ದಾವಣಗೆರೆ: ಬೆಳೆ ನಷ್ಟ, ಮಳೆ ಕೊರತೆ, ಹಾಗೋ ಹೀಗೋ ಬೆಳೆದ ಪೈರಿಗೆ ಸಿಗದ ಸಮರ್ಪಕ ಬೆಲೆ...
ಹೀಗೆ ರೈತರು ಹತ್ತು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇದರ ಜೊತೆಗೆ ವೇಮೆಂಟ್–ಪೇಮೆಂಟ್ ವ್ಯವಸ್ಥೆ, ಹಮಾಲಿ ಕೂಲಿ, ಸೂಟ್ ಮುರಿಯುವ ಪದ್ಧತಿಯು ‘ಅನ್ನದಾತ’ನ ಸಂಕಷ್ಟವನ್ನು ಇಮ್ಮಡಿಗೊಳಿಸಿದೆ. ಇವುಗಳ ವಿರುದ್ಧ ರೈತರು ಗಟ್ಟಿ ದನಿ ಎತ್ತುತ್ತಿದ್ದರೂ ಯಾವ ಪ್ರಯೋಜನವೂ ಆಗುತ್ತಿಲ್ಲ.
ಖರೀದಿದಾರರು, ರೈತರು, ದಲ್ಲಾಳಿಗಳು ಈ ಬಗ್ಗೆ ಚರ್ಚೆ ನಡೆಸಿ ಸ್ಪಷ್ಟ ನಿರ್ಧಾರಕ್ಕೆ ಬರಬೇಕು ಎಂಬುದು ದಶಕಗಳ ಬೇಡಿಕೆ. ಆದರೆ ಇದಕ್ಕೆ ಈವರೆಗೂ ಮನ್ನಣೆ ಸಿಕ್ಕಿಲ್ಲ. ಈ ವ್ಯವಸ್ಥೆಗಳಿಂದ ಹೈರಾಣಾಗಿರುವ ರೈತರು ಮತ್ತೆ ಇವುಗಳ ವಿರುದ್ಧ ದನಿ ಎತ್ತುತ್ತಿದ್ದಾರೆ. ಅವರ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ.
ಎಪಿಎಂಸಿಯಲ್ಲಿ ರೈತರು ಮೂಕ ಪ್ರೇಕ್ಷಕರಾಗಿರಬೇಕಾದ ಪರಿಸ್ಥಿತಿ ಬಂದೆರಗಿದೆ. ಈ ನಡುವೆಯೇ ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ನಿಷೇಧಿಸಲು ಮುಂದಾಗಿದೆ. ಇದು ರೈತರ ದನಿ ಅಡಗಿಸುವ ಹುನ್ನಾರ ಎಂಬ ಆರೋಪವೂ ಕೇಳಿಬರುತ್ತಿದೆ.
ಎಪಿಎಂಸಿಯಲ್ಲಿ ಬೆಳೆ ತಂದರೆ ಹಮಾಲಿ ಕೂಲಿಯನ್ನು ರೈತರೇ ಕೊಡಬೇಕು. ಸೂಟ್ ಮುರಿಯುವ ಪದ್ಧತಿಯೂ ಇದೆ. ಇದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಇದರಿಂದ ಮಳೆ ಕೊರತೆ ನಡುವೆಯೂ ಅಲ್ಪಸ್ವಲ್ಪ ಬೆಳೆ ಬೆಳೆದಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜಮೀನಿನಲ್ಲೇ ಬೆಳೆ ಖರೀದಿಗೆ ಬರುವ ವ್ಯಾಪಾರಿಗಳೂ ಹಮಾಲಿ ಕೂಲಿಯನ್ನು ರೈತರಿಂದಲೇ ಪಡೆಯುತ್ತಾರೆ ಎಂಬುದು ರೈತರ ಅಳಲು.
ಖರೀದಿದಾರರು ಕಡಿಮೆ ದರ ನೀಡಿ, ರೈತರನ್ನು ವಂಚಿಸುತ್ತಾರೆ. ಹಮಾಲರ ಕೂಲಿಯನ್ನು ಖರೀದಿದಾರರೇ ನೀಡಬೇಕು. ಡಿಸ್ಕೌಂಟ್ ಪದ್ಧತಿ ರದ್ದುಗೊಳಿಸಬೇಕು ಎಂಬುದು ಕೃಷಿಕರ ಒತ್ತಾಯ.
‘ನಮ್ಮ ಹಮಾಲಿ ಕಾರ್ಮಿಕರಿಗೆ ನಾವೇ ಕೂಲಿ ನೀಡುತ್ತೇವೆ. ಮಾರುಕಟ್ಟೆ ಆರಂಭವಾದಾಗಿನಿಂದಲೂ ಇದೇ ಪದ್ಧತಿ ಇದೆ. ಈ ಬಗ್ಗೆ ಚರ್ಚೆಯಾದರೆ ನಮ್ಮ ಅಭ್ಯಂತರವಿಲ್ಲ’ ಎಂಬುದು ಖರೀದಿದಾರರ ವಾದ.
ಭತ್ತ, ಮೆಕ್ಕೆಜೋಳ ಸೇರಿದಂತೆ ಇತರೆ ಧಾನ್ಯಗಳನ್ನು ಕೆಲ ವ್ಯಾಪಾರಿಗಳು ರೈತರ ಹೊಲಕ್ಕೆ ಹೋಗಿ ಖರೀದಿ ಮಾಡುತ್ತಾರೆ. ಮೊದಲು ಖಾಲಿ ಗಾಡಿ ತೂಕ ಆಗುತ್ತದೆ. ಬಳಿಕ ಲೋಡ್ ಆದ ಗಾಡಿಯ ತೂಕ ಮಾಡಲಾಗುತ್ತದೆ. ಫಸಲಿನ ಒಟ್ಟು ತೂಕ (ವೇಮೆಂಟ್) ಹಾಕಲಾಗುತ್ತದೆ. ಬಳಿಕ ಅದಕ್ಕೆ ಹಣ ನೀಡುವುದು (ಪೇಮೆಂಟ್) ಈ ಪದ್ಧತಿಯ ಸಾರ.
‘ಖರೀದಿಸಿದ ತಕ್ಷಣವೇ ಹಣ ನೀಡುವುದಾಗಿ ಖರೀದಿದಾರರು ಒಪ್ಪಿಕೊಳ್ಳುತ್ತಾರೆ. ಅದಾಗಿ ತಿಂಗಳು ಕಳೆದರೂ ಒಮ್ಮೊಮ್ಮೆ ಹಣ ನೀಡುವುದಿಲ್ಲ. ಇದು ರೈತರನ್ನು ಹೈರಾಣಾಗಿಸಿದೆ. ವೇಮೆಂಟ್ (ತೂಕ ಆದ ತಕ್ಷಣ) ಹಣ ನೀಡಿದರೆ ಅನುಕೂಲವಾಗಲಿದೆ. ಹೀಗಾಗಿ ವೇಮೆಂಟ್–ಪೇಮೆಂಟ್ ಪದ್ಧತಿ ಬದಲು ಲೋಡಿಂಗ್-ಪೇಮೆಂಟ್ ಅಥವಾ ಅಲ್ಲೇ ಹಣ ನೀಡುವ (ಸ್ಪಾಟ್ ಪೇಮೆಂಟ್) ಪದ್ಧತಿ ಜಾರಿಗೊಳಿಸಬೇಕು’ ಎಂಬುದು ರೈತರ ಒತ್ತಾಯ.
‘ರೈತರು ಭತ್ತ ಖರೀದಿಯ ಹಣವನ್ನು ಒಂದು ದಿನದಲ್ಲೇ ಕೊಡಬೇಕು ಎಂದು ಒತ್ತಾಯಿಸಿದರೆ ಖರೀದಿದಾರರು ಶೇ 2ರಷ್ಟು ಡಿಸ್ಕೌಂಟ್ (ಫಸಲಿನ ಒಟ್ಟು ಬೆಲೆಯಲ್ಲಿ ಶೇ 2ರಷ್ಟು ಹಣ ಕಡಿತ ಪದ್ಧತಿ) ಮಾಡಿ ಕೊಡುತ್ತೇನೆ ಎನ್ನುತ್ತಾರೆ. ಇದು ಸರಿಯಲ್ಲ. ನಮ್ಮ ಹಣ ನೀಡಲೂ ಡಿಸ್ಕೌಂಟ್ ಪದ್ಧತಿ ಸರಿಯೇ’ ಎಂದು ಪ್ರಶ್ನಿಸುತ್ತಾರೆ ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್.
‘ಲೋಡ್ ಆದ ಬಳಿಕ ಒಂದು ಚೀಲಕ್ಕೆ 2 ಕೆ.ಜಿ.ಯಂತೆ ಸೂಟ್ ಮುರಿಯುತ್ತಾರೆ. ಒಬ್ಬ ರೈತ ಕನಿಷ್ಠ 200 ಚೀಲ ಭತ್ತ ಮಾರಿದರೆ ಅದರಲ್ಲಿ 400 ಕೆ.ಜಿ ಸೂಟ್ ಹೋಗುತ್ತದೆ. ಸಮರ್ಪಕ ಬೆಲೆ ಸಿಗದ ಈ ಹೊತ್ತಿನಲ್ಲಿ ಇಷ್ಟೊಂದು ಸೂಟ್ ಮುರಿದರೆ ಹೇಗೆ. ಇದಲ್ಲದೇ ಅವರು ಕರೆದುಕೊಂಡು ಬಂದ ಹಮಾಲಿ ಕಾರ್ಮಿಕರಿಗೂ ನಾವೇ ಕೂಲಿ ನೀಡಬೇಕು. ಒಂದು ಚೀಲಕ್ಕೆ ₹ 15 ರಂತೆ ಹಮಾಲಿ ಕೂಲಿ ತೆಗೆದುಕೊಳ್ಳುತ್ತಾರೆ. ಮತ್ತೆ ಚೀಲಕ್ಕೆ ತುಂಬುವಾಗ ‘ಸ್ಯಾಂಪಲ್’ ಎಂದು 50 ಕೆ.ಜಿ. ಭತ್ತವನ್ನು ಹಮಾಲರು ಪಡೆಯುತ್ತಾರೆ. ಈ ಎಲ್ಲ ವ್ಯವಸ್ಥೆಯಿಂದ ಹೆಚ್ಚಿನ ನಷ್ಟ ಅನುಭವಿಸಬೇಕಾಗಿದೆ’ ಎಂದು ಅವರು ವಾಸ್ತವ ತೆರೆದಿಟ್ಟರು.
‘ಹೀಗೆ ಎಲ್ಲದಕ್ಕೂ ರೈತರೇ ಹಣ ನೀಡುತ್ತಾ ಹೋದರೆ ಮುಂದೆ ಲಾರಿ ಬಾಡಿಗೆಯನ್ನೂ ರೈತರ ಮೇಲೆ ಹೇರುವ ಅಪಾಯ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಚೀಲಕ್ಕೆ ₹2 ಹಮಾಲಿ ಕೂಲಿ ಕೊಡಬೇಕು. 2 ಕೆ.ಜಿ ಸೂಟ್ ಕಡಿತ ಮಾಡುತ್ತಾರೆ. 100 ಚೀಲಕ್ಕೆ ಇಂತಿಷ್ಟು ಕಮಿಷನ್ ಕೂಡ ನೀಡಬೇಕು. ಜತೆಗೆ ಫಸಲಿನ ಖರೀದಿ ವೇಳೆ ಕೊಟ್ಟಿರುವ ದುಡ್ಡಿಗೆ ಬಡ್ಡಿಯನ್ನೂ ಖರೀದಾರರು ತೆಗೆದುಕೊಳ್ಳುತ್ತಾರೆ’ ಎಂದು ಬೇಸರಿಸಿದರು ರೈತ ಹಿರೇಮೆಗಳಗೆರೆಯ ಎನ್. ಬಸವರಾಜ್.
‘ಹಮಾಲಿ ಕೂಲಿಯನ್ನೂ ಕೊಡಬೇಕು. 100 ಚೀಲದಲ್ಲಿ ಒಂದು ಚೀಲ ಭತ್ತ ಕೊಡಬೇಕು. ರೈತರ ಸಂಕಷ್ಟ ಕೇಳುವವರು ಯಾರು’ ಎಂದು ಪ್ರಶ್ನಿಸಿದರು.
‘ಜಮೀನಿಗೆ ಬಂದು ಖರೀದಿ ಮಾಡಿದರೂ ಚೀಲಕ್ಕೆ ₹ 12ರಂತೆ ಹಮಾಲಿ ಕೂಲಿ ಮುರಿಯುತ್ತಾರೆ. ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಪರಿಕರ ಸೇರಿದಂತೆ ಎಲ್ಲದಕ್ಕೂ ವ್ಯಾಪಾರಿಗಳಲ್ಲಿ ಸಾಲ ಮಾಡಿ ಹಣ ಪಡೆಯುತ್ತೇವೆ. ಬಳಿಕ ಅವರಿಗೆ ಫಸಲು ಮಾರುವುದು ಅನಿವಾರ್ಯ. ಅಲ್ಲದೇ ಸಾಲ ಮಾಡಿದ್ದಕ್ಕೂ ಬಡ್ಡಿ ನೀಡಬೇಕು. ಬೆಳೆ ಬೆಳೆಯಲು ₹ 1 ಲಕ್ಷ ಖರ್ಚು ಮಾಡಿದರೆ ₹ 30,000ದಿಂದ ₹40,000 ಕಮಿಷನ್ ಹೋಗುತ್ತದೆ’ ಎಂದು ದನಿಗೂಡಿಸಿದರು ರೈತ ನಾಗಪ್ಳರ ಅಂಜಿನಪ್ಪ.
‘ವಾಸ್ತವದಲ್ಲಿ ಹಮಾಲಿ ಕೂಲಿ, ಸೂಟ್ ಸೇರಿದಂತೆ ಎಲ್ಲದಕ್ಕೂ ರೈತರೇ ಹಣ ಕೊಡುವಂತಾಗಿದೆ. ನಮಗೆ ಯಾರು ಹಣ ನೀಡುತ್ತಾರೋ ಅವರ ಕೆಲಸ ಮಾಡುತ್ತೇವೆ. ನಾವೂ ರೈತರೇ ಆಗಿದ್ದರಿಂದ ರೈತರ ಕಷ್ಟದ ಅರಿವಿದೆ’ ಎಂದರು ಹಮಾಲಿ ಕಾರ್ಮಿಕ ನಾಗರಾಜ ಹುಲಕಮ್ಮನವರ.
‘ನಮಗೆ ದಿನಕ್ಕೆ ಸಿಗುವುದೇ ₹ 200 ರಿಂದ ₹ 300 ಕೂಲಿ. ಸೀಸನ್ ಇದ್ದಾಗ ಮಾತ್ರ ಕೆಲಸ. ಇಲ್ಲದಿದ್ದಾಗ ಊರಿನಲ್ಲಿ ಹೊಲದ ಕೆಲಸ ಮಾಡುತ್ತೇವೆ. ರಾಶಿ ತುಂಬು ಎಂದರೆ ತುಂಬುತ್ತೇವೆ. ಕೂಲಿಯ ವಿಚಾರ ದಲ್ಲಾಳಿಗಳು, ಖರೀದಿದಾರರು, ರೈತರು ನೋಡಿಕೊಳ್ಳುತ್ತಾರೆ’ ಎಂದು ಹಮಾಲಿ ಕಾರ್ಮಿಕ ರವಿ ಮಜ್ಜಿಗೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.