ಕಡರನಾಯ್ಕನಹಳ್ಳಿ: ಕಡರನಾಯ್ಕನಹಳ್ಳಿಯಿಂದ ಕೊಕ್ಕನೂರು, ಜಿ.ಟಿ. ಕಟ್ಟೆ, ಮೂಗಿನಗೊಂದಿಯವರೆಗಿನ ರಸ್ತೆ ಕಾಮಗಾರಿ 2 ವರ್ಷಗಳಿಂದ ನಡೆಯುತ್ತಿದ್ದರೂ, ಪೂರ್ಣಗೊಂಡಿಲ್ಲ. ಇದರಿಂದಾಗಿ ವಾಹನ ಸವಾರರು ಸಂಕಷ್ಟ ಎದುರಿಸುತ್ತಿದ್ದಾರೆ.
ಕಡರನಾಯ್ಕನಹಳ್ಳಿ ಕೊಕ್ಕನೂರು ಮಧ್ಯದ ಭದ್ರಾ ಕಾಲುವೆಯಿಂದ ಜಿ.ಟಿ. ಕಟ್ಟೆ ಮತ್ತು ಮೂಗಿನಗೊಂದಿವರೆಗಿನ ರಸ್ತೆ ಕಾಮಗಾರಿಗೆ ₹ 4.75 ಕೋಟಿ ಮೊತ್ತದ ಟೆಂಡರ್ ಅನ್ನು ರಾಯಚೂರು ಮೂಲದ ಗುತ್ತಿಗೆದಾರ ವಿರುಪಾಕ್ಷಪ್ಪ ಬಳೆ ಎಂಬುವರು ಪಡೆದಿದ್ದಾರೆ.
2 ವರ್ಷಗಳಿಂದಲೂ ಗುತ್ತಿಗೆದಾರ ಇಚ್ಛೆ ಬಂದಾಗ ಕಾಮಗಾರಿ ಪ್ರಾರಂಭಿಸುತ್ತಾರೆ. ಮತ್ತೆ 4–5 ತಿಂಗಳು ಕೆಲಸ ನಿಲ್ಲಿಸುತ್ತಾರೆ. ಭತ್ತದ ಕಟಾವು ಪ್ರಾರಂಭವಾಗಿದೆ. ಟ್ರ್ಯಾಕ್ಟರ್ ಮೂಲಕ ಹುಲ್ಲನ್ನು ಸಾಗಿಸುವುದೇ ಸವಾಲಾಗಿದೆ.
ಅಲ್ಲಲ್ಲಿ ರಸ್ತೆಗೆ ಜೆಲ್ಲಿ ಹರಡಲಾಗಿದೆ. ಮತ್ತೊಂದೆಡೆ ರಸ್ತೆಯುದ್ದಕ್ಕೂ ಜೆಲ್ಲಿ ಕಲ್ಲುಗಳ ಗುಡ್ಡೆಗಳನ್ನು ಹಾಕಲಾಗಿದೆ, ಕೆಲವೆಡೆ ಕಳಪೆ ಮಣ್ಣು ಹಾಕಲಾಗಿದೆ. ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚಿನ ಸಮಸ್ಯೆ ಆಗುತ್ತಿದೆ. ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ.
‘ಗುತ್ತಿಗೆದಾರರಿಗೆ ಈಗಾಗಲೇ ನೋಟಿಸ್ ನೀಡಿದ್ದೇವೆ. ಕಪ್ಪು ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿದ್ದೇವೆ. ಶೀಘ್ರವೇ ಪರ್ಯಾಯ ವ್ಯವಸ್ಥೆಯ ಮೂಲಕ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಎಇಇ ಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಲೋಕೋಪಯೋಗಿ ಇಲಾಖೆ ಬಳಿ ಧರಣಿ ನಡೆಸುತ್ತೇವೆ’ ಜಿ.ಟಿ.ಕಟ್ಟೆಯ ರಮೇಶ್ ಎಚ್ಚರಿಸಿದ್ದಾರೆ.
ಈ ಭಾಗದ ಜನರು ಈ ರಸ್ತೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಶೀಘ್ರವೇ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.