ಮಾಯಕೊಂಡ: ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಶಿಥಿಲಗೊಂಡ ಕಾಲುವೆಗಳು, ಬ್ರಿಡ್ಜ್ಗಳನ್ನು ಮರು ನಿರ್ಮಾಣ ಮಾಡಬೇಕು ಎಂದು ಶಾಸಕ ಕೆ.ಎಸ್.ಬಸವಂತಪ್ಪ ಸರ್ಕಾರವನ್ನು ಒತ್ತಾಯಿಸಿದರು.
ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯ ಕುರಿತು ಧ್ವನಿ ಎತ್ತಿದ ಶಾಸಕ ಕೆ.ಎಸ್.ಬಸವಂತಪ್ಪ, ಮಾಯಕೊಂಡ ಕ್ಷೇತ್ರ ವ್ಯಾಪ್ತಿಯಲ್ಲಿ 10,000 ಹೆಕ್ಟೇರ್ ಪ್ರದೇಶ ಮತ್ತು ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ 42,000 ಹೆಕ್ಟೇರ್ ನೀರಾವರಿ ಪ್ರದೇಶ ಹೊಂದಿದೆ. ಒಟ್ಟು ನೀರಾವರಿ ಪ್ರದೇಶ ರೈತರ ಜೀವನಾಡಿಯಾಗಿದೆ. 1958ರಲ್ಲಿ ನಿರ್ಮಿಸಿದ ಭದ್ರಾ ಕಾಲುವೆಗಳು, ಬ್ರಿಡ್ಜ್ಗಳು ಶಿಥಿಲಗೊಂಡು ಹಾಳಾಗಿವೆ. ಈವರೆಗೂ ಕಾಲುವೆ ಹಾಗೂ ಬ್ರಿಡ್ಜ್ಗಳನ್ನು ಮರು ನಿರ್ಮಾಣ ಅಥವಾ ಆಧುನೀಕರಣ ಮಾಡಿಲ್ಲ ಎಂದು ದೂರಿದರು.
26 ಕಿ.ಮೀ. ದೂರ ಮುಖ್ಯ ಕಾಲುವೆಗಳು ಮತ್ತು 9 ವಿತರಣೆ ಕಾಲುವೆಗಳು ಇವೆ. ಹಾಳಾಗಿರುವ ಕಾಲುವೆಗಳಲ್ಲಿ ನೀರು ಸಮಪರ್ಕವಾಗಿ ಹರಿಯದೆ ರೈತರು ಬೆಳೆ ಬೆಳೆಯಲು ಅನನುಕೂಲವಾಗಿದೆ. ಈ ಹಿಂದೆ ನಲ್ಕುಂದ ಬಳಿ ಇರುವ ಕಾಲುವೆ ಬ್ರಿಡ್ಜ್ ಒಡೆದು ನೀರು ರೈತರ ಗದ್ದೆಗಳಿಗೆ ನುಗ್ಗಿ ಗದ್ದೆಗಳು ಜಲಾವೃತಗೊಂಡಿದ್ದವು. ಇದರಿಂದ ಫಸಲಿಗೆ ಬಂದ ಭತ್ತ ಹಾಳಾಗಿ ಲಕ್ಷಾಂತರ ನಷ್ಟ ಅನುಭವಿಸುಂತಾಗಿತ್ತು. ಕೂಡಲೇ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಅನುದಾನ ಬಿಡುಗಡೆ ಮಾಡಿ ಬ್ರಿಡ್ಜ್ ನಿರ್ಮಾಣ ಮಾಡಿಸಿ ರೈತರ ಹಿತ ಕಾಪಾಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಶಿಥಿಲಗೊಂಡ ಭದ್ರಾ ಕಾಲುವೆಗಳು ಮತ್ತು ಬ್ರಿಡ್ಜ್ಗಳನ್ನು ಮರು ನಿರ್ಮಾಣ ಮಾಡಿ ರೈತರ ಹಿತ ಕಾಪಾಡಬೇಕು ಎಂದು ಮನವಿ ಮಾಡಿದರು.
ಶಾಸಕರ ಒತ್ತಾಯಕ್ಕೆ ಪ್ರತಿಕ್ರಿಯೆ ನೀಡಿದ ಕಂದಾಯ ಸಚಿವ ಕೃಷ್ಣಭೈರೇಗೌಡ, ‘ಮಾಯಕೊಂಡ ಕ್ಷೇತ್ರ ವ್ಯಾಪ್ತಿಯಲ್ಲಿ ಭದ್ರಾ ಕಾಲುವೆಗಳು ಮತ್ತು ಬ್ರಿಡ್ಜ್ಗಳನ್ನು ನಿರ್ಮಿಸಿ 60 ವರ್ಷ ಕಳೆದಿವೆ. 1958ರಲ್ಲಿ ನಿರ್ಮಾಣ ಮಾಡಿದ ಕಾಲುವೆಗಳು ಮತ್ತು ಬ್ರಿಡ್ಜ್ಗಳನ್ನು ಮರು ನಿರ್ಮಾಣ ಮಾಡಬೇಕೇ ಅಥವಾ ಆಧುನೀಕರಣ ಮಾಡಬೇಕೇ ಎಂಬ ಕುರಿತು ಕಾಲುವೆಗಳು ಮತ್ತು ಬ್ರಿಡ್ಜ್ಗಳನ್ನು ಪರಿಶೀಲನೆ ಮಾಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಅಧಿಕಾರಿಗಳು ವರದಿ ಸಲ್ಲಿಸಿದ ಮೇಲೆ ಹಣದ ಲಭ್ಯತೆ ಆಧಾರದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.