ದಾವಣಗೆರೆ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರ ಹೊಸ ಕುಂದವಾಡ ಸಮೀಪ ಹೋಟೆಲ್ ಸಮೀಪ ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತವಾಗಿದ್ದು, ಸವಾರರೊಬ್ಬರಿಗೆ ಗಾಯಗಳಾಗಿವೆ.
ಹೊಸ ಕುಂದವಾಡ ನಿವಾಸಿ ಎಲ್ಐಸಿ ಏಜೆಂಟ್ ರಮೇಶ (55) ಗಾಯಗೊಂಡವರು.
‘ಅಪಘಾತವಾದ ಮೇಲೆ ಕಾರಿನಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಬೇಕಿತ್ತು. ಆದರೆ ಅವರು ಓಡಿಹೋಗಿದ್ದಾರೆ. ಸ್ಥಳೀಯರ ನೆರವಿನಿಂದ ಗಾಯಗೊಂಡ ರಮೇಶ ಅವರನ್ನು 112 ತುರ್ತು ಸ್ಪಂದನ ವಾಹನದಲ್ಲಿ ಚಿಕಿತ್ಸೆಗಾಗಿ ಸಿ.ಜಿ. ಆಸ್ಪತ್ರೆಗೆ ಕಳುಹಿಸಲಾಯಿತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.
‘ಅಪಘಾತವಾದ ಕಾರಿನಲ್ಲಿ ಪೊಲೀಸ್ ಎಂಬ ಸ್ಟಿಕ್ಕರ್ ಅಂಟಿಸಿದ್ದು, ಪೊಲೀಸರೇ ಅಪಘಾತ ಮಾಡಿದ್ದಾರೆ’ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದರು.
‘ವಾಹನ ಖಾಸಗಿಯದಾಗಿದ್ದು, ಪೊಲೀಸ್ ಸ್ಟಿಕ್ಕರ್ ಅಂಟಿಸಲಾಗಿದೆ. ಸಿಆರ್ಪಿಎಫ್ನವರು ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಇದ್ದು, ಈ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.