ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಹಮಾಲಿ ಕೂಲಿ, ವೇಮೆಂಟ್‌–ಪೇಮೆಂಟ್‌: ಸಿಗದ ಪರಿಹಾರ

ಚಂದ್ರಶೇಖರ ಆರ್.
Published 18 ಡಿಸೆಂಬರ್ 2023, 7:17 IST
Last Updated 18 ಡಿಸೆಂಬರ್ 2023, 7:17 IST
ಅಕ್ಷರ ಗಾತ್ರ

ದಾವಣಗೆರೆ: ಬೆಳೆ ನಷ್ಟ, ಮಳೆ ಕೊರತೆ, ಹಾಗೋ ಹೀಗೋ ಬೆಳೆದ ಪೈರಿಗೆ ಸಿಗದ ಸಮರ್ಪಕ ಬೆಲೆ...

ಹೀಗೆ ರೈತರು ಹತ್ತು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇದರ ಜೊತೆಗೆ ವೇಮೆಂಟ್–ಪೇಮೆಂಟ್‌ ವ್ಯವಸ್ಥೆ, ಹಮಾಲಿ ಕೂಲಿ, ಸೂಟ್‌ ಮುರಿಯುವ ಪದ್ಧತಿಯು ‘ಅನ್ನದಾತ’ನ ಸಂಕಷ್ಟವನ್ನು ಇಮ್ಮಡಿಗೊಳಿಸಿದೆ. ಇವುಗಳ ವಿರುದ್ಧ ರೈತರು ಗಟ್ಟಿ ದನಿ ಎತ್ತುತ್ತಿದ್ದರೂ ಯಾವ ಪ್ರಯೋಜನವೂ ಆಗುತ್ತಿಲ್ಲ.

ಖರೀದಿದಾರರು, ರೈತರು, ದ‌ಲ್ಲಾಳಿಗಳು ಈ ಬಗ್ಗೆ ಚರ್ಚೆ ನಡೆಸಿ ಸ್ಪಷ್ಟ ನಿರ್ಧಾರಕ್ಕೆ ಬರಬೇಕು ಎಂಬುದು ದಶಕಗಳ ಬೇಡಿಕೆ. ಆದರೆ ಇದಕ್ಕೆ ಈವರೆಗೂ ಮನ್ನಣೆ ಸಿಕ್ಕಿಲ್ಲ. ಈ ವ್ಯವಸ್ಥೆಗಳಿಂದ ಹೈರಾಣಾಗಿರುವ ರೈತರು ಮತ್ತೆ ಇವುಗಳ ವಿರುದ್ಧ ದನಿ ಎತ್ತುತ್ತಿದ್ದಾರೆ. ಅವರ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. 

ಎಪಿಎಂಸಿಯಲ್ಲಿ ರೈತರು ಮೂಕ ಪ್ರೇಕ್ಷಕರಾಗಿರಬೇಕಾದ ಪರಿಸ್ಥಿತಿ ಬಂದೆರಗಿದೆ. ಈ ನಡುವೆಯೇ ರಾಜ್ಯದಲ್ಲಿ ಆಡಳಿತದಲ್ಲಿರುವ  ಕಾಂಗ್ರೆಸ್‌ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ನಿಷೇಧಿಸಲು ಮುಂದಾಗಿದೆ. ಇದು ರೈತರ ದನಿ ಅಡಗಿಸುವ ಹುನ್ನಾರ ಎಂಬ ಆರೋಪವೂ ಕೇಳಿಬರುತ್ತಿದೆ. 

ಎಪಿಎಂಸಿಯಲ್ಲಿ ಬೆಳೆ ತಂದರೆ ಹಮಾಲಿ ಕೂಲಿಯನ್ನು ರೈತರೇ ಕೊಡಬೇಕು. ಸೂಟ್‌ ಮುರಿಯುವ ಪದ್ಧತಿಯೂ ಇದೆ. ಇದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಇದರಿಂದ ಮಳೆ ಕೊರತೆ ನಡುವೆಯೂ ಅಲ್ಪಸ್ವಲ‌್ಪ ಬೆಳೆ ಬೆಳೆದಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜಮೀನಿನಲ್ಲೇ ಬೆಳೆ ಖರೀದಿಗೆ ಬರುವ ವ್ಯಾಪಾರಿಗಳೂ ಹಮಾಲಿ ಕೂಲಿಯನ್ನು ರೈತರಿಂದಲೇ ಪಡೆಯುತ್ತಾರೆ ಎಂಬುದು ರೈತರ ಅಳಲು. 

ಖರೀದಿದಾರರು ಕಡಿಮೆ ದರ ನೀಡಿ, ರೈತರನ್ನು ವಂಚಿಸುತ್ತಾರೆ. ಹಮಾಲರ ಕೂಲಿಯನ್ನು ಖರೀದಿದಾರರೇ ನೀಡಬೇಕು. ಡಿಸ್ಕೌಂಟ್‌ ಪದ್ಧತಿ ರದ್ದುಗೊಳಿಸ‌ಬೇಕು ಎಂಬುದು ಕೃಷಿಕರ ಒತ್ತಾಯ.

‘ನಮ್ಮ ಹಮಾಲಿ ಕಾರ್ಮಿಕರಿಗೆ ನಾವೇ ಕೂಲಿ ನೀಡುತ್ತೇವೆ. ಮಾರುಕಟ್ಟೆ ಆರಂಭವಾದಾಗಿನಿಂದಲೂ ಇದೇ ಪದ್ಧತಿ ಇದೆ. ಈ ಬಗ್ಗೆ ಚರ್ಚೆಯಾದರೆ ನಮ್ಮ ಅಭ್ಯಂತರವಿಲ್ಲ’ ಎಂಬುದು ಖರೀದಿದಾರರ ವಾದ.

ಸಂಕಷ್ಟ ತಂದ ವೇಮೆಂಟ್‌–ಪೇಮೆಂಟ್‌ ವ್ಯವಸ್ಥೆ: 

ಭತ್ತ, ಮೆಕ್ಕೆಜೋಳ ಸೇರಿದಂತೆ ಇತರೆ ಧಾನ್ಯಗಳನ್ನು ಕೆಲ ವ್ಯಾಪಾರಿಗಳು ರೈತರ ಹೊಲಕ್ಕೆ ಹೋಗಿ ಖರೀದಿ ಮಾಡುತ್ತಾರೆ. ಮೊದಲು ಖಾಲಿ ಗಾಡಿ ತೂಕ ಆಗುತ್ತದೆ. ಬಳಿಕ ಲೋಡ್‌ ಆದ ಗಾಡಿಯ ತೂಕ ಮಾಡಲಾಗುತ್ತದೆ. ಫಸಲಿನ ಒಟ್ಟು ತೂಕ (ವೇಮೆಂಟ್‌) ಹಾಕಲಾಗುತ್ತದೆ. ಬಳಿಕ ಅದಕ್ಕೆ ಹಣ ನೀಡುವುದು (ಪೇಮೆಂಟ್‌) ಈ ಪದ್ಧತಿಯ ಸಾರ. 

‘ಖರೀದಿಸಿದ ತಕ್ಷಣವೇ ಹಣ ನೀಡುವುದಾಗಿ ಖರೀದಿದಾರರು ಒಪ್ಪಿಕೊಳ್ಳುತ್ತಾರೆ. ಅದಾಗಿ ತಿಂಗಳು ಕಳೆದರೂ ಒಮ್ಮೊಮ್ಮೆ ಹಣ ನೀಡುವುದಿಲ್ಲ. ಇದು ರೈತರನ್ನು ಹೈರಾಣಾಗಿಸಿದೆ. ವೇಮೆಂಟ್‌ (ತೂಕ ಆದ ತಕ್ಷಣ) ಹಣ ನೀಡಿದರೆ ಅನುಕೂಲವಾಗಲಿದೆ. ಹೀಗಾಗಿ ವೇಮೆಂಟ್‌–ಪೇಮೆಂಟ್‌ ಪದ್ಧತಿ ಬದಲು ಲೋಡಿಂಗ್-ಪೇಮೆಂಟ್ ಅಥವಾ ಅಲ್ಲೇ ಹಣ ನೀಡುವ (ಸ್ಪಾಟ್‌ ಪೇಮೆಂಟ್) ಪದ್ಧತಿ ಜಾರಿಗೊಳಿಸಬೇಕು’ ಎಂಬುದು ರೈತರ ಒತ್ತಾಯ.

‘ರೈತರು ಭತ್ತ ಖರೀದಿಯ ಹಣವನ್ನು ಒಂದು ದಿನದಲ್ಲೇ ಕೊಡಬೇಕು ಎಂದು ಒತ್ತಾಯಿಸಿದರೆ ಖರೀದಿದಾರರು ಶೇ 2ರಷ್ಟು ಡಿಸ್ಕೌಂಟ್ (ಫಸಲಿನ ಒಟ್ಟು ಬೆಲೆಯಲ್ಲಿ ಶೇ 2ರಷ್ಟು ಹಣ ಕಡಿತ ಪದ್ಧತಿ) ಮಾಡಿ ಕೊಡುತ್ತೇನೆ ಎನ್ನುತ್ತಾರೆ. ಇದು ಸರಿಯಲ್ಲ. ನಮ್ಮ ಹಣ ನೀಡಲೂ ಡಿಸ್ಕೌಂಟ್‌ ಪದ್ಧತಿ ಸರಿಯೇ’ ಎಂದು ಪ್ರಶ್ನಿಸುತ್ತಾರೆ ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್‌. 

‘ಲೋಡ್‌ ಆದ ಬಳಿಕ ಒಂದು ಚೀಲಕ್ಕೆ 2 ಕೆ.ಜಿ.ಯಂತೆ ಸೂಟ್‌ ಮುರಿಯುತ್ತಾರೆ. ಒಬ್ಬ ರೈತ ಕನಿಷ್ಠ 200 ಚೀಲ ಭತ್ತ ಮಾರಿದರೆ ಅದರಲ್ಲಿ 400 ಕೆ.ಜಿ ಸೂಟ್‌ ಹೋಗುತ್ತದೆ. ಸಮರ್ಪಕ ಬೆಲೆ ಸಿಗದ ಈ ಹೊತ್ತಿನಲ್ಲಿ ಇಷ್ಟೊಂದು ಸೂಟ್‌ ಮುರಿದರೆ ಹೇಗೆ. ಇದಲ್ಲದೇ ಅವರು ಕರೆದುಕೊಂಡು ಬಂದ ಹಮಾಲಿ ಕಾರ್ಮಿಕರಿಗೂ ನಾವೇ ಕೂಲಿ ನೀಡಬೇಕು. ಒಂದು ಚೀಲಕ್ಕೆ ₹ 15 ರಂತೆ ಹಮಾಲಿ ಕೂಲಿ ತೆಗೆದುಕೊಳ್ಳುತ್ತಾರೆ. ಮತ್ತೆ ಚೀಲಕ್ಕೆ ತುಂಬುವಾಗ ‘ಸ್ಯಾಂಪಲ್‌’ ಎಂದು 50 ಕೆ.ಜಿ. ಭತ್ತವನ್ನು ಹಮಾಲರು ಪಡೆಯುತ್ತಾರೆ. ಈ ಎಲ್ಲ ವ್ಯವಸ್ಥೆಯಿಂದ ಹೆಚ್ಚಿನ ನಷ್ಟ ಅನುಭವಿಸಬೇಕಾಗಿದೆ’ ಎಂದು ಅವರು ವಾಸ್ತವ ತೆರೆದಿಟ್ಟರು.

‘ಹೀಗೆ ಎಲ್ಲದಕ್ಕೂ ರೈತರೇ ಹಣ ನೀಡುತ್ತಾ ಹೋದರೆ ಮುಂದೆ ಲಾರಿ ಬಾಡಿಗೆಯನ್ನೂ ರೈತರ ಮೇಲೆ ಹೇರುವ ಅಪಾಯ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಚೀಲಕ್ಕೆ ₹2 ಹಮಾಲಿ ಕೂಲಿ ಕೊಡಬೇಕು. 2 ಕೆ.ಜಿ ಸೂಟ್‌ ಕಡಿತ ಮಾಡುತ್ತಾರೆ. 100 ಚೀಲಕ್ಕೆ ಇಂತಿಷ್ಟು ಕಮಿಷನ್‌ ಕೂಡ ನೀಡಬೇಕು. ಜತೆಗೆ ಫಸಲಿನ ಖರೀದಿ ವೇಳೆ ಕೊಟ್ಟಿರುವ ದುಡ್ಡಿಗೆ ಬಡ್ಡಿಯನ್ನೂ ಖರೀದಾರರು ತೆಗೆದುಕೊಳ್ಳುತ್ತಾರೆ’ ಎಂದು ಬೇಸರಿಸಿದರು ರೈತ ಹಿರೇಮೆಗಳಗೆರೆಯ ಎನ್‌. ಬಸವರಾಜ್.

‘ಹಮಾಲಿ ಕೂಲಿಯನ್ನೂ ಕೊಡಬೇಕು. 100 ಚೀಲದಲ್ಲಿ ಒಂದು ಚೀಲ ಭತ್ತ ಕೊಡಬೇಕು. ರೈತರ ಸಂಕಷ್ಟ ಕೇಳುವವರು ಯಾರು’ ಎಂದು ಪ್ರಶ್ನಿಸಿದರು. 

‘ಜಮೀನಿಗೆ ಬಂದು ಖರೀದಿ ಮಾಡಿದರೂ ಚೀಲಕ್ಕೆ ₹ 12ರಂತೆ ಹಮಾಲಿ ಕೂಲಿ ಮುರಿಯುತ್ತಾರೆ. ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಪರಿಕರ ಸೇರಿದಂತೆ ಎಲ್ಲದಕ್ಕೂ ವ್ಯಾಪಾರಿಗಳಲ್ಲಿ ಸಾಲ ಮಾಡಿ ಹಣ ಪಡೆಯುತ್ತೇವೆ. ಬಳಿಕ ಅವರಿಗೆ ಫಸಲು ಮಾರುವುದು ಅನಿವಾರ್ಯ. ಅಲ್ಲದೇ ಸಾಲ ಮಾಡಿದ್ದಕ್ಕೂ ಬಡ್ಡಿ ನೀಡಬೇಕು. ಬೆಳೆ ಬೆಳೆಯಲು ₹ 1 ಲಕ್ಷ ಖರ್ಚು ಮಾಡಿದರೆ ₹ 30,000ದಿಂದ ₹40,000 ಕಮಿಷನ್‌ ಹೋಗುತ್ತದೆ’ ಎಂದು ದನಿಗೂಡಿಸಿದರು ರೈತ ನಾಗಪ್ಳರ ಅಂಜಿನಪ್ಪ.

‘ವಾಸ್ತವದಲ್ಲಿ ಹಮಾಲಿ ಕೂಲಿ, ಸೂಟ್‌ ಸೇರಿದಂತೆ ಎಲ್ಲದಕ್ಕೂ ರೈತರೇ ಹಣ ಕೊಡುವಂತಾಗಿದೆ. ನಮಗೆ ಯಾರು ಹಣ ನೀಡುತ್ತಾರೋ ಅವರ ಕೆಲಸ ಮಾಡುತ್ತೇವೆ. ನಾವೂ ರೈತರೇ ಆಗಿದ್ದರಿಂದ ರೈತರ ಕಷ್ಟದ ಅರಿವಿದೆ’ ಎಂದರು ಹಮಾಲಿ ಕಾರ್ಮಿಕ ನಾಗರಾಜ ಹುಲಕಮ್ಮನವರ.

‘ನಮಗೆ ದಿನಕ್ಕೆ ಸಿಗುವುದೇ ₹ 200 ರಿಂದ ₹ 300 ಕೂಲಿ. ಸೀಸನ್‌ ಇದ್ದಾಗ ಮಾತ್ರ ಕೆಲಸ. ಇಲ್ಲದಿದ್ದಾಗ ಊರಿನಲ್ಲಿ ಹೊಲದ ಕೆಲಸ ಮಾಡುತ್ತೇವೆ. ರಾಶಿ ತುಂಬು ಎಂದರೆ ತುಂಬುತ್ತೇವೆ. ಕೂಲಿಯ ವಿಚಾರ ದಲ್ಲಾಳಿಗಳು, ಖರೀದಿದಾರರು, ರೈತರು ನೋಡಿಕೊಳ್ಳುತ್ತಾರೆ’ ಎಂದು ಹಮಾಲಿ ಕಾರ್ಮಿಕ ರವಿ ಮಜ್ಜಿಗೆ ಹೇಳಿದರು.  

ಹರಿಹರದ ಎಪಿಎಂಸಿಯಲ್ಲಿ ಬಿಳಿ ಜೋಳವನ್ನು ಚೀಲಗಳಿಗೆ ತುಂಬುತ್ತಿರುವ ಹಮಾಲಿ ಕಾರ್ಮಿಕರು
ಹರಿಹರದ ಎಪಿಎಂಸಿಯಲ್ಲಿ ಬಿಳಿ ಜೋಳವನ್ನು ಚೀಲಗಳಿಗೆ ತುಂಬುತ್ತಿರುವ ಹಮಾಲಿ ಕಾರ್ಮಿಕರು
ದಾವಣಗೆರೆಯ ಎಪಿಎಂಸಿಯಲ್ಲಿ ರೈತರು ಮೆಕ್ಕೆಜೋಳವನ್ನು ತೂಕ ಮಾಡಿ ಚೀಲಕ್ಕೆ ತುಂಬುತ್ತಿರುವುದು 
ದಾವಣಗೆರೆಯ ಎಪಿಎಂಸಿಯಲ್ಲಿ ರೈತರು ಮೆಕ್ಕೆಜೋಳವನ್ನು ತೂಕ ಮಾಡಿ ಚೀಲಕ್ಕೆ ತುಂಬುತ್ತಿರುವುದು 
ದಾವಣಗೆರೆಯ ಎಪಿಎಂಸಿಯಲ್ಲಿ ಭತ್ತದ ಚೀಲ ಹೊಲಿಯುತ್ತಿರುವ ಕಾರ್ಮಿಕರು
ದಾವಣಗೆರೆಯ ಎಪಿಎಂಸಿಯಲ್ಲಿ ಭತ್ತದ ಚೀಲ ಹೊಲಿಯುತ್ತಿರುವ ಕಾರ್ಮಿಕರು
ದಾವಣಗೆರೆಯ ಎಪಿಎಂಸಿ ಆವರಣದಲ್ಲಿ ಒಣಗಿಸಿದ ಭತ್ತವನ್ನು ರಾಶಿ ಮಾಡುತ್ತಿರುವ ಕಾರ್ಮಿಕರು 
ದಾವಣಗೆರೆಯ ಎಪಿಎಂಸಿ ಆವರಣದಲ್ಲಿ ಒಣಗಿಸಿದ ಭತ್ತವನ್ನು ರಾಶಿ ಮಾಡುತ್ತಿರುವ ಕಾರ್ಮಿಕರು 
ದಾವಣಗೆರೆಯ ಎಪಿಎಂಸಿಯಲ್ಲಿ ಭತ್ತದ ಚೀಲಗಳನ್ನು ಲಾರಿಗೆ ಲೋಡ್‌ ಮಾಡುತ್ತಿರುವ ಹಮಾಲಿ ಕಾರ್ಮಿಕರು
ದಾವಣಗೆರೆಯ ಎಪಿಎಂಸಿಯಲ್ಲಿ ಭತ್ತದ ಚೀಲಗಳನ್ನು ಲಾರಿಗೆ ಲೋಡ್‌ ಮಾಡುತ್ತಿರುವ ಹಮಾಲಿ ಕಾರ್ಮಿಕರು
ಎಪಿಎಂಸಿಯಲ್ಲಿ ರೈತ ಮೂಕ ಪ್ರೇಕ್ಷಕ
‘ಹೊಲದಲ್ಲಾದರೆ ರೈತರೇ ದರ ನಿಗದಿ ಮಾಡಬಹುದು. ಆದರೆ ಎಪಿಎಂಸಿಯಲ್ಲಿ ರೈತರು ಮೂಕ ಪ್ರೇಕ್ಷಕರಂತಿರಬೇಕು. ಕೂಲಿ ಸಾಗಣೆ ವೆಚ್ಚದ ಕಾರಣ ಎಲ್ಲ ರೈತರಿಗೂ ಎಪಿಎಂಸಿಗೆ ಫಸಲು ತರಲು ಆಗುವುದಿಲ್ಲ. ಹೊಲದಲ್ಲಿ ಎಷ್ಟು ದಿನ ಬೇಕಾದರೂ ಇಡಬಹುದು. ಆದರೆ ಎಪಿಎಂಸಿಯಲ್ಲಿ ದಾಸ್ತಾನು ಮಾಡುವುದು ಕಷ್ಟ. ಅಲ್ಲಿ ರಕ್ಷಣೆ ಇಲ್ಲ. ರಾತ್ರಿಯಿಡೀ ಕಾಯಬೇಕು. ಕಮಿಷನ್‌ ಕೊಡಬೇಕು. ದರದಲ್ಲೂ ವ್ಯತ್ಯಾಸ ಇರುತ್ತದೆ. ತೂಕದಲ್ಲೂ ನಷ್ಟವಾಗುತ್ತದೆ. ಈ ಎಲ್ಲ ಕಾರಣದಿಂದ ರೈತರು ಹೊಲದಲ್ಲೇ ಫಸಲು ಮಾರಾಟ ಮಾಡಲು ಉತ್ಸಾಹ ತೋರುತ್ತಾರೆ ಎಂದು ಎಪಿಎಂಸಿಯಲ್ಲಿನ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು ಕೊಳೇನಹಳ್ಳಿ ಬಿ.ಎಂ. ಸತೀಶ್. ‘ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ವಿರೋಧ ಮಾಡುತ್ತಿರುವುದು ಸರಿಯಲ್ಲ. ಸರ್ಕಾರ ಕಮಿಷನ್‌ ಏಜೆಂಟ್ ಎಂದು ಪರವಾನಗಿ ನೀಡುತ್ತದೆ. ಇದರ ಅರ್ಥ ಪರೋಕ್ಷವಾಗಿ ಕಮಿಷನ್‌ ತೆಗೆದುಕೊಳ್ಳಬಹುದು ಎಂಬುದು. ಹಾಗಾದರೆ ಈ ವ್ಯವಸ್ಥೆ ಏನು’ ಎಂದು ಪ್ರಶ್ನಿಸುತ್ತಾರೆ. ಮಾರುಕಟ್ಟೆ ಆರಂಭದಿಂದಲೂ ಇರುವ ಪದ್ಧತಿ ‘ಖರೀದಿದಾರರ ಹಮಾಲಿಗಳು ಬೇರೆ ರೈತರ ಹಮಾಲಿಗಳು ಬೇರೆ. ಹಮಾಲಿ ಕೂಲಿ ಕೊಡುವುದು ಮಾರುಕಟ್ಟೆ ವ‌್ಯವಸ್ಥೆ ಆರಂಭದಾಗಿನಿಂದ ಇರುವ ಪದ್ಧತಿ. ರೈತರೇ ಒಂದು ತೂಕ ಮಾಡಿ ಫಸಲು ನೀಡಿದರೆ ಯಾವ ಹಮಾಲಿ ಕಾರ್ಮಿಕರೂ ಬೇಕಾಗಿಲ್ಲ. ಆದರೆ ಅದು ಆಗದ ಕಾರಣ ಹಮಾಲಿ ಕೂಲಿ ಕೊಡುವುದು ಸಹಜ’ ಎಂದು ವರ್ತಕ ಪ್ರತಿನಿಧಿ ದೊಗ್ಗಳ್ಳಿ ಬಸವರಾಜ್‌ ಹೇಳಿದರು. ‘ಖರೀದಿದಾರರ ಹಮಾಲಿ ಕಾರ್ಮಿಕರಿಗೆ ರೈತರು ಕೂಲಿ ಕೊಡಬೇಕಾಗಿಲ್ಲ. ಅದನ್ನು ಖರೀದಿದಾರರೇ ಕೊಡುತ್ತಾರೆ. ಆದರೆ ದಲ್ಲಾಳಿ ಅಂಗಡಿ ಹಮಾಲಿ ಕಾರ್ಮಿಕರು ರೈತರ ಕೆಲಸವನ್ನು ತಾವೇ ನಿರ್ವಹಿಸುತ್ತಾರೆ. ರಾಶಿ ಹಾಕುವುದು ಲೋಡಿಂಗ್–ಅನ್‌ಲೋಡಿಂಗ್‌ ಫಸಲು ಹಸನು ಮಾಡುತ್ತಾರೆ. ಆಗ ಅವರಿಗೆ ರೈತರು ಕೂಲಿ ಕೊಡಬೇಕಾದುದು ಸಹಜ. ಈ ಬಗ್ಗೆ ಚರ್ಚೆಯಾಗಲಿ’ ಎಂದರು.
ಸ್ಪಷ್ಟ ನಿರ್ಧಾರಕ್ಕೆ ಬರಲಿ ಎನ್.ಕೆ. ಆಂಜನೇಯ
ಹೊನ್ನಾಳಿ: ಫಸಲು ಖರೀದಿಯ ಹಮಾಲಿ ಕೂಲಿ ರೈತರು ಕೊಡಬೇಕು ಎಂಬುದು ಖರೀದಿದಾರರ ಒತ್ತಾಯವಾದರೆ ವ್ಯಾಪಾರಿಗಳು ಕೊಡಬೇಕು ಎಂಬುದು ತಾಲ್ಲೂಕಿನ ರೈತರ ವಾದ.  ‘2020ಕ್ಕೂ ಮೊದಲು ರೈತರು ಒಂದಿಷ್ಟು ಕಾಳುಗಳನ್ನು ಹಮಾಲರಿಗೆ ಕೊಡುತ್ತಿದ್ದರು. ಆದರೆ ಇತ್ತೀಚೆಗೆ ಅವರು ಒಂದು ಬ್ಯಾಗ್‌ಗೆ ಕೇವಲ ₹ 5 ಮಾತ್ರ ಕೊಡುತ್ತಿದ್ದಾರೆ. ಇದರಿಂದ ನಮಗೆ ನಷ್ಟವಾಗುತ್ತಿದೆ. ಮೊದಲಿನಂತೆಯೇ ಅವರು ಕಾಳು ಕೊಟ್ಟರೆ ಅನುಕೂಲವಾಗುತ್ತದೆ’ ಎಂಬುದು ಹಮಾಲಿ ಕಾರ್ಮಿಕರ ಒತ್ತಾಯ. ‘ರೈತರು ತಾವೇ ಎಂಪಿಎಂಸಿ ಪ್ರಾಂಗಣಕ್ಕೆ ಫಸಲು ತಂದರೆ ಹಮಾಲಿ ಕೂಲಿ ಕೊಡಬೇಕಾಗಿಲ್ಲ. ಆದರೆ ನಾವೇ ಹಳ್ಳಿಗಳಿಗೆ ಹೋಗಿ ಖರೀದಿ ಮಾಡಿ ತಂದರೆ ಅದಕ್ಕೆ ಹಮಾಲಿ ಕೂಲಿ ಕೊಡಬೇಕಾಗುತ್ತದೆ. ವರ್ತಕರು ಹಳ್ಳಿಗಳಿಗೆ ಹೋದರೆ ಸಾರಿಗೆ ವೆಚ್ಚ ಬರುತ್ತದೆ’ ಎನ್ನುತ್ತಾರೆ ವಾಸವಿ ಟ್ರೇಡರ್ಸ್ ಮಾಲೀಕ ವಿನಾಯಕ ಶೆಟ್ಟಿ. ‘ರೈತರು ಹಣದ ಬದಲು ಕಾಳು ಕೊಟ್ಟರೆ ನಮಗೆ ಅನುಕೂಲ ಆಗುತ್ತದೆ’ ಎನ್ನುತ್ತಾರೆ ಹಮಾಲಿ ಕಾರ್ಮಿಕ ಅರಬಗಟ್ಟೆ ಚಿಕ್ಕಪ್ಪ. ‘ನಾವು ಬೆಳೆದ ಬೆಳೆಗಳನ್ನು ಎಪಿಎಂಸಿ ಪ್ರಾಂಗಣಕ್ಕೆ ತಂದು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದಾಗಿ ತೊಂದರೆಯಾಗಿದೆ. ಸರಿಯಾಗಿ ಮಳೆ ಬೆಳೆ ಇಲ್ಲ ಬೆಲೆಯೂ ಇಲ್ಲ. ಹಮಾಲರಿಗೆ ಕಾಳು ಕೊಡಲು ಸಾಧ್ಯವಿಲ್ಲ. ಖರೀದಿದಾರರೇ ಹಮಾಲಿ ಕೂಲಿ ಕೊಡಬೇಕು’ ಎನ್ನುತ್ತಾರೆ ರೈತ ಕರಿಬಸಪ್ಪ.
ಎಪಿಎಂಸಿಯಲ್ಲೇ ಮಾರಾಟ: ತಪ್ಪಲಿದೆ ಹೊರೆ ಇನಾಯತ್‌ ಉಲ್ಲಾ ಟಿ.
ಹರಿಹರ: ಇಲ್ಲಿನ ಎಪಿಎಂಸಿಯಲ್ಲಿ ರೈತರು ಧಾನ್ಯಗಳ ಮಾರಾಟಕ್ಕೆ ಬರುವುದು ಅಪರೂಪ. ವ್ಯಾಪಾರಿಗಳು ಗ್ರಾಮೀಣ ಭಾಗದ ಜಮೀನುಗಳಿಗೆ ತೆರಳಿ ಬೆಳೆಯನ್ನು ಖರೀದಿಸುತ್ತಾರೆ. ರೈತರೇ ವಾಹನಗಳಲ್ಲಿ ತಂದು ವ್ಯಾಪಾರಿಗಳಿಗೆ ತಲುಪಿಸುವ ರೂಢಿ ತಾಲ್ಲೂಕಿನಲ್ಲಿದೆ. ಧಾನ್ಯಗಳನ್ನು ಲೋಡ್‌ ಮಾಡುವಾಗ ಹಮಾಲರ ಕೂಲಿಯ ಭಾರ ದಲ್ಲಾಳಿಗಳ ಜೊತೆಗೆ ರೈತರ ಮೇಲೂ ಬೀಳುತ್ತಿದೆ. ಭತ್ತ ಮೆಕ್ಕೆಜೋಳ ಅಥವಾ ಬೇರೆ ಬೆಳೆಗಳನ್ನು ವಾಹನಗಳಿಗೆ ಲೋಡ್ ಮಾಡಿದರೆ ಹಮಾಲರಿಗೆ ವ್ಯಾಪಾರಿಗಳು ಒಂದು ಚೀಲಕ್ಕೆ ಇಂತಿಷ್ಟು ಹಣ ಪಾವತಿಸಿದರೆ ರೈತರು ಹಮಾಲರಿಗೆ ಕೂಲಿಯ ರೂಪದಲ್ಲಿ ಇಂತಿಷ್ಟು ದವಸ ಧಾನ್ಯವನ್ನು ನೀಡುವ ರೂಢಿ ಇದೆ. ವ್ಯಾಪಾರಿಯೇ ಹಮಾಲರ ಕೂಲಿಯನ್ನು ಪೂರ್ಣವಾಗಿ ಪಾವತಿಸುವುದು ನ್ಯಾಯಯುತ. ಆದರೆ ಹಮಾಲರ ಕೂಲಿ ಪಾವತಿಯ ಭಾರ ರೈತರ ಮೇಲೂ ಬೀಳುತ್ತಿದೆ. ಎಲ್ಲಾ ರೈತರು ತಮ್ಮ ಬೆಳೆಗಳನ್ನು ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲೇ ಮಾರಾಟ ಮಾಡಿದರೆ ರೈತರ ಮೇಲೆ ಬೀಳುತ್ತಿರುವ ಹಮಾಲಿ ಕೂಲಿಯ ಭಾರ ತಪ್ಪಬಹುದು ಎಂಬುದು ರೈತರ ಮಾತು.‘ಮಳೆ ಕೊರತೆ ಬೆಲೆಗಳ ಏರಿಳಿತದಲ್ಲಿ ಬಸವಳಿಯುವ ರೈತರ ಮೇಲೆ ಹಮಾಲಿ ಕೂಲಿಯ ಭಾರ ಹೊರೆಸುವುದು ಸರಿಯಲ್ಲ. ಹಮಾಲರ ಕೂಲಿಯನ್ನು ವ್ಯಾಪಾರಿಗಳಿಂದಲೇ ಪಾವತಿಸುವಂತಾಗಬೇಕು’ ಎಂದು ಒತ್ತಾಯಿಸುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಜಿ. ಪ್ರಭುಗೌಡ. ‘ಧಾನ್ಯಗಳನ್ನು ರಾಶಿಯಿಂದ ಚೀಲಕ್ಕೆ ತುಂಬಿ ವಾಹನಗಳಿಗೆ ಲೋಡ್ ಮಾಡಿದ್ದಕ್ಕೆ ದಲ್ಲಾಳಿ ವ್ಯಾಪಾರಸ್ಥರು ಇಂತಿಷ್ಟು ಎಂದು ಕೂಲಿ ಪಾವತಿಸುತ್ತಾರೆ. ಇದರೊಂದಿಗೆ ರೈತರೂ ಇಂತಿಷ್ಟು ಎಂದು ಬೆಳೆಯನ್ನು ಸ್ಯಾಂಪಲ್ ರೂಪದಲ್ಲಿ ಕೊಡುವ ರೂಢಿ ಇದೆ’ ಎನ್ನುತ್ತಾರೆ ದಲ್ಲಾಳಿ ವ್ಯಾಪಾರಿ ಹಲಸಬಾಳು ಬಸವರಾಜಪ್ಪ. ‘ರಾಣೆಬೆನ್ನೂರಿನಲ್ಲಿ ಬಹುತೇಕ ರೈತರು ತಮ್ಮ ಬೆಳೆಗಳನ್ನು ಎಪಿಎಂಸಿಯಲ್ಲೇ ಮಾರಾಟ ಮಾಡುತ್ತಾರೆ. ಹೀಗಾಗಿ ಅಲ್ಲಿ ರೈತರು ಹಮಾಲಿ ಕೂಲಿ ಪಾವತಿಸುವುದು ಕಡಿಮೆ. ಆದರೆ ಇಲ್ಲಿ ವ್ಯಾಪಾರಿಗಳ ಜೊತೆಗೆ ರೈತರೂ ಸ್ಯಾಂಪಲ್ ರೂಪದಲ್ಲಿ ಹಮಾಲರಿಗೆ ಇಂತಿಷ್ಟು ಧಾನ್ಯ ನೀಡುತ್ತಾರೆ’ ಎಂದು ಹಮಾಲರ ಸಂಘದ ಕಾರ್ಯದರ್ಶಿ ಗೋವಿಂದಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT