ದಾವಣಗೆರೆ: ಸಂಪೂರ್ಣ ಶ್ರಮಿಕ ಸಮಾಜವಾಗಿರುವ ನದಾಫ್, ಪಿಂಜಾರ ಸಮುದಾಯಕ್ಕೆ ಸೌಲಭ್ಯಗಳನ್ನು ಕಲ್ಪಿಸಲು ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ನದಾಫ್, ಪಿಂಜಾರ ಸಂಘದ ಜಿಲ್ಲಾ ಘಟಕ ಮತ್ತು ನಗರ ಘಟಕದಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಆರ್ಥಿಕ ಅಸಮಾನತೆಯಿಂದ ಈ ಸಮಾಜ ದುಃಸ್ಥಿತಿಯಲ್ಲಿದೆ. ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿಯೂ ಹಿಂದುಳಿದಿದೆ. ಪ್ರವರ್ಗ-1ರಡಿಯಲ್ಲಿ ಜಾತಿ ಸೂಚಕ ಪ್ರಮಾಣ ಪತ್ರ ಹಾಗೂ ಆದಾಯ ದೃಢೀಕರಣ ಪತ್ರ ಪಡೆಯಲೂ ತೊಂದರೆ ಅನುಭವಿಸಬೇಕಿದೆ. ರಾಜ್ಯದಲ್ಲಿ ಈ ಸಮುದಾಯದಲ್ಲಿ ₹ 30 ಲಕ್ಷ ಜನಸಂಖ್ಯೆ ಇದೆ. ನಿಗಮ ಸ್ಥಾಪನೆ ಮೂಲಕ ಈ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸ್ವಯ ಉದ್ಯೋಗಕ್ಕಾಗಿ ಸಬ್ಸಿಡಿ ಸಹಿತ ಸಾಲ ಒದಗಿಸಬೇಕು. ಹಾಸಿಗೆ, ದಿಂಬು ಇತ್ಯಾದಿ ಯಂತ್ರ ಸಾಮಗ್ರಿಗಳನ್ನು ಸರ್ಕಾರ ಉಚಿತವಾಗಿ ನೀಡಬೇಕು. ಹತ್ತಿಯನ್ನು ರಿಯಾಯಿತಿ ದರದಲ್ಲಿ ಒದಗಿಸಬೇಕು. ಬಡವರಿಗೆ ಆಶ್ರಯ ಮನೆಗಳನ್ನು ನೀಡಬೇಕು. ಕುಶಲಕರ್ಮಿಗಳನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಿ ಸೌಲಭ್ಯಗಳನ್ನು ಒದಗಿಸಬೇಕು. ಇಎಸ್ಐ ಸೌಲಭ್ಯ ನೀಡಬೇಕು. ವೈದ್ಯಕೀಯ, ತಾಂತ್ರಿಕ ಶಿಕ್ಷಣ ಸಹಿತ ಉನ್ನತ ಶಿಕ್ಷಣವನ್ನು ಸರ್ಕಾರ ಉಚಿತವಾಗಿ ನೀಡಬೇಕು ಎಂದು ಆಗ್ರಹಿಸಲಾಯಿತು.
ನದಾಫ್, ಪಿಂಜಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಎಚ್. ಉಕ್ಕಡಗಾತ್ರಿ ಮನವಿ ಸಲ್ಲಿಸಿದರು. ನಗರ ಘಟಕ ಅಧ್ಯಕ್ಷ ಎ.ಆರ್. ಅನ್ವರ್ ಹುಸೇನ್, ಉಪಾಧ್ಯಕ್ಷ ಮಹಮ್ಮದ್ ಅಲಿ, ವಿಭಾಗೀಯ ಉಪಾಧ್ಯಕ್ಷ ಡಿ.ಬಿ. ಹಸನ್ಪೀರ್, ಎ. ಫಕೃದ್ಧೀನ್, ಶೌಕತ್ ಅಲಿ ಅವರೂ ಇದ್ದರು.