ದಾವಣಗೆರೆ: ಸಫಾಯಿ ಕರ್ಮಚಾರಿಗಳ ವಿವಿಧ ಬೇಡಿಕೆಗಳನ್ನು ಒದಗಿಸಬೇಕು. ಸರ್ಕಾರದಿಂದ ಸೌಲಭ್ಯಗಳನ್ನು ನೀಡಬೇಕು ಎಂದು ಸ್ವಚ್ಛತಾಯೋಗಿ ಸಫಾಯಿ ಕರ್ಮಚಾರಿ ಕ್ಷೇಮಾಭಿವೃದ್ಧಿ ಸಂಘದಿಂದ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.
ಸಫಾಯಿ ಕರ್ಮಚಾರಿ ಕುಟುಂಬಗಳಲ್ಲಿರುವ ಮಕ್ಕಳಿಗೆ ಆರ್ಟಿಇ ಮೂಲಕ ಉಚಿತ ಶಿಕ್ಷಣ ನೀಡಬೇಕು. ಇಎಸ್ಐ ಮಾದರಿಯಲ್ಲಿ ಸಫಾಯಿ ಕರ್ಮಚಾರಿಗಳ ಕುಟುಂಬದವರಿಗೆ ಆರೋಗ್ಯ ಯೋಜನೆ ಜಾರಿ ಮಾಡಬೇಕು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊರ ಸಂಪನ್ಮೂಲ ನಿಯೋಜನೆ ಮಾಡುವ ಸಂದರ್ಭದಲ್ಲಿ ಸಫಾಯಿ ಕರ್ಮಚಾರಿಗಳಿಗೆ ಆದ್ಯತೆ ನೀಡಬೇಕು. ಇತರ ಸ್ವಯಂ ಉದ್ಯೋಗ ನಡೆಸಲು ಆರ್ಥಿಕ ನೆರವು ನೀಡಬೇಕು. ಆಶ್ರಯ ಮನೆಗಳ ಹಂಚಿಕೆಯಲ್ಲಿ ಆದ್ಯತೆ ನೀಡಬೇಕು. ಸರ್ಕಾರದ ವಿವಿಧ ಟೆಂಡರ್ಗಳನ್ನು, ಸಫಾಯಿ ಕರ್ಮಚಾರಿಗಳ ಕಾಲೊನಿ ಅಭಿವೃದ್ಧಿ ಕಾಮಗಾರಿಗಳನ್ನು ನೋಂದಾಯಿತ ಸಫಾಯಿ ಕರ್ಮಚಾರಿ ಸಂಘಗಳಿಗೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಅಧ್ಯಕ್ಷ ಎಚ್. ಹುಲುಗೇಶ್, ಕಾರ್ಯದರ್ಶಿ ಹರೀಶ್, ಹಾಲೇಶ್, ಪಂಜು, ಮಲ್ಲಿಕಾರ್ಜುನ, ರಾಕೇಶ್, ಹನುಮಂತಪ್ಪ, ವೀರಭದ್ರಪ್ಪ ಅವರೂ ಇದ್ದರು.