ದಾವಣಗೆರೆ: ಸಾಧನೆಯ ಸಂಕಲ್ಪತೊಟ್ಟು ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿದಾಗ ಮಹಿಳಾ ಸಬಲೀಕರಣ ಸಾಧ್ಯ ಎಂದು ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ ಹೇಳಿದರು.
ಹನಿವೆಲ್ ಮತ್ತು ಐಸಿಟಿ ಅಕಾಡೆಮಿ ಸಹಯೋಗದಲ್ಲಿ ನಗರದ ಬಾಪೂಜಿ ಎಂಜಿನಿಯರಿಂಗ್ ಕಾಲೇಜಿನ ಆರ್ಯಭಟ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಮಹಿಳಾ ಸಬಲೀಕರಣದ ನೈಪುಣ್ಯ ಕೇಂದ್ರ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಅಭಿವೃದ್ಧಿ ಹೊಂದಲು ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಜತೆಗೆ ಸ್ವಯಂ ವಿಶ್ಲೇಷಣೆಗೆ ಒಳಪಟ್ಟು, ಆತ್ಮಸ್ಥೈರ್ಯದಿಂದ ಉದ್ಯೋಗಕ್ಕೆ ಬೇಕಾದ ಕೌಶಲಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಹನಿವೆಲ್ ಮತ್ತು ಐಸಿಟಿ ಅಕಾಡೆಮಿಯಿಂದ ಸ್ಥಾಪಿಸಲಾಗುತ್ತಿರುವ ಮಹಿಳಾ ಸಬಲೀಕರಣ ನೈಋಣ್ಯ ಕೇಂದ್ರವು ವಿದ್ಯಾರ್ಥಿಗಳಿಗೆ ಕೌಶಲ ಪಡೆಯಲು ಅನುಕೂಲವಾಗಲಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಭಾರ ಪ್ರಾಂಶುಪಾಲ ಕೆ.ಎಸ್. ಬಸವರಾಜಪ್ಪ, ‘ಶಿಕ್ಷಣ ಪಡೆದ ಮಹಿಳೆ ಕುಟುಂಬದ ಏಳಿಗೆಗೆ ಮಾತ್ರವಲ್ಲ, ದೇಶದ ಅಭಿವೃದ್ಧಿಗೂ ಸಹಕಾರಿಯಾಗಬಲ್ಲಳು. ಇಪತ್ತು ವರ್ಷಗಳ ಹಿಂದೆ ಶಿಕ್ಷಣ ಪಡೆಯುತ್ತಿದ್ದ ಹೆಣ್ಣುಮಕ್ಕಳ ಸಂಖ್ಯೆ ಪುರುಷರಿಗಿಂತ ಬಹಳ ಕಡಿಮೆಯಿತ್ತು. ಈಗ ಎರಡು ಪಟ್ಟು ಹೆಚ್ಚಳವಾಗಿದೆ’ ಎಂದು ಅಭಿಪ್ರಾಯಿಸಿದರು.
ಐಸಿಟಿ ಅಕಾಡೆಮಿ ಮುಖ್ಯಸ್ಥ ಎಲ್. ಸುರೇಶ್ ಬಾಬು, ‘ಮಹಿಳೆಯರು ಜ್ಞಾನ, ಸಹಕಾರವನ್ನು ಬಳಸಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಗೊಳಿಸಲು ಮುಂದಾಗಬೇಕಿದೆ. ಆ ನಿಟ್ಟಿನಲ್ಲಿ ಐಸಿಟಿ 12 ವರ್ಷಗಳಲ್ಲಿ 700ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿದೆ. 20 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಉದ್ಯೋಗ ನೀಡಿ ಮಹಿಳೆಯರ ಸ್ವಾಯತ್ತಕ್ಕೆ ಶ್ರಮಿಸುತ್ತಿದೆ’ ಎಂದು ಹೇಳಿದರು.
ಹನಿವೆಲ್ ಇಂಡಿಯಾದ ಅಧ್ಯಕ್ಷ ಆಶಿಶ್ ಗಾಯಕ್ವಾಡ್ ವಿಡಿಯೊ ಮೂಲಕ ಮಾತನಾಡಿ, ‘ಹನಿವೆಲ್ ಸಂಸ್ಥೆಯು ಯುವ ಪೀಳಿಗೆಗೆ ವಿಶೇಷ ಕೌಶಲಯ ಕಾರ್ಯಕ್ರಮಗಳನ್ನು ನೀಡುತ್ತಿದೆ. ತಂತ್ರಜ್ಞಾನದ ಕಾರ್ಯಕ್ರಮಗಳು ಕೈಗೆಟುಕುವಂತಿದ್ದು, ಸಮಾಜದ ಎಲ್ಲ ವರ್ಗದವರಿಗೂ ಲಭ್ಯವಾಗಬೇಕು. ಜತೆಗೆ ಉತ್ತಮ ವೃತ್ತಿಜೀವನ ನಿರ್ಮಿಸಲು ಅವಕಾಶವಾಗಬೇಕು ಎಂಬ ಉದ್ದೇಶದಿಂದ ನಮ್ಮ ಸಂಸ್ಥೆ ಎಲ್ಲರಿಗೂ ಉತ್ತಮ ಗುಣಮಟ್ಟದ ಕೌಶಲ ಶಿಕ್ಷಣ ನೀಡುತ್ತಿದೆ’ ಎಂದರು.
ಕಾಲೇಜಿನ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಸಿ.ಆರ್. ನಿರ್ಮಲ ಪ್ರಾಸ್ತಾವಿಕ ನುಡಿದರು, ಬಿಐಇಟಿ ಕಾಲೇಜು ನಿರ್ದೇಶಕ ಪ್ರೊ. ವೈ.ವೃಷಭೇಂದಪ್ಪ, ವಿಷ್ಣುಪ್ರಸಾದ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರೊ. ಸುಮನ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಪ್ರೊ. ಎಂ. ವರ್ಷಾ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಶಿಲ್ಪ ನಿರೂಪಿಸಿದರು. ಮೇಘ ಮತ್ತು ನೇಹ ಪ್ರಾರ್ಥಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.