ನ್ಯಾಮತಿ: ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಮಹಿಳಾ ವಿಶ್ರಾಂತಿ ಕೊಠಡಿ ದುರಸ್ತಿಗೊಳಿಸಿ ವಿದ್ಯಾರ್ಥಿನಿಯರ ಉಪಯೋಗಕ್ಕೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಸದಸ್ಯ ಹೊಸಮನೆ ಮಲ್ಲಿಕಾರ್ಜುನ ಹೇಳಿದರು.
ಉದ್ಘಾಟನೆಗೆ ಮುನ್ನವೇ ಶಿಥಿಲಾವಸ್ಥೆ ತಲುಪಿರುವ ಮಹಿಳಾ ವಿಶ್ರಾಂತಿ ಕೊಠಡಿ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು.
ವರದಿ ಪ್ರಕಟವಾದ ಬಳಿಕ ಸಿಡಿಸಿ ಸದಸ್ಯರು ಸೋಮವಾರ ಕಾಲೇಜಿಗೆ ಭೇಟಿ ನೀಡಿದರು. ಇನ್ನೂ ಬಾಗಿಲು ತೆರೆಯದ ಮಹಿಳಾ ವಿಶ್ರಾಂತಿ ಕೊಠಡಿಯ ಬಾಗಿಲು ತೆಗೆಸಿ ಪರಿಶೀಲಿಸಿದರು. ಒಡೆದಿರುವ ಕಿಟಕಿ ಗಾಜುಗಳು, ನೀರು ಸಂಗ್ರಹ ತೊಟ್ಟಿ (ಸಿಂಟೆಕ್ಸ್) ಕೊಠಡಿಯೊಳಗೆ ಇರುವುದು, ವಿದ್ಯುತ್ ಸಂಪರ್ಕ ಇಲ್ಲದಿರುವುದನ್ನು ಗಮನಿಸಿದರು.
ಹದಿಮೂರು ಕಾಯಂ ಉಪನ್ಯಾಸಕರಲ್ಲಿ ಪ್ರಾಂಶುಪಾಲರು ಸೇರಿದಂತೆ 11 ಜನರು ಸಾಮೂಹಿಕ ರಜೆಯ ಮೇಲೆ ತೆರಳಿರುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ವಿದ್ಯಾರ್ಥಿಗಳು ಎದುರಿಸುತ್ತಿರುವ ತೊಂದರೆಗಳನ್ನು ವಿವರಿಸಿದರು.
ಪ್ರಭಾರ ಪ್ರಾಂಶುಪಾಲ ಇಮ್ರಾನ್, ಆಡಳಿತಾತ್ಮಕ ಸಿಬ್ಬಂದಿ ಉಮೇಶ ಮಾಳಗಿ, ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಜಿ.ಲೋಕೇಶ, ಸದಸ್ಯರಾದ ಬುಡ್ಡಪ್ಪ, ರವಿ ತೊಂಟದಾರ್ಯ, ಸೋಮಶೇಖರಪ್ಪ, ನಿತಿನ್, ಎಂ. ಕರಿಬಸವ, ಹಾಲೇಶ ಪಟೇಲ್, ಎ.ಕೆ.ವಸಂತ ಇದ್ದರು.