ದಾವಣಗೆರೆ: ನಗರದ ಎಸ್.ಎಂ. ಕೃಷ್ಣನಗರದ ನಿವಾಸಿ ರವಿಕುಮಾರ ಜಿ. (32) ಹೃದಯಾಘಾತದಿಂದ ಬುಧವಾರ ಬೆಳಿಗ್ಗೆ ನಿಧನರಾದರು.
ಪುನೀತ್ ರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ ಇವರು ಕೆ.ಆರ್. ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದರಿಂದ ಇವರು ‘ಮಾರ್ಕೆಟ್ ರವಿ’ ಎಂದೇ ಪರಿಚಿತರಾಗಿದ್ದರು.
ನಟ ಪುನೀತ್ ರಾಜಕುಮಾರ್ ನಿಧನರಾದ ನಂತರ ಅವರಿಂದ ಪ್ರೇರಣೆ ಪಡೆದು ನೇತ್ರದಾನ ಮಾಡುವುದಾಗಿ ರವಿ ನೋಂದಣಿ ಮಾಡಿಸಿದ್ದರು. ಅದರಂತೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಅವರ ಕಣ್ಣುಗಳನ್ನು ದಾನ ಮಾಡಲಾಯಿತು.
ಕನ್ನಡ ರಾಜ್ಯೋತ್ಸವ ಹಾಗೂ ಅಪ್ಪು ಜನ್ಮದಿನದಂದು ಜೂನಿಯರ್ ಪುನೀತ್ ರಾಜಕುಮಾರ್ ಅವರನ್ನು ಕರೆಸಿ ಆಚರಣೆ ಮಾಡುತ್ತಿದ್ದರು. ಅವರು ಬಿಜೆಪಿ ಕಾರ್ಯಕರ್ತರೂ ಆಗಿದ್ದರು.
‘ರವಿಗೆ 9 ತಿಂಗಳ ಮಗು ಇದ್ದು, ಆ ಮಗುವನ್ನು ಕುಟುಂಬದವರು ಪ್ರೀತಿಯಿಂದ ‘ಅಪ್ಪು’ ಎಂದು ಕರೆಯುತ್ತಿದ್ದರು. ಹಲವು ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಕೊಂಡಿದ್ದ’ ಎಂದು ಮೃತರ ಸಹೋದರ ವೆಂಕಟೇಶ್ ತಿಳಿಸಿದರು.
ಮೃತರಿಗೆ ನಾಲ್ವರು ಸಹೋದರರು, ಮೂವರು ಸಹೋದರಿಯರು ಇದ್ದಾರೆ. ಅಂತ್ಯಕ್ರಿಯೆ ಸ್ವಗ್ರಾಮ ಬಾಡದಲ್ಲಿ ಬುಧವಾರ ನೆರವೇರಿತು.
ಬಿಜೆಪಿ ಮುಖಂಡರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ ದಾಸಕರಿಯಪ್ಪ ಅವರು ಅಂತಿಮ ದರ್ಶನ ಪಡೆದರು.