ದಾವಣಗೆರೆ: ಸೋದೆ ವಾದಿರಾಜ ಮಠದ ವಿಶ್ವವಲ್ಲಭ ಸ್ವಾಮೀಜಿಗೆ ಇಲ್ಲಿನ ಗೌರಮ್ಮ ನರಹರಿಶೇಟ್ ಸಭಾಭವನದಲ್ಲಿ ಮಂಗಳವಾರ ತುಲಾಭಾರ ನಡೆಯುತ್ತಿದ್ದಾಗ ಕೊಂಡಿ ಕಳಚಿ ತಕ್ಕಡಿ ಬಿದ್ದಿದ್ದರಿಂದ ಸ್ವಾಮೀಜಿಗೆ ಸಣ್ಣ ಗಾಯಗಳಾಗಿವೆ.
ಉಡುಪಿ ಅಷ್ಟಮಠಗಳಲ್ಲಿ ಒಂದಾಗಿರುವ ಸೋದೆ ಮಠದ ದೈವಜ್ಞ ಬ್ರಾಹ್ಮಣ ಶಿಷ್ಯವೃಂದವು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಮಂಗಳವಾರ ಬೆಳಿಗ್ಗೆ ಪಟ್ಟದೇವರ ಪೂಜೆ, ಸಾಮೂಹಿಕ ಪಾದಪೂಜೆ ನಂತರ ತುಲಾಭಾರ ಏರ್ಪಡಿಸಲಾಗಿತ್ತು. ಭಕ್ತರು ಅಕ್ಕಿ, ಬೆಲ್ಲ, ಹಣ್ಣುಗಳೊಂದಿಗೆ ಶ್ರೀಗಳ ತುಲಾಭಾರ ನೆರವೇರಿಸಿ ಸಂಭ್ರಮಿಸುವ ಉತ್ಸಾಹದಲ್ಲಿದ್ದರು. ಈ ಸಂದರ್ಭದಲ್ಲಿ ತಕ್ಕಡಿ ಕೊಂಡಿ ಕಳಚಿದ್ದರಿಂದ ಸ್ವಾಮೀಜಿಯ ತಲೆಗೆ ಏಟು ಬಿತ್ತು. ಇದರಿಂದ ಕೆಲ ಕಾಲ ಭಕ್ತರಲ್ಲಿ ಆತಂಕ ಮೂಡಿತು.
ತಕ್ಷಣ ವೈದ್ಯರನ್ನು ಕರೆಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಬ್ಯಾಂಡೇಜ್ ಹಾಕಿಸಲಾಯಿತು. ಸುಧಾರಿಸಿಕೊಂಡ ಸ್ವಾಮೀಜಿ ಬಳಿಕ ಮುಂದಿನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ನಲ್ಲೂರು ಎಸ್. ರಾಜಕುಮಾರ್, ನಲ್ಲೂರು ಅರುಣಾಚಲ, ರಾಮಚಂದ್ರ ರಾಯ್ಕರ್ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.