ದಾವಣಗೆರೆ: ಸ್ವಚ್ಛ ಇದ್ದಲ್ಲಿ ಕಾಯಿಲೆ ಇರುವುದಿಲ್ಲ. ಪ್ರತಿದಿನ ಪ್ರತಿಯೊಬ್ಬರೂ ಕೈ ತೊಳೆಯುವುದನ್ನು ರೂಢಿಸಿಕೊಳ್ಳಬೇಕು ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ತಿಳಿಸಿದರು.
ನಗರದ ದೇವರಾಜ ಅರಸ್ ಬಡಾವಣೆಯ ರೆಡ್ ಕ್ರಾಸ್ ಭವನದಲ್ಲಿ ಗುರುವಾರ ರೆಡ್ ಕ್ರಾಸ್ ಸಂಸ್ಥೆ ಆಯೋಜಿಸಿದ ಜಾಗತಿಕ ಕೈ ತೊಳೆಯುವ ದಿನಾಚರಣೆ, ಕೈ ತೊಳೆಯುವ ಕುರಿತ ಜಾಗೃತಿ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪದೇ ಪದೇ ಕೈ ತೊಳೆಯುವುದು, ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದರಿಂದ ಕೊರೊನಾದಂತಹ ಕಾಯಿಲೆಗಳು ಹರಡುವುದನ್ನು ತಡೆಗಟ್ಟಬಹುದು ಎಂದರು.
ರೆಡ್ಕ್ರಾಸ್ ಸಂಸ್ಥೆ 6-7 ತಿಂಗಳುಗಳಿಂದ ರೆಡ್ ಕ್ರಾಸ್ ಸಂಸ್ಥೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ, ಮಾಸ್ಕ್ ಧರಿಸುವುದು, ಅಂತರ ಕಾಪಾಡುುದು ಮುಂತಾದವುಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಸುತ್ತಾ ಬಂದಿದೆ. ಪೊಲೀಸ್ ಇಲಾಖೆ, ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಕೂಡ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು.
ಸಂಸ್ಥೆಯ ಚೇರ್ಮನ್ ಡಾ.ಎ.ಎಂ. ಶಿವಕುಮಾರ, ‘ಸ್ವಚ್ಛವಾಗಿ ಕೈ ತೊಳೆಯುವುದನ್ನು ಮಕ್ಕಳಲ್ಲಿ ರೂಢಿಸಬೇಕು. ಅದು ದೈನಂದಿನ ಕಾರ್ಯಕ್ರಮಗಳಲ್ಲಿ ಒಂದಾಗಬೇಕು. ಮಕ್ಕಳು ಕೈ ತೊಳೆಯುವ್ಯದರಿಂದ ಅವರ ಪೋಷಕರೂ ಸಹಾ ಕೈ ತೊಳೆಯುವಲ್ಲಿ ಆಸಕ್ತರಾಗುತ್ತಾರೆ. ವಾಟ್ಸ್ಆ್ಯಪ್, ಫೇಸ್ಬುಕ್ ಮೂಲಕ ಈ ಕೈ ತೊಳೆಯುವ ಕುರಿತ ವಿಡಿಯೊವನ್ನು ಕಳುಹಿಸಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.
ಸಂಸ್ಥೆಯ ಸಿಎ ಉಮೇಶ ಶೆಟ್ಟಿ, ವೈಸ್ ಚೇರ್ಮನ್ ಡಿ.ಎಸ್. ಸಿದ್ದಣ್ಣ, ಗೌಡರ ಚನ್ನಬಸಪ್ಪ, ಕಾರ್ಯದರ್ಶಿ ಡಿ.ಎಸ್.ಸಾಗರ್, ಖಜಾಂಚಿ ಅನಿಲ್ ಬಾರಂಗಳ್, ರಾಜ್ಯ ಸಮಿತಿ ಸದಸ್ಯ ಡಾ.ಕೆ. ಮಹೇಶ, ಆನಂದ ಜ್ಯೋತಿ, ಇನಾಯತ್ವುಲ್ಲಾ, ಎಂ.ಜಿ. ಶ್ರೀಕಾಂತ್, ಶ್ರೀಕಾಂತ ಬಗರೆ, ಕೆ.ಕೆ. ನಾಗರಾಜ ಅವರೂ ಇದ್ದರು.