ದಾವಣಗೆರೆ: ‘ಅಧಿಕಾರಿಗಳು ಪರಿಣಾಮದ ಬಗ್ಗೆ ಯೋಚಿಸದೇ ಆತುರದಿಂದ ಕೈಗೊಂಡ ಕ್ರಮದಿಂದ ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ನಂಜನಗೂಡಿನ ದೇವಸ್ಥಾನದ ಪ್ರಕರಣವನ್ನು ಸುಖಾಂತ್ಯಗೊಳಿಸುತ್ತೇವೆ. ಜತೆಗೆ ಅಂಥ ಪ್ರಕರಣ ರಾಜ್ಯದಲ್ಲಿ ಮತ್ತೆಲ್ಲೂ ಮರುಕಳಿಸಲು ಬಿಡುವುದಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾರಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಕಾರಿಣಿಯನ್ನು ಭಾನುವಾರ ನಗರದ ತ್ರಿಶೂಲ್ ಕಲಾಭವನದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ‘ನಂಜನಗೂಡಿನ ಪ್ರಕರಣದ ನಂತರ ಶಾಂತಿ, ಸುವ್ಯವಸ್ಥೆಗೆ ತೊಂದರೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರಕ್ಕೆ ಎಡೆಮಾಡಿಕೊಟ್ಟಿದೆ’ ಎಂದು ಹೇಳಿದರು.
‘ಶಾಂತಿ ಕದಡುವ ಪ್ರಸಂಗಗಳು ಆಗಾಗ ನಡೆಯುತ್ತಿರುತ್ತವೆ. ಅಂಥ ಸಂದರ್ಭದಲ್ಲಿ ನಮ್ಮೆಲ್ಲ ವರಿಷ್ಠರು, ಹಿರಿಯರು ಕುಳಿತು ಮಾತನಾಡಿ ಸರಿಪಡಿಸಿದ್ದಾರೆ. ತಮ್ಮ ಅನುಭವ ಮುತ್ಸದ್ದಿತನ ತೋರಿದ್ದಾರೆ. ನಂಜನಗೂಡಿನ ದೇವಸ್ಥಾನ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಹಿರಿಯರ ಜತೆ, ಪಕ್ಷದ ಮುಖಂಡರ ಜತೆ, ಸ್ಥಳೀಯರ ಜತೆ ಕುಳಿತು ಮಾತನಾಡಿ ಸರಿಪಡಿಸುತ್ತೇವೆ. ಸರಿಯಾದ ಕ್ರಮ ಕೈಗೊಳ್ಳುತ್ತೇವೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.