ಜಗಳೂರು: ಕಪ್ಪು ಶಿಲೀಂಧ್ರದ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಕೆಲವರು ನನ್ನ ಸಾವಿನ ಬಗ್ಗೆ ವದಂತಿ ಹಬ್ಬಿಸಿದ್ದು, ತೀವ್ರ ನೋವುಂಟು ಮಾಡಿದೆ ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಸೋಮವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಎಚ್.ಪಿ. ರಾಜೇಶ್ ಅವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಅನಾರೋಗ್ಯದಿಂದ ಚಿಕಿತ್ಸೆ ಪಡೆಯುವ ಸಮಯದಲ್ಲಿ ಮೂರು ನಾಲ್ಕು ದಿನಗಳಲ್ಲಿ ನನ್ನ ಹೆಣ ಬರುತ್ತದೆ ಎಂದು ಶಾಸಕರು ನನ್ನ ಬಗ್ಗೆ ಅಮಾನವೀಯವಾಗಿ ಮಾತನಾಡಿರುವುದು ನನ್ನಲ್ಲಿ ನೋವುಂಟು ಮಾಡಿದೆ. ಸಿರಿಗೆರೆ ಶ್ರೀಗಳ ಆಶೀರ್ವಾದ, ಮಾಜಿ ಮುಖ್ಯಮಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕಾಳಜಿ ಮತ್ತು ಸಹಕಾರದಿಂದ ವಿಶೇಷವಾಗಿ ಕ್ಷೇತ್ರದ ಜನರ ಆಶೀರ್ವಾದದಿಂದ ಚಿಕಿತ್ಸೆ ಪಡೆದು ನಾನು ಗುಣಮುಖನಾಗುತ್ತಿದ್ದೇನೆ’ ಎಂದರು.
‘ಅನಾರೋಗ್ಯದಿಂದ ನಾನು ಸಂಕಷ್ಟದಲ್ಲಿದ್ದಾಗ ಕ್ಷೇತ್ರದ ಜನರು ಜಾತ್ಯತೀತವಾಗಿ ಹಾಗೂ ಪಕ್ಷಾತೀತವಾಗಿ ನನ್ನ ಕ್ಷೇಮ ವಿಚಾರಿಸಿ ನನ್ನಲ್ಲಿ ಮನೋಸ್ಥೈರ್ಯ ತುಂಬಿದ್ದಾರೆ. ನಮ್ಮ ಜನಕ್ಕೆ ಹೃದಯ ವೈಶಾಲ್ಯತೆ ಇದೆ’ ಎಂದು ಸಂತಸ ವ್ಯಕ್ತಪಡಿಸಿದರು.
‘ಅಭಿಮಾನಿಗಳ ಅಭಿಮಾನಕ್ಕೆ ಮಣಿದು ಬೆಂಗಳೂರಿನಿಂದ ನೇರವಾಗಿ ಇಲ್ಲಿಗೆ ಬಂದಿದ್ದೇನೆ. ಕಾಂಗ್ರೆಸ್ ಪಕ್ಷ ಸಂಘಟನೆಯ ಬಲದಿಂದ ಮುಂದಿನ ಬಾರಿ ಆಡಳಿತ ಚುಕ್ಕಾಣಿ ಹಿಡಿಯಲಿದೆ. ಪ್ರಸಕ್ತ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲೂ ಪಕ್ಷಕ್ಕೆ ಗೆಲುವು ಸಿಗಲಿದೆ. ಕಾರ್ಯಕರ್ತರು ಮತ್ತಷ್ಟು ಸಮರ್ಪಣಾ ಮನೋಭಾವದಿಂದ ಶ್ರಮಿಸಬೇಕಿದೆ’ ಎಂದು ಸಲಹೆ ನೀಡಿದರು.
ಅಭಿಮಾನಿಗಳು ರಾಜೇಶ್ ಜನ್ಮದಿನದ ಅಂಗವಾಗಿ ಮಹಾತ್ಮ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಕ್ಷೇತ್ರ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್, ಕೆಪಿಸಿಸಿ ಎಸ್. ಟಿ. ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹಮ್ಮದ್, ಕಮ್ಮತ್ತಹಳ್ಳಿ ಮಂಜುನಾಥ್, ಮುಖಂಡರಾದ ತಿಪ್ಪೇಸ್ವಾಮಿಗೌಡ, ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಬಿ. ಲೊಕೇಶ್, ಬೈರೇಶ್, ಬಸವಾಪುರ ರವಿಚಂದ್ರ, ವೆಂಕಟೇಶ್, ಮಂಜುನಾಥ್, ಗಿರೀಶ್ ಒಡೆಯರ್, ರಮೇಶ್ ಸಾವಿತ್ರಮ್ಮ, ಕೆಂಚಮ್ಮ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.