ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನಸುಗಳ ಸಾಕಾರಕ್ಕೆ ಪರಿಶ್ರಮ ಮುಖ್ಯ: ಶಾಸಕ ಬಿ. ದೇವೇಂದ್ರಪ್ಪ

Published 10 ಜನವರಿ 2024, 14:46 IST
Last Updated 10 ಜನವರಿ 2024, 14:46 IST
ಅಕ್ಷರ ಗಾತ್ರ

ಜಗಳೂರು: ಪ್ರತಿಯೊಬ್ಬ ವ್ಯಕ್ತಿ ಉತ್ತಮ ಶಿಕ್ಷಣ ಪಡೆಯುವುದರಿಂದ ಸಮಾಜದಲ್ಲಿ ಗೌರವ, ಮನ್ನಣೆಗೆ ಪಾತ್ರನಾಗುತ್ತಾನೆ. ಪೋಷಕರು ಮತ್ತು ಶಿಕ್ಷಕರು ಪರಿಶ್ರಮದಿಂದ ಮಕ್ಕಳ ಭವಿಷ್ಯವನ್ನು ರೂಪಿಸಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಎನ್ .ಎಂ‌ .ಕೆ. ಶಾಲಾ ಆವರಣದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ‘ಸುವರ್ಣ ಕನ್ನಡ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜವನ್ನು ವಿಭಿನ್ನವಾಗಿ ಅರಿಯುವುದನ್ನು ಶಿಕ್ಷಣ ಕಲಿಸುತ್ತದೆ. ಅವರು ಜೀವನದಲ್ಲಿ ಸದಾ ಸುಖಿಗಳಾಗಿರುವುದಲ್ಲದೆ ದೇಶಕ್ಕೆ ಆಸ್ತಿಯಾಗುತ್ತಾರೆ. ಕಲಿಕೆಗೆ ಜಾತಿ,ಲಿಂಗ,ಧರ್ಮಗಳು,ಬಡತನ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ನನ್ನ ಕುಟುಂಬವೇ ಸಾಕ್ಷಿಯಾಗಿದೆ. ಖಾಸಗಿ ಸಂಸ್ಥೆಯಲ್ಲಿ ಜವಾನನಾಗಿ ಕೆಲಸ ಮಾಡಿದ ನಾನು ಶ್ರಮಪಟ್ಟಿದ್ದರಿಂದ ನನ್ನ ಪುತ್ರ ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾಗಿ ಇಂದು ಉನ್ನತ ಅಧಿಕಾರಿಯಾಗಿದ್ದಾನೆ. ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಮುಖ್ಯವಾಗುತ್ತದೆ ಎಂದು ಅರ್ಥೈಸಿದರು.

ಪೋಷಕರ ಆಂಗ್ಲಭಾಷಾ ವ್ಯಾಮೋಹದಿಂದ ಕನ್ನಡ ಭಾಷೆ ಸೊರಗುತ್ತಿದೆ. ಹೆಚ್ಚಿನ ಅಂಕಗಳನ್ನು ಪಡೆಯುವುದಷ್ಟೇ ಸಾಧನೆಯಲ್ಲ. ಶಾಲೆಗಳಲ್ಲಿ ಕನ್ನಡ ಭಾಷೆಯ ಓದು, ಬರವಣಿಗೆಗೆ ಒತ್ತು ಕೊಡಬೇಕು. ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿದ ಮಹನೀಯರು ಸಾಧನೆಗೈದ ಇತಿಹಾಸವಿದೆ ಎಂದು ಚಿತ್ರದುರ್ಗ ಸ್ನಾತಕೋತ್ತರ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಎನ್.ಬಿ.ಗಟ್ಟಿ ಅಭಿಪ್ರಾಯಪಟ್ಟರು.

ಕನ್ನಡದ ಸೊಗಡು ಬಯಲಾಟ, ಕೋಲಾಟ, ಯಕ್ಷಗಾನದಂತಹ ಕಲಾಪ್ರಕಾರಗಳಲ್ಲಿ ಅಡಗಿದೆ. ಜಾನಪದ ಕಲೆ, ಉಳಿಸಿ ಬೆಳೆಸಬೇಕು.ಕನ್ನಡ ಭಾಷೆ ಉಳಿವಿಗಾಗಿ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಪ್ರಾಧ್ಯಾಪಕ ಡಾ.ಎಚ್. ಕುಮಾರ್ ಹೇಳಿದರು. ಕಳೆದ ವರ್ಷ ಎಸ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ವು ಅಂಕ‌ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಎನ್ .ಎಂ. ಕೆ. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಎಂ.ಹಾಲಸ್ವಾಮಿ, ಕಾರ್ಯದರ್ಶಿ ಎನ್.ಎಂ.ಲೋಕೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT