ಕುಂದು–ಕೊರತೆ ವಿಭಾಗ
ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಿಕೋದ್ಯಮ ಕಲಿಯಲು ಪ್ರಸಕ್ತ ಸಾಲಿನಲ್ಲಿ ಹನ್ನೊಂದು ವಿದ್ಯಾರ್ಥಿಗಳು ದಾಖಲಾಗಿದ್ದೇವೆ. ಆಗಸ್ಟ್ 28ರಿಂದಲೇ ಕಾಲೇಜು ಆರಂಭವಾಗಿದ್ದರೂ ಇದುವರೆಗೂ ತರಗತಿಗಳನ್ನು ನಡೆಸಿಲ್ಲ.
ಪ್ರಥಮ ಹಾಗೂ ದ್ವಿತೀಯ ವರ್ಷದಲ್ಲಿ ವಾರದಲ್ಲಿ ತಲಾ ನಾಲ್ಕು ಗಂಟೆ ತರಗತಿ ಬೋಧನೆ ಮತ್ತು ತಲಾ ಎರಡು ಗಂಟೆ ಪ್ರಾಯೋಗಿಕ ತರಗತಿಗಳು ಇರುತ್ತವೆ. ಅಂತಿಮ ವರ್ಷದಲ್ಲಿ ಹತ್ತು ಗಂಟೆ ತರಗತಿ ಬೋಧನೆ ಹಾಗೂ ಎರಡು ಗಂಟೆ ಪ್ರಾಯೋಗಿಕ ತರಗತಿಗಳು ನಡೆಯುತ್ತವೆ. ಆದರೆ, ನಾಲ್ಕೈದು ವರ್ಷಗಳಿಂದ ಪ್ರಾಯೋಗಿಕ ತರಗತಿ ನಡೆಸುತ್ತಿಲ್ಲ. ಹಾಗೆಯೇ ಅಂಕಗಳನ್ನು ನೀಡಲಾಗುತ್ತಿದೆ.
ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗ 2008ರಲ್ಲಿ ಆರಂಭವಾದಾಗ ಮಲ್ಲಿಕಾರ್ಜುನ ಕಲಮರಹಳ್ಳಿ ಅವರು ವಿಭಾಗದ ಪ್ರಭಾರ ಮುಖ್ಯಸ್ಥರಾಗಿದ್ದರು. ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮವನ್ನು ಪ್ರಾಯೋಗಿಕವಾಗಿ ಕಲಿಸುವ ಉದ್ದೇಶದಿಂದ ‘ಅಭಿವ್ಯಕ್ತಿ’ ಪತ್ರಿಕೆ ರೂಪಿಸಿದ್ದರು. ₹ 5 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ಕ್ಯಾಮೆರಾಗಳು, ಕಂಪ್ಯೂಟರ್ಗಳು, ಪ್ರೊಜೆಕ್ಟರ್ ಇತ್ಯಾದಿ ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ಪ್ರಯೋಗಾಲಯವನ್ನು ಅಭಿವೃದ್ಧಿಪಡಿಸಿದ್ದರು. ಸುದ್ದಿ ಬರಹ, ಸುದ್ದಿ ಎಡಿಟಿಂಗ್, ಪುಟ ವಿನ್ಯಾಸ, ವಿಡಿಯೊ ಎಡಿಟಿಂಗ್, ಆ್ಯಂಕರಿಂಗ್ ಇತ್ಯಾದಿ ವಿಷಯಗಳನ್ನು ಪ್ರಾಯೋಗಿಕವಾಗಿ ಕಲಿಯಲು ಅನುಕೂಲವಾಗಿತ್ತು. ಹಲವು ಕ್ರಿಯಾಶೀಲ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮ ಕಚೇರಿಗಳಿಗೂ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೀಗ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರ ಅಸಡ್ಡೆ ಮನೋಭಾವದ ಕಾರಣ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಪ್ರಯೋಗಾಲಯ ಮುಚ್ಚಲಾಗಿದೆ. ಖರೀದಿಸಿದ್ದ ಸಾಮಗ್ರಿಗಳು ಏನಾದವು ಗೊತ್ತಿಲ್ಲ. ಪತ್ರಿಕೋದ್ಯಮವನ್ನು ಚೆನ್ನಾಗಿ ಕಲಿಯುವ ಆಸಕ್ತಿಯನ್ನು ನಾವು ಹೊಂದಿದ್ದು, ಕಾಲೇಜಿನ ಪ್ರಾಂಶುಪಾಲರು ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳು ತರಗತಿ ಹಾಗೂ ಪ್ರಾಯೋಗಿಕ ಬೋಧನೆ ಚೆನ್ನಾಗಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು.
-ನೊಂದ ವಿದ್ಯಾರ್ಥಿಗಳು, ಪತ್ರಿಕೋದ್ಯಮ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.