ಹೊನ್ನಾಳಿ: ತಾಲ್ಲೂಕಿನ ಎಂ. ಹನುಮನಹಳ್ಳಿ, ಸಿಂಗಟಗೆರೆ ಗ್ರಾಮದ ರಾಮನಕೆರೆ 15 ವರ್ಷಗಳ ನಂತರ ತುಂಬಿ ಹರಿದಿದ್ದು, ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮತ್ತು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಚ್.ಬಿ. ಮಂಜಪ್ಪ ಅವರು ಗುರುವಾರ ಬಾಗಿನ ಅರ್ಪಿಸಿದರು.
ರಾಮನಕೆರೆಯು 70 ಎಕರೆ ವಿಸ್ತೀರ್ಣ ಹೊಂದಿದ್ದು, ಕೆರೆ ತುಂಬಿ ಕೋಡಿ ಹರಿಯುತ್ತಿರುವುದರಿಂದ ಬೇವಿನಹಳ್ಳಿ, ಸಿಂಗಟಗೆರೆ, ಎಂ. ಹನುಮನಹಳ್ಳಿ, ತರಗನಹಳ್ಳಿ, ಮಾಸಡಿ, ನೇರಲಗುಂಡಿ, ತಿಮ್ಲಾಪುರ, ಸೇವಾಲಾಲ್ನಗರ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ. ಈ ಭಾಗದ ಸಾವಿರಾರು ಎಕರೆ ಜಮೀನುಗಳಿಗೆ ಉಪಯೋಗವಾಗಲಿದೆ. ಭೂಮಿಯ ಅಂತರ್ಜಲ ಮಟ್ಟವೂ ಹೆಚ್ಚಾಗಲಿದೆ ಎಂದು ಡಿ.ಜಿ. ಶಾಂತನಗೌಡ ಸಂತಸಪಟ್ಟರು.
ಡಿ.ಜಿ. ಶಾಂತನಗೌಡ ಅವರು ಅಧಿಕಾರದಲ್ಲಿದ್ದಾಗ ಕೆರೆಗೆ ಏತ ನೀರಾವರಿ ಮೂಲಕ ನೀರು ತುಂಬಿಸುವ ಕಾಮಗಾರಿಗೆ ₹ 10 ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಿದ್ದರು. ಕಾಮಗಾರಿ ಶೇ 70ರಷ್ಟು ಮುಗಿದಿದೆ. ಕೆರೆ ಅಭಿವೃದ್ಧಿಗೊಂಡ ನಂತರ ಹೊಳೆಯಿಂದ ಏತ ನೀರಾವರಿ ಮೂಲಕ ನೀರು ಹರಿಸಿ ಕೆರೆ ಸದಾ ತುಂಬಿರುವಂತೆ ನೋಡಿಕೊಳ್ಳಲಾಗುವುದು ಎಂದು ಶಿಮುಲ್ ನಿರ್ದೇಶಕ ಹನುಮನಹಳ್ಳಿ ಬಿ.ಜಿ. ಬಸವರಾಜಪ್ಪ ತಿಳಿಸಿದರು.
ತಿಮ್ಲಾಪುರ ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಟಿ.ಜಿ. ರಮೇಶಗೌಡ, ಮುಖಂಡರಾದ ಗಜೇಂದ್ರಪ್ಪ ಮಾಸಡಿ, ಗದ್ದಿಗಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶ್ವಿನಿ ನಟರಾಜಪ್ಪ, ಎಂ. ಚಂದ್ರಪ್ಪ, ಶಿವಾನಂದಪ್ಪ, ಜಗದೀಶ್, ಸಿದ್ದೇಶ್ವರ, ಶಂಕರಪ್ಪ, ಶಿವಣ್ಣ ಮತ್ತು ವಿವಿಧ ಗ್ರಾಮಗಳ ಮುಖಂಡರು ಈ ಸಂದರ್ಭದಲ್ಲಿ ಇದ್ದರು.