ಮಲೇಬೆನ್ನೂರು: ಭತ್ತ ಬೆಳೆಯಲು ಹೆಸರುವಾಸಿಯಾದ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ಪರಿವರ್ತನೆ ಮಾಡಿರುವ ಮಲೇಬೆನ್ನೂರಿನ ಕೃಷಿಕ ಕೆ.ಜಿ. ರಂಗನಾಥ್ ಅಡಿಕೆ ಬೆಳೆಯೊಂದಿಗೆ ಕಾಳು ಮೆಣಸಿನ ಕೃಷಿ ಮಾಡಿ ಯಶಸ್ಸು ಕಂಡಿದ್ದಾರೆ.
ತಮ್ಮ 2 ಎಕರೆ ಜಮೀನಿನಲ್ಲಿ 1,080 ಅಡಿಕೆ ಮರಗಳೊಟ್ಟಿಗೆ ಮಿಶ್ರ ಬೆಳೆಯಾಗಿ 800 ಮೆಣಸಿನ ಬಳ್ಳಿಗಳನ್ನು ಬೆಳೆಸಿದ್ದಾರೆ. ಜಾಜಿಕಾಯಿ 150, ಏಲಕ್ಕಿ 100 ಗಿಡ ಮತ್ತು ತೋಟದ ಸುತ್ತಲೂ 120 ತೇಗದ ಮರಗಳನ್ನು ಬೆಳೆಸಿದ್ದಾರೆ.
‘ಸುಭಾಷ್ ಪಾಳೇಕರ್ ಅವರ ಪ್ರೇರಣೆಯಿಂದಾಗಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದೇನೆ. ಭೂ ಸಾರ ಸಂರಕ್ಷಣೆಗಾಗಿ ಹಸಿರಲೆ ಗೊಬ್ಬರ, ಸಗಣಿ ಗೊಬ್ಬರ, ಗೋ ಕೃಪಾಮೃತ ಬಳಸಿ ಅಪ್ಪಟ ಸಾವಯವ ಪದ್ಧತಿ ಅನುಸರಿಸಿದ್ದೇನೆ. ಯಾವುದೇ ರಾಸಾಯನಿಕಗಳನ್ನು ಬಳಸಿಲ್ಲ. ಗಿಡಗಳ ಮಧ್ಯೆ ಅಂತರ ಕಾಪಾಡಲಾಗಿದೆ ಎಂದು ರಂಗನಾಥ್ ಮಾತಿಗಿಳಿದರು.
‘ತೋಟದಲ್ಲಿ 2 ಕೊಳವೆಬಾವಿ ಕೊರೆಸಿದ್ದೇನೆ. ಪ್ರಕೃತಿದತ್ತವಾಗಿ ನೀರು ಬೆಳೆ ಮೇಲೆ ಬೀಳುವಂತೆ ಸಿಂಪರಣಾ ಪದ್ಧತಿ ಅಳವಡಿಸಲಾಗಿದೆ. ಅಡಿಕೆ ಮರದ ನಡುವೆ ಬಸಿಗಾಲುವೆಗಳನ್ನು ನಿರ್ಮಿಸಿ ಬೇರುಗಳಿಗೆ ಗಾಳಿ, ನೀರು ಸರಾಗವಾಗಿ ತಲುಪುವಂತೆ ತೋಟ ಕಟ್ಟಲಾಗಿದೆ. ಕಳೆದ ವರ್ಷ 20 ಕ್ವಿಂಟಲ್ ಕಾಳುಮೆಣಸು ಇಳುವರಿ ಬಂದಿದ್ದು, ₹ 4 ಲಕ್ಷ ಲಾಭ ಗಳಿಸಿದ್ದೇನೆ. 150 ಕಾಳುಮೆಣಸು ಬಳ್ಳಿಗಳಿಗೆ ‘ಸೊರಗು ರೋಗ 150’ ಕಾಣಿಸಿಕೊಂಡಿದ್ದು ಸೂಕ್ತ ಔಷದೋಚಾರ ನಡೆದಿದೆ ಎಂದು ಹೇಳಿದರು.
ಗೋಸಾರ, ಕೃಪಾಮೃತವನ್ನು ಪೈಪ್ ಮೂಲಕ ನೇರವಾಗಿ ಪ್ರತಿಯೊಂದು ಗಿಡಕ್ಕೆ ಪೂರೈಸುವ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುವುದು. ಇದರಿಂದ ಖರ್ಚುಸ್ವಲ್ಪ ಕಡಿಮೆಯಾಗಲಿದೆ. ತೋಟದಲ್ಲಿಯೇ ಸ್ವಂತ ಮನೆ ನಿರ್ಮಿಸಿಕೊಂಡಿದ್ದು ಪ್ರತಿನಿತ್ಯ ಬೆಳಿಗ್ಗೆ 4 ಗಂಟೆ ಕಾಲ ತೋಟದೆಲ್ಲೆಡೆ ಸುತ್ತಾಡಿ ಸ್ವಚ್ಛತಾ ಕೆಲಸ, ಬೆಳೆಗಳಿಗೆ ನೀರು ಸರಬರಾಜು ವ್ಯವಸ್ಥೆ ಪರಿಶೀಲನೆ, ಕಳೆ ನಿರ್ಮೂಲನೆ ತ್ಯಾದಿ ಕೆಲಸಗಳನ್ನು ಮಾಡುತ್ತೇನೆ? ಎಂದು ವಿವರಿಸುತ್ತಾರೆ ಅವರು.
ಹೆಚ್ಚಿನ ಮಾಹಿತಿಗೆ ರಂಗನಾಥ್, ದೂರವಾಣಿ ಸಂಖ್ಯೆ 99727 57512 ಸಂಪರ್ಕಿಸಬಹುದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.