ಜಗಳೂರು: `ಅಧ್ಯಾಪಕರು ಕೇವಲ ಪಠ್ಯವಸ್ತುವಿಗೇ ತಮ್ಮ ಬೋಧನೆಯನ್ನು ಸೀಮಿತಗೊಳಿಸದೆ, ಸಮಕಾಲೀನ ಸಮಾಜದಲ್ಲಿನ ಭ್ರಷ್ಟಾಚಾರ, ಮೂಢನಂಬಿಕೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು' ಎಂದು ಖ್ಯಾತ ಲೇಖಕ ಕುಂ.ವೀರಭದ್ರಪ್ಪ ಹೇಳಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕರ ವೇದಿಕೆ ಹಾಗೂ ಹೋ.ಚೊ. ಬೋರಯ್ಯ ಸ್ಮಾರಕ ಪ್ರಥಮ ದರ್ಜೆ ಕಾಲೇಜು ವತಿಯಿಂದ ಪಟ್ಟಣದಲ್ಲಿ ಶುಕ್ರವಾರ ನಡೆದ `ಪಠ್ಯಪುಸ್ತಕಗಳ ಲೋಕಾರ್ಪಣೆ-ಕನ್ನಡ ಪಠ್ಯಾವಲೋಕನ ಕಾರ್ಯಾಗಾರ'ದಲ್ಲಿ ಪಠ್ಯಪುಸಕ್ತ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಪಠ್ಯವನ್ನು ಒಳಗೊಂಡಂತೆ ಹಳೆಗನ್ನಡ, ಪಂಪ, ರನ್ನ, ಕುಮಾರವ್ಯಾಸರನ್ನು ಇಂದಿನ ಪೀಳಿಗೆಗೆ ಅರ್ಥಪೂರ್ಣವಾಗಿ ಪರಿಚಯಿಸಬೇಕಾದ ಅಗತ್ಯ ಇದೆ. ದ್ರಾವಿಡ ಭಾಷಿಕ ಕುಟುಂಬದ ಕನ್ನಡ ಭಾಷೆ ಮಾನವೀಯ ಸಮೃದ್ಧ ಭಾಷೆಯಾಗಿದೆ ಎಂದು ಹೇಳಿದರು.
ಸಮಾರಂಭ ಉದ್ಘಾಟಿಸಿದ ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಸಚಿವ ಡಾ.ಶ್ರೀಕಂಠ ಕೊಡಿಗೆ ಮಾತನಾಡಿ, ಇಂದಿನ ಸಾಹಿತಿಗಳು ಸಿನಿಕರಾಗುತ್ತಿದ್ದಾರೆ. ಮಾನವೀಯ ಸಾಹಿತ್ಯ ಬರೆಯುತ್ತಾ ಅಮಾನವೀಯವಾಗಿ ಬದುಕುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
`ಕನ್ನಡ ಮನಸ್ಸು' ಕುರಿತು ಲೇಖಕ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, `ಕನ್ನಡ ದವನ' ಕುರಿತು ಡಾ.ಎಂ. ಉಷಾ ಹಾಗೂ `ಕನ್ನಡ ಸೊಬಗು' ಕುರಿತ ಕಾರ್ಯಾಗಾರದಲ್ಲಿ ಕತೆಗಾರ ಡಾ.ಲೋಕೇಶ ಅಗಸನಕಟ್ಟೆ ಉಪನ್ಯಾಸ ನೀಡಿದರು.
ಹೋ.ಚಿ.ಬೋರಯ್ಯ ಕಾಲೇಜಿನ ಪ್ರಾಚಾರ್ಯ ಡಾ.ಜಿ.ಸಿದ್ದಪ್ಪ, ಪ್ರೊ.ಶ್ರೀಶೈಲಪ್ಪ, ಡಾ.ಸಂಗೇನಹಳ್ಳಿ ಅಶೋಕ, ಎಸ್.ಬೋರಪ್ಪನಾಯಕ, ವಿನಾಯಕ, ಪ್ರೊ.ಬಿ.ಆರ್. ವೀರಮ್ಮ ಉಪಸ್ಥಿತರಿದ್ದರು.
ಸ್ಮರಣೋತ್ಸವ ಇಂದು
ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಪಾಂಡೋಮಟ್ಟಿ ವಿರಕ್ತಮಠದಲ್ಲಿ ಜುಲೈ 20ರಂದು ಸಂಜೆ 7ಕ್ಕೆ `ಹಡಪದ ಅಪ್ಪಣ್ಣನವರ ಸ್ಮರಣೋತ್ಸವ' ನಡೆಯಲಿದೆ ಎಂದು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ತಿಳಿಸಿದ್ದಾರೆ.
`ಶರಣ ಸಂಗಮ'ದ ಅಡಿಯಲ್ಲಿ ನಡೆಯುತ್ತಿರುವ 747ನೇ ಕಾರ್ಯಕ್ರಮ ಇದಾಗಿದೆ. ಗುರುಬಸ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಪ್ರಗತಿಪರ ಚಿಂತಕ ಲೋಕೇಶಪ್ಪ ಹಾಡಿಗೆರೆ ಉಪನ್ಯಾಸ ನೀಡಲಿದ್ದಾರೆ. ಡಾ.ಬಸವರಾಜ, ನಾಗರಾಜ, ಗಂಗಮ್ಮ ವೀರಭದ್ರಯ್ಯ ಭಾಗವಹಿಸಲಿದ್ದಾರೆ. ಜಂತುಕೊಳ್ಳದ ಮಹದೇವಪ್ಪ ಹಾಗೂ ಮಲಹಾಲು ಕುಟುಂಬದವರು ದಾಸೋಹಿಗಳಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.