ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭ್ರಷ್ಟಾಚಾರರಹಿತ ಆಡಳಿತಕ್ಕಾಗಿ ಕೆಆರ್‌ಎಸ್ ಬೆಂಬಲಿಸಿ: ರವಿಕೃಷ್ಣ ರೆಡ್ಡಿ

Published 29 ಫೆಬ್ರುವರಿ 2024, 12:59 IST
Last Updated 29 ಫೆಬ್ರುವರಿ 2024, 12:59 IST
ಅಕ್ಷರ ಗಾತ್ರ

ದಾವಣಗೆರೆ: ‘ಜಿಲ್ಲೆ ಸೇರಿದಂತೆ ಇಡೀ ರಾಜ್ಯದಾದ್ಯಂತ ರಾಜಕಾರಣ ಕೆಲವು ಕುಟುಂಬಗಳ ಹಿಡಿತದಲ್ಲಿ ಇದ್ದು, ಭ್ರಷ್ಟಾಚಾರರಹಿತ, ಪಾರದರ್ಶಕ ಆಡಳಿತ ನೀಡಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್) ವನ್ನು ಬೆಂಬಲಿಸಬೇಕು’ ಎಂದು ಪಕ್ಷದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಹೇಳಿದರು.

ಕರ್ನಾಟಕಕ್ಕಾಗಿ ನಾವು ಎನ್ನುವ ಉದ್ದೇಶದಿಂದ ಫೆ.19ರಿಂದ ಹಮ್ಮಿಕೊಂಡಿರುವ 3 ಸಾವಿರ ಕಿ.ಮೀ. ಬೈಕ್‍ ಜಾಥಾ ಗುರುವಾರ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಜಾಗೀರದಾರಾಗಿರುತ್ತಾರೆ. ಆದರೆ ಒಂದು ಕುಟುಂಬಕ್ಕೆ ರಾಜಕೀಯ ಹಾಗೂ ಸಾಮಾಜಿಕ ಹಕ್ಕುಗಳನ್ನು ಅಡವಿಟ್ಟಿದ್ದಾರೆ. ಕಳೆದ ಚುನಾವಣೆಗಳಲ್ಲಿ ಗಿಫ್ಟ್‌ ಬಾಕ್ಸ್‌ಗಳನ್ನು ಹಂಚಿದ ಪ್ರಕರಣ ಸಂಬಂಧ ವರ್ಷದ ಹಿಂದೆ ಎಫ್‌ಐಆರ್‌ ಆದರೂ ಇನ್ನೂ ಚಾರ್ಜ್ ಶೀಟ್ ಆಗಿಲ್ಲ. ಆ ಪೊಲೀಸ್ ಠಾಣೆಗಳಿಗೆ ಹೈಕೋರ್ಟ್ ಛೀಮಾರಿ ಹಾಕಿದೆ’ ಎಂದು ಹೇಳಿದರು.

‘ಈ ಹಿಂದೆ ದಾವಣಗೆರೆ ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಹೆಸರಾಗಿತ್ತು. ಈಗ ಕಾಲೇಜುಗಳು, ಆಸ್ಪತ್ರೆ, ಮದ್ಯದ ಉದ್ಯಮಗಳು ಎರಡು ಮೂರು ಕುಟುಂಬಗಳ ಕೈಯಲ್ಲಿದೆ. ಅವಿಭಜಿತ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲ. ಖಾಸಗಿ ಆಸ್ಪತ್ರೆಗಳ ಲಾಬಿಯೇ ಇದಕ್ಕೆ ಕಾರಣವಾಗಿದ್ದು, ಜನರು ಚಿಕಿತ್ಸೆಗಾಗಿ ದೂರದ ಮಣಿಪಾಲಕ್ಕೆ ಹೋಗುತ್ತಿದ್ದಾರೆ’ ಎಂದು ಹೇಳಿದರು.

‘ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹಾಗೂ ಕುಟುಂಬ ರಾಜಕಾರಣದ ಮೂಲಕ ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತರುತ್ತಿರುವ ಕಾಂಗ್ರೆಸ್, ಬಿಜೆಪಿ ಜೆಡಿಎಸ್ ಪಕ್ಷಗಳನ್ನು ತಿರಸ್ಕರಿಸಿ ನ್ಯಾಯ, ನೀತಿ, ಧರ್ಮ ಹೇಳುವ ಕೆಆರ್‌ಎಸ್ ಪಕ್ಷವನ್ನು ಬೆಂಬಲಿಸಬೇಕು. ಜನರು ಧೈರ್ಯವಾಗಿ ಜೀವನವನ್ನು ಕಟ್ಟುಕೊಳ್ಳುವುದನ್ನು ಹೇಳಿಕೊಡುತ್ತದೆ’ ಎಂದು ಹೇಳಿದರು.

ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ ಮಾತನಾಡಿ, ‘ಇಂದು ದಾವಗಣಗೆರೆ ಜಿಲ್ಲೆಯ ರಾಜಕಾರಣ ಎರಡು ಕುಟುಂಬಗಳು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿವೆ. ಇದು ಪ್ರಜಾಪ್ರಭುತ್ವದ ದೇಶ, ಗುಲಾಮರ ದೇಶವಲ್ಲ. ಗುಲಾಮಗಿರಿ ದಾವಣಗೆರೆಯಲ್ಲಿ ಹೋಗಿಲ್ಲ. ಪ್ರಜ್ಞಾವಂತರು ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಕೆಆರ್‌ಎಸ್ ಪಕ್ಷದಿಂದ ಸ್ಪರ್ಧಿಸಿ’ ಎಂದು ಸಲಹೆ ನೀಡಿದರು.

ಬೈಕ್ ಜಾಥಾದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಲಿಂಗೇಗೌಡ ಎಸ್. ಎಚ್., ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ, ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ. ಎನ್., ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ ಬಿ. ಎಸ್., ನರಸಿಂಹ ಮೂರ್ತಿ, ಜಂಟಿ ಕಾರ್ಯದರ್ಶಿ ರಘುಪತಿ ಭಟ್, ಸಂಘಟನಾ ಕಾರ್ಯದರ್ಶಿ ಎಲ್. ಜೀವನ್, ಕೃಷ್ಣ ವಿ. ಬಿ., ಚಂದ್ರಶೇಖರ್ ಮಠದ, ಬಿ. ಜಿ. ಕುಂಬಾರ್, ನಂದ ರೆಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT