ದಾವಣಗೆರೆ: 16 ತಿಂಗಳ ಶಿಷ್ಯ ವೇತನಕ್ಕಾಗಿ ಆಗ್ರಹಿಸಿ ಇಲ್ಲಿನ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿನ ಜಯದೇವ ವೃತ್ತದಲ್ಲಿ ನಡೆಯುತ್ತಿರುವ ಧರಣಿ 6ನೇ ದಿನಕ್ಕೆ ಕಾಲಿಟ್ಟಿತು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಅವರು ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಮನವಿ ಆಲಿಸಿ, ಸಮಸ್ಯೆ ಪರಿಹರಿಸುವ ಭರವಸೆ ನೀಡಿದರೂ ವಿದ್ಯಾರ್ಥಿಗಳು ಪಟ್ಟು ಸಡಿಲಿಸಿಲ್ಲ. ಭರವಸೆ ಲಿಖಿತ ರೂಪದಲ್ಲಿ ನೀಡಬೇಕು ಎಂದು ಪಟ್ಟು ಹಿಡಿದರು. ಅಲ್ಲದೇ ಶಿಷ್ಯವೇತನ ನೀಡುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ. ಭಾನುವಾರ ಧರಣಿ ಸ್ಥಗಿತಗೊಳಿಸಿ ಸೋಮವಾರದಿಂದ ಧರಣಿ ಮುಂದುವರೆಸುವುದಾಗಿ ಎಚ್ಚರಿಸಿದರು.
ಬಿ.ಎ.ಬಸವರಾಜ ಮಾತನಾಡಿ ‘ಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಆಡಳಿತ ಮಂಡಳಿ ಜತೆ ಸಭೆ ನಡೆಸಿದ್ದು, ಆಡಳಿತ ಮಂಡಳಿಯವರು ಶಿಷ್ಯವೇತನ ಕೊಡಲು ಒಪ್ಪಿದ್ದಾರೆ’ ಎಂದರು.
ವಿದ್ಯಾರ್ಥಿಗಳು ‘ಇಲ್ಲ ಸರ್ಕಾರದಿಂದಲೇ ಬರಬೇಕು’ ಎಂದು ಪ್ರತಿಕ್ರಿಯಿಸಿದರು. ಆಗ ಸಚಿವರು ‘ಆಡಳಿತ ಮಂಡಳಿಯವರು ಅನುದಾನವನ್ನು ಸರ್ಕಾರಕ್ಕೆ ಕೊಟ್ಟರೆ ಅದನ್ನು ನೀಡುತ್ತೇವೆ’ ಎಂದರು. ನಮಗೆ ಯಾರೇ ಏನೇ ಕೊಡಲಿ ಲಿಖಿತ ರೂಪದಲ್ಲಿ ನೀಡಬೇಕು’ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು.
ಬೈರತಿ ಬಸವರಾಜ ಮಾತನಾಡಿ, ‘ಸೋಮವಾರ ಈ ಕುರಿತು ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಶಿವಯೋಗಿಸ್ವಾಮಿ, ಶಾಸಕ ಎಸ್.ವಿ.ರಾಮಚಂದ್ರ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸಚಿವರ ಜೊತೆಯಲ್ಲಿ ಇದ್ದರು.
ಸಭೆಗೆ ನಮ್ಮನ್ನೂ ಕರೆದಿಲ್ಲ:
ವಿದ್ಯಾರ್ಥಿ ಹರೀಶ್ ಮಾತನಾಡಿ,‘ಸರ್ಕಾರ ಮತ್ತು ಆಡಳಿತ ಮಂಡಳಿ ನಡುವೆ ಸಭೆ ನಡೆಯುತ್ತಿದೆ. ಆದರೆ ನಿಜವಾಗಿ ನೊಂದಿರುವವರು ನಾವು. ನಮಗೆ ಸಭೆಗೆ ಯಾರೂ ಕರೆದಿಲ್ಲ, ಇದು ಯಾವ ನ್ಯಾಯ? ಸರ್ಕಾರ ತೆಗೆದುಕೊಳ್ಳುವ ನಿರ್ಧಾರದಲ್ಲಿ ನಾವು ಭಾಗಿಯಾಗಬೇಕಲ್ಲವಾ, ಒಂದು ಸೋಮವಾರ ನಡೆಯುವ ಸಭೆಗೆ ನಮ್ಮಲ್ಲಿ ಯಾರಾದರೂ ಇಬ್ಬರನ್ನು ಆಹ್ವಾನಿಸಬೇಕು’ ಎಂದು ಆಗ್ರಹಿಸಿದರು.
‘ಶುಕ್ರವಾರ ನಡೆದ ಸಭೆಯಲ್ಲಿ ಶಿಷ್ಯವೇತನ ಕೊಡಲು ಆಗುವುದಿಲ್ಲ ಎಂದು ಸರ್ಕಾರ ಹೇಳಿದೆ. ಒಂದು ವೇಳೆ ಆಡಳಿತ ಮಂಡಳಿಯೇ ಕೊಡುವುದಾದರೆ ಅವರು ಸರ್ಕಾರಕ್ಕೆ ನೀಡಲಿ, ಆ ನಂತರ ಸರ್ಕಾರ ನಮಗೆ ನೀಡಬೇಕು’ ಎಂದು ಒತ್ತಾಯಿಸಿದರು.
ವೈದ್ಯ ವಿದ್ಯಾರ್ಥಿನಿ ಹಿತಾ ಮಾತನಾಡಿ, ‘ಶುಕ್ರವಾರ ಬೆಂಗಳೂರಿನಲ್ಲಿ ನಡೆದಿರುವ ಸಭೆಯ ಬಗ್ಗೆ ಯಾರೊಬ್ಬರೂ ಮಾಹಿತಿ ನೀಡಿಲ್ಲ. 6ನೇ ದಿನಕ್ಕೆ ಕಾಲಿಟ್ಟರೂ ಯಾರೂ ನಮ್ಮನ್ನು ಮಾತನಾಡಿಸಿಲ್ಲ. ಶ್ರೀರಾಮುಲು ಬರಲಿಲ್ಲ. ಚಿಕ್ಕ ವಿಷಯ ಆಯಿತಾ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬಾರದ ಶ್ರೀರಾಮುಲು ಆಕ್ಷೇಪ:
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ದಾವಣಗೆರೆಗೆ ಬಂದಿದ್ದರೂ ಪ್ರತಿಭಟನಾ ಸ್ಥಳಕ್ಕೆ ಬಾರದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
‘ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ತಾಯಿ ಮಕ್ಕಳ ಆಸ್ಪತ್ರೆಗೆ ಭೂಮಿಪೂಜೆ ನೆರವೇರಿಸಲು ಬಂದಿದ್ದರು. ಆದರೆ ಪ್ರತಿಭಟನಾ ಸ್ಥಳಕ್ಕೆ ಬಂದು ಸಮಸ್ಯೆ ಕೇಳಲಿಲ್ಲ’ ಎಂಬುದು ವಿದ್ಯಾರ್ಥಿಗಳು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.