ಅರಣ್ಯ ವಾಸಿಗಳ ರಕ್ಷಣೆಗೆ ಒತ್ತಾಯ
ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಬಸವಾಪಟ್ಟಣ ಹೋಬಳಿಯ ಅರಣ್ಯ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದವರು 60 ವರ್ಷಗಳಿಂದ ಮನೆ ಕಟ್ಟಿಸಿಕೊಂಡು ವಾಸವಾಗಿದ್ದಾರೆ. 1975–76ರಲ್ಲಿ ಸೇಂದಿವನ ಗೋಮಾಳ ಆಗಿತ್ತು. ಅದಕ್ಕೂ ಹಿಂದೆ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ನಂತರ ಈ ಜಾಗ ಅರಣ್ಯ ವಾಪ್ತಿಗೆ ಬಂದಿದೆ. ಇದರಿಂದ ಅಲ್ಲಿನ ನಿವಾಸಿಗಳಿಗೆ ತೊಂದರೆ ಆಗಿದೆ. ಅಲ್ಲದೇ ಅರಣ್ಯ ಅಧಿಕಾರಿಗಳು ಪದೇ ಪದೆ ಕಿರುಕುಳ ನೀಡುತ್ತಿದ್ದಾರೆ. ಇದು ಕೇವಲ ಮಾಯಕೊಂಡ ಕ್ಷೇತ್ರದ ಸಮಸ್ಯೆಯಲ್ಲ ರಾಜ್ಯದ ಅರಣ್ಯ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಬ್ಬರ ಸಮಸ್ಯೆಯಾಗಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಸದನದ ಗಮನಕ್ಕೆ ತಂದರು. ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ಮತ್ತು ಕಾಗೋಡು ತಿಮ್ಮಪ್ಪ ಅವರು ಅರಣ್ಯ ಭೂಮಿ ಉಳುಮೆ ಮಾಡಿದವರು ಮನೆಗಳನ್ನು ಕಟ್ಟಿಸಿಕೊಂಡವರನ್ನು ರಕ್ಷಣೆ ಮಾಡಿದ್ದರು. ಸರ್ಕಾರ ಅದೇ ರೀತಿಯಲ್ಲಿ ಕಾಯ್ದೆ ತಿದ್ದುಪಡಿ ತಂದು ಬಡವರನ್ನು ರಕ್ಷಣೆ ಮಾಡಬೇಕು ಎಂದು ಅಧಿವೇಶನದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯಿಸಿದರು. ‘ಇದಕ್ಕೆ ಪ್ರತಿಕ್ರಿಯಿಸಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ ಭದ್ರಾವತಿ ವಿಭಾಗದ ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಹೋಬಳಿ ವ್ಯಾಪ್ತಿಯ ಶುಂಗಾರಬಾಬು ಗ್ರಾಮದ ಸರ್ವೆ ನಂಬರ್ 16ರಲ್ಲಿ ಶುಂಗಾರಬಾಬು ಮುಳ್ಳುನಾಯಕನಹಳ್ಳಿ ಮೀಸಲು ಅರಣ್ಯ ಪ್ರದೇಶ ಇದೆ. ಇಲ್ಲಿ 44.34 ಎಕರೆಒತ್ತುವರಿಯಾಗಿದೆ. ಈ ಒತ್ತುವರಿ ತೆರವಿಗೆ ಈಗಾಗಲೇ ಅಧಿಕಾರಿಗಳು ಕರ್ನಾಟಕ ಅರಣ್ಯ ಕಾಯ್ದೆ 1960ರಡಿ ಪ್ರಕರಣ ದಾಖಲಿಸಿದ್ದಾರೆ. ಇಲ್ಲಿ ಮನೆ ಇರಲಿ ಮತ್ತೊಂದಿರಲಿ ಏಕಾಏಕಿ ತೆರವುಗೊಳಿಸುವುದಿಲ್ಲ. ಈ ಬಗ್ಗೆ ವಿಚಾರಣೆ ಮಾಡಿ ತೆರವುಗೊಳಿಸುವ ಕಾರ್ಯ ಮಾಡುತ್ತಾರೆ. ಕಾಯ್ದೆಯ ಅನುಸಾರ ಏನೇನು ಮಾಡಬಹುದು ಎಂದು ಕೂಲಂಕಷವಾಗಿ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.