ಪ್ರಜಾವಾಣಿ’ ವಿತರಕ ಹನೀಫ್ ಸಾಬ್ ನಿಸ್ವಾರ್ಥ ಸೇವೆಗೆ ಗಣರಾಜ್ಯೋತ್ಸವದಂದು ಸನ್ಮಾನ

ಸಂತೇಬೆನ್ನೂರು: ಉತ್ಸಾಹ, ಸಮರ್ಪಣಾ ಮನೋಭಾವದೊಂದಿಗೆ ಕೆಲಸ ಮಾಡಿದರೆ ವಯಸ್ಸು, ಅನಾರೋಗ್ಯ ಕೂಡ ಗೌಣ. ಇಂತಹ ಮಾದರಿ ವ್ಯಕ್ತಿತ್ವ ಹೊಂದಿದ್ದಾರೆ ಕೆರೆಬಿಳಚಿ ಗ್ರಾಮದ ಮೊಹಮ್ಮದ್ ಹನೀಫ್.
ಹನೀಫ್ ಅವರು 83ರ ಇಳಿವಯಸ್ಸಿನಲ್ಲೂ ‘ಪ್ರಜಾವಾಣಿ’ ಪತ್ರಿಕಾ ವಿತರಕರಾಗಿ ಕಾಯಕ ನಿರ್ವಹಿಸುತ್ತಿದ್ದಾರೆ. ಅನಾರೋಗ್ಯವನ್ನೂ ಲೆಕ್ಕಿಸದೆ ಮನೆಮನೆಗೆ ಸ್ಕೂಟಿಯಲ್ಲಿ ತೆರಳಿ ಪತ್ರಿಕೆ ಹಂಚುವ ಕೆಲಸವನ್ನು ಇಂದಿಗೂ ನಡೆಸಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಗ್ರಾಮಾಂತರ ಪ್ರೌಢಶಾಲೆ ವತಿಯಿಂದ ಗಣರಾಜ್ಯೋತ್ಸವ ದಿನದಂದು ಸನ್ಮಾನ ಮಾಡಿರುವುದು ಅರ್ಥಪೂರ್ಣವೆನಿಸಿದೆ.
‘ಪ್ರಜಾವಾಣಿ ಪತ್ರಿಕೆ ಏಜೆಂಟ್ ಆಗಿ 1975ರಲ್ಲಿ ವೃತ್ತಿ ಆರಂಭಿಸಿದೆ. ಇಲ್ಲಿಗೆ 48 ವರ್ಷಗಳು ಪೂರೈಸಿವೆ. ಕೆರೆಬಿಳಚಿ ಹಾಗೂ ಪಕ್ಕದ ಸೋಮಲಾಪುರಕ್ಕೆ ಸೈಕಲ್ ಮೂಲಕ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆ ವಿತರಿಸುತ್ತಿದ್ದೆ. ಈಗ;ಲೂ ಮನೆಮನೆಗೆ ಪತ್ರಿಕೆಗಳನ್ನು ತಲುಪಿಸುತ್ತಿದ್ದೇನೆ’ ಎನ್ನುತ್ತಾರೆ ಮೊಹಮ್ಮದ್ ಹನೀಫ್.
ಆರಂಭದಲ್ಲಿ ಸೈಕಲ್ ಷಾಪ್, ಮೈಕ್ ಸೆಟ್ ಹಾಕುವ ವೃತ್ತಿ ನಿರ್ವಹಿಸುತ್ತಿದ್ದೆ. ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಒಬ್ಬ ಮಗ ಕೇಬಲ್ ಟಿ.ವಿ ಡಿಶ್ ಕೆಲಸ ನಡೆಸುತ್ತಿದ್ದಾನೆ. ಮತ್ತೊಬ್ಬ ಮಗ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ. ಹೆಣ್ಣುಮಕ್ಕಳಿಗೆ ಮದುವೆ ಮಾಡಿದ್ದೇನೆ. ಪತ್ರಿಕೆಗಳ ವಿತರಣೆ ಕೆಲಸ ಬಿಡಲಾಗುತ್ತಿಲ್ಲ ಎಂದರು.
ಹನೀಫ್ ಅವರ ನಿಸ್ವಾರ್ಥ ಸೇವೆ ಶ್ಲಾಘನೀಯ. ಎಲ್ಲರ ಪ್ರೋತ್ಸಾಹ ಅವರಿಗೆ ಅಗತ್ಯ ಎಂದು ಪತ್ರಕರ್ತ ಅಸ್ಲಂ ಶೇಕ್ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.