ಹರಿಹರ: ತಾಲ್ಲೂಕಿನ ಹಲಸಬಾಳು ಹಾಗೂ ರಾಣೆಬೆನ್ನೂರು ತಾಲ್ಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮಗಳ ಮಧ್ಯದ ಹೆದ್ದಾರಿಯ ತುಂಗಭದ್ರಾ ಸೇತುವೆ ಮೇಲಿನ ಮಣ್ಣಿನಿಂದ ಮುಚ್ಚಿಹೋಗಿದ್ದ ಕಿಂಡಿಗಳನ್ನು ಬುಧವಾರ ಪಿಡಬ್ಲುಡಿ ಇಲಾಖೆಯಿಂದ ತೆರವುಗೊಳಿಸಲಾಯಿತು.
‘ತುಂಗಭದ್ರಾ ಸೇತುವೆ ದಾಟುವ ಸಂಕಷ್ಟ’ ಎಂಬ ಶೀರ್ಷಿಕೆಯಡಿ ಬುಧವಾರ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು.
ಮಳೆ ನೀರು ನಿಂತು ಸೇತುವೆ ಮೇಲೆ ವಾಹನ ಸಂಚಾರ ದುಸ್ತರ ಆಗಿರುವ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಇದರಿಂದ ಎಚ್ಚೆತ್ತ ಪಿಡಬ್ಲುಡಿ ಅಧಿಕಾರಿಗಳು, ಬುಧವಾರ ತಮ್ಮ ಸಿಬ್ಬಂದಿ ಮೂಲಕ ಕಿಂಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.
‘ಈಗಲೂ ಈ ಸೇತುವೆ ನಿರ್ವಹಣೆ ಜವಾಬ್ದಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ್ದು. ಆದರೂ ಮಾನವೀಯತೆ ದೃಷ್ಟಿಯಿಂದ ನಮ್ಮ ಸಿಬ್ಬಂದಿ ಮೂಲಕ ಸೇತುವೆ ಮೇಲಿನ ಕಿಂಡಿಗಳಲ್ಲಿದ್ದ ಮಣ್ಣನ್ನು ತೆಗೆಸಿ ಮಳೆ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ’ ಎಂದು ಪಿಡಬ್ಲುಡಿ ಎಇಇ ಶಿವಮೂರ್ತಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಈ ಸೇತುವೆ ಮೇಲೆ ಎರಡೂ ಬದಿ 34 ಕಿಂಡಿಗಳಿವೆ. ಆ ಎಲ್ಲಾ ಕಿಂಡಿಗಳಲ್ಲಿದ್ದ ಮಣ್ಣನ್ನು ತೆರವು ಮಾಡಲಾಗುತ್ತಿದೆ. ಗುರುವಾರ ಮತ್ತೆ ಕಾರ್ಯಾಚರಣೆ ನಡೆಸಿ ಎಲ್ಲಾ ಕಿಂಡಿಗಳನ್ನು ಸ್ವಚ್ಚಗೊಳಿಸಲಾಗುವುದು. ಸೇತುವೆ ಮೇಲೆ ಮಣ್ಣು ಹೆಚ್ಚಿನ ಪ್ರಮಾಣದಲ್ಲಿ ಶೇಖರಗೊಂಡಿದ್ದು, ಆ ಮಣ್ಣನ್ನು ಸಾಗಿಸುವ ಕೆಲಸವನ್ನೂ ಮಾನವೀಯತೆ ದೃಷ್ಟಿಯಿಂದ ಮಾಡಿಸುತ್ತೇವೆ’ ಎಂದರು.
ಹರಿಹರ ತಾಲ್ಲೂಕಿನ ಹಲಸಬಾಳು ರಾಣೆಬೆನ್ನೂರು ತಾಲ್ಲೂಕಿನ ಕೋಡಿಯಾಲ ಹೊಸಪೇಟೆ ನಡುವಿನ ತುಂಗಭದ್ರಾ ಸೇತುವೆ ನೀರು ಸಾಗುವ ಕಿಂಡಿಗಳನ್ನು ಬುಧವಾರ ಪಿಡಬ್ಲುಡಿ ಸಿಬ್ಬಂದಿ ಸ್ವಚ್ಚಗೊಳಿಸಿದರು