ದಾವಣಗೆರೆ: ಬಾಕಿ ಇರುವ 16 ತಿಂಗಳ ಶಿಷ್ಯವೇತನಕ್ಕಾಗಿ ಆಗ್ರಹಿಸಿ ಇಲ್ಲಿನ ಜೆ.ಜೆ.ಎಂ ವೈದ್ಯಕೀಯ ಕಾಲೇಜಿನ ಕಾಲೇಜಿನ ವಿದ್ಯಾರ್ಥಿಗಳು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಲಾಕ್ಡೌನ್ ಹಿನ್ನೆಲೆಯಲ್ಲಿ ಜಯದೇವ ವೃತ್ತದ ಪ್ರತಿಭಟನಾ ಸ್ಥಳದಲ್ಲಿ ಏಪ್ರನ್ ತೂಗುಹಾಕಿ ಪ್ರತಿಭಟನೆ ನಡೆಸಿದರು. ನಂತರ ಹಾಸ್ಟೆಲ್ಗೆ ತೆರಳಿದ ವಿದ್ಯಾರ್ಥಿಗಳು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಕಿವಿಗಳನ್ನು ಕೈಯಿಂದ ಮುಚ್ಚಿಕೊಂಡು ಪ್ರತಿಭಟನೆ ನೆಡೆಸಿದರು.
‘ಸರ್ಕಾರ ನಮ್ಮನ್ನು ಗುಲಾಮರಂತೆ ದುಡಿಸಿಕೊಂಡು ಶಿಷ್ಯವೇತನ ನೀಡದೇ ಕೈತೊಳೆದುಕೊಂಡಿದೆ. ನಮ್ಮ ಸಮಸ್ಯೆಗಳನ್ನು ಆಲಿಸದೇ ಸರ್ಕಾರ ಕುರುಡು ಮತ್ತು ಕಿವುಡಾಗಿದೆ. ಪ್ರತಿಭಟನೆ 14ನೇ ದಿವಸಕ್ಕೆ ಕಾಲಿಟ್ಟಿದ್ದು, ಶಿಷ್ಯವೇತನ ನೀಡುವ ತನಕ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ’ ಎಂದು ಡಾ.ಹರೀಶ್ ತಿಳಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಅವರು, ‘ಆಡಳಿತ ಮಂಡಳಿಯವರನ್ನು ಮತ್ತೊಂದು ಸುತ್ತಿನ ಸಭೆಗೆ ಕರೆಸಿದ್ದು, ನಮ್ಮ ಬೇಡಿಕೆ ಈಡೇರಿಸುವ ಭರವಸೆ ಇದೆ’ ಎಂದರು.
ಜಿಲ್ಲಾಧಿಕಾರಿ ಭರವಸೆ:ಪ್ರತಿಭಟನೆಯ ನಂತರ ಭಾನುವಾರ ಸಂಜೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರನ್ನು ವಿದ್ಯಾರ್ಥಿಗಳು ಭೇಟಿ ಮಾಡಿದ್ದಾರೆ.
‘ಸರ್ಕಾರ, ಜಿಲ್ಲಾಡಳಿತ ನಿಮ್ಮ ಪರವಾಗಿ ಇದ್ದು, ಖಾಸಗಿ ಆಡಳಿತ ಮಂಡಳಿಯ ಜೊತೆ ಮಾತುಕತೆ ನಡೆಸಿ ಶಿಷ್ಯವೇತನ ಕೊಡಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ’ ಎಂದು ಡಾ.ಹರೀಶ್ ತಿಳಿಸಿದರು.