ ದೇಶದ ಜನತೆಯ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ಸಮೀಕ್ಷೆಯಲ್ಲಿ ಮೋದಿ ಪರವಾಗಿ ಉತ್ತಮ ಸ್ಪಂದನೆ ದೊರೆತಿದೆ. ಈ ನಿಟ್ಟಿನಲ್ಲಿ ಮುಂಬರುವ ಚುನಾವಣೆಯಲ್ಲಿ ಮಹಿಳೆಯರು ಮೋದಿಯವರಿಗೆ ಬೆನ್ನೆಲುಬಾಗಿ ನಿಲ್ಲಬೇಕು’ ಎಂದು ದಾವಣಗೆರೆ ಜಿಲ್ಲೆಯ ಉಸ್ತುವಾರಿ ಭಾರತಿ ಜೆಂಬಗಿ ಹೇಳಿದರು.
ಜಿಲ್ಲಾ ಮಹಿಳಾ ಮೋರ್ಚಾದ ಪುಪ್ಪಾ ವಾಲಿ ಮಾತನಾಡಿ, ‘ನಮ್ಮ ನಡಿಗೆ ಮೋದಿಜಿ ಕಡೆಗೆ ಎನ್ನುವ ಘೋಷಣೆಯೊಂದಿಗೆ ಮಾತೃ ಹೃದಯದ ಮೋದಿಜಿಗೆ ದೇಶದ ಜನತೆ ಕೈಜೋಡಿಸುವ ಮೂಲಕ ಬಲಪಡಿಸಬೇಕು’ ಎಂದು ಸಲಹೆ ನೀಡಿದರು.
ಭಾಗ್ಯ ಪಿಸಾಳೆ, ರೇಣುಕಮ್ಮ ಬಣಕಾರ್, ಸಾವಿತ್ರಮ್ಮ, ಚಂದ್ರಕಲಾ, ದರ್ಮೀಬಾಯಿ, ಮಂಜುಳಾ, ಸವಿತಾ, ನೀತಾ,ರೇಣುಕಾ ಕೃಷ್ಣ, ಕುಸುಮ, ಸಾವಿತ್ರಿ, ಯಲ್ಲಮ್ಮ ಇತರರು ಇದ್ದರು.