ಜಗಳೂರು: ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಮುಂಗಾರು ಋತುವಿನ ರಾಗಿ ಖರೀದಿಯನ್ನು 20 ಕ್ವಿಂಟಲ್ನಿಂದ 50 ಕ್ವಿಂಟಲ್ವರೆಗೆ ಹೆಚ್ಚಳ ಮಾಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮಹಾತ್ಮ ಗಾಂಧಿ ವೃತ್ತ ಹಾಗೂ ಅಂಬೇಡ್ಕರ್ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿಗೆ ಬಂದು ಮನವಿ ಸಲ್ಲಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಚಿರಂಜೀವಿ ಮಾತನಾಡಿ, ‘ಕಳೆದ 2020-2021ನೇ ಸಾಲಿನಲ್ಲಿ ರಾಗಿ ಖರೀದಿ ಕೇಂದ್ರದಲ್ಲಿ 50 ಕ್ವಿಂಟಲ್ವರೆಗೆ ಖರೀದಿ ಮಾಡಲಾಗುತ್ತಿತ್ತು. ಪ್ರಸಕ್ತ ಸಾಲಿನಲ್ಲಿ ಕೇವಲ 20 ಕ್ವಿಂಟಲ್ ಖರೀದಿಗೆ ಮಾತ್ರ ನಿಗದಿ ಮಾಡಿದ್ದು, ವಕಾಶ ನೀಡಲಾಗಿದೆ. ಸಾಗಾಣಿಕೆ ವೆಚ್ಚ ಸೇರಿ ರೈತರಿಗೆ ಸಾಕಷ್ಟು ನಷ್ಟವಾಗುತ್ತಿದೆ. ಆದ್ದರಿಂದ ಖರೀದಿಯನ್ನು 50 ಕ್ವಿಂಟಲ್ಗೆ ನಿಗದಿಗೊಳಿಸಿ ಪ್ರತಿ ಕ್ವಿಂಟಲ್ಗೆ ₹ 500 ಪ್ರೋತ್ಸಾಹಧನ ನೀಡಬೇಕು’ ಎಂದು ಒತ್ತಾಯಿಸಿದರು.
ಗೌರವಾಧ್ಯಕ್ಷ ಗಂಗಾಧರಪ್ಪ, ಪದಾಧಿಕಾರಿಗಳಾದ ಗೌಡ ಗೊಂಡನಹಳ್ಳಿ ಸತೀಶ್, ರಾಜು, ಕೆಂಚಪ್ಪ, ಪ್ರಹ್ಲಾದಪ್ಪ, ಏಕಾಂತಪ್ಪ, ಗುರುಮೂರ್ತಿ ಅವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.