ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತಪಟ್ಟಿದ್ದ ಬಾಲಕ; ಸ್ಮಶಾನದಲ್ಲಿ ಜೀವಂತ- ನವಲಗುಂದದ ಬಸಾಪುರ ಗ್ರಾಮದಲ್ಲಿ ಘಟನೆ

Published 17 ಆಗಸ್ಟ್ 2023, 22:12 IST
Last Updated 17 ಆಗಸ್ಟ್ 2023, 22:12 IST
ಅಕ್ಷರ ಗಾತ್ರ

ನವಲಗುಂದ: ಮೃತಪಟ್ಟಿದ್ದ ಬಾಲಕನೊಬ್ಬನನ್ನು ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಮತ್ತೆ ಜೀವ ಬಂದಿರುವ ಅಚ್ಚರಿಯ ಘಟನೆ ನವಲಗುಂದ ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ ಗುರುವಾರ ನಡೆದಿದೆ.

ಒಂದೂವರೆ ವರ್ಷದ ಆಕಾಶ ಬಸವರಾಜ ಪೂಜಾರ ಮೃತಪಟ್ಟಿರುವುದಾಗಿ ಹುಬ್ಬಳ್ಳಿಯ ಕಿಮ್ಸ್‌ ವೈದ್ಯರು ಘೋಷಿಸಿದ್ದರು. ಈಗ ಮತ್ತೆ ಬಾಲಕ ಬದುಕಿದ್ದಾನೆ.

ಏನಿದು ಘಟನೆ: ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕನನ್ನು ವೈದ್ಯರ ಸಲಹೆಯಂತೆ ಗದಗ ನಗರದ ಜರ್ಮನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ  ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ದಾಖಲಿಸಿ, ನಂತರ ಆಗಸ್ಟ್‌ 13ರಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆತರಲಾಗಿತ್ತು ಎಂದು ಬಾಲಕನ ತಂದೆ ಬಸವರಾಜ್ ಪೂಜಾರ ಹೇಳಿದರು.

ಚಿಕಿತ್ಸೆ ನೀಡಿದ್ದ ಕಿಮ್ಸ್ ವೈದ್ಯರು, ಮಗುವಿನ ಹೃದಯ ಬಡಿತ ಕಡಿಮೆ ಪ್ರಮಾಣದಲ್ಲಿದ್ದು, ಆಮ್ಲಜನಕ ವ್ಯವಸ್ಥೆ ತೆಗೆದರೆ ಬದುಕುಳಿಯುವುದಿಲ್ಲ ಎಂದು ಗುರುವಾರ ಸಂಜೆ ಹೇಳಿದ್ದರು. ಬಳಿಕ 7.30ರ ಸುಮಾರಿಗೆ ಮಗು ಮೃತಪಟ್ಟಿದೆ ಎಂದು ಹೇಳಿ ಪಾಲಕರ ಸಹಿ ಪಡೆದು, ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಿದ್ದರು.

ಮೃತದೇಹವನ್ನು ತೆಗೆದುಕೊಂಡು ಹೋಗಿ ಸ್ಮಶಾನದಲ್ಲಿ ಹೂಳುವ ಸಂದರ್ಭದಲ್ಲಿ ಸಂಪ್ರದಾಯದಂತೆ  ಬಾಯಿಗೆ ನೀರು ಬಿಡಲಾಯಿತು. ಆಗ ಕೈಕಾಲು ಆಡಿಸಿದ್ದರಿಂದ ಮತ್ತೆ ನವಲಗುಂದ ಆಸ್ಪತ್ರೆಗೆ ಕರೆತರಲಾಯಿತು. ವೈದ್ಯರ ಸೂಚನೆ ಮೇರೆ ಧಾರವಾಡದ ಸಿವಿಲ್ ಆಸ್ಪತ್ರೆಯ ಚಿಕಿತ್ಸೆ ಕೊಡಿಸಿ, ತಡರಾತ್ರಿ ಮತ್ತೆ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT