ಹುಬ್ಬಳ್ಳಿ: ‘ಉತ್ತರ ಕರ್ನಾಟಕದ ಕಲಾವಿದರು ನಟಿಸಿರುವ, ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವಿರುವ ಅಹಂ ರಾವಣಾಸ್ಮಿ ಚಿತ್ರವು ಒಟಿಟಿಯಲ್ಲಿ ಶೀಘ್ರ ತೆರೆಕಾಣಲಿದ್ದು, ಉತ್ತರ ಕರ್ನಾಟಕದ ಕೆಲ ಚಿತ್ರಮಂದಿರಗಳಲ್ಲಿ ಸಹ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ’ ಎಂದು ಚಿತ್ರದ ನಟ, ನಿರ್ದೇಶಕ, ನಿರ್ಮಾಪಕ ರಾವಣ ಕತ್ತಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿತ್ರವನ್ನು ಕನ್ನಡದಲ್ಲಿ ನಿರ್ಮಿಸಲಾಗಿದ್ದು, ತೆಲುಗು, ತಮಿಳು ಭಾಷೆಯಲ್ಲಿ ಡಬ್ ಮಾಡಲಾಗಿದೆ. ರಾವಣಾಸುರುಡು ಹೆಸರಿನ ತೆಲುಗಿನ ಅವತರಣಿಕೆ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಸುಮಾರು 50 ಚಿತ್ರಮಂದಿರಗಳಲ್ಲಿ ಶೀಘ್ರದಲ್ಲೇ ತೆರೆಕಾಣಲಿದೆ. ರಾವಣಾಸುರನ್ ಹೆಸರಿನ ತಮಿಳು ಅವತರಣಿಕೆ ಒಟಿಟಿಯಲ್ಲಿ ಪ್ರದರ್ಶನ ಕಾಣಲಿದೆ’ ಎಂದು ಹೇಳಿದರು.
‘ನಾಯಕನಟಿಯಾಗಿ ರಂಭಾ, ವಿವಿಧ ಪಾತ್ರಗಳಲ್ಲಿ ಸುರೇಶ ಕರಜಗಿ, ಸುನೀಲ್ ತಳವಾರ, ವಿದ್ಯಾ ಟರ್ಕಿ, ಭೂಪಾಲ್ ಅತ್ತು, ಅರವಿಂದ ಮುಳಗುಂದ, ಅರುಂಧತಿ, ರವಿಕುಮಾರ, ಪ್ರಕಾಶ ಅಭಿನಯಿಸಿದ್ದಾರೆ. ಚಿತ್ರದುರ್ಗದ ಮುನ್ನ ಸಂಗೀತ ನಿರ್ದೇಶನ ಮಾಡಿದ್ದು, ಎರಡು ಹಾಡುಗಳನ್ನು ತೆಲುಗು ಗಾಯಕರು, ಮೂರು ಹಾಡುಗಳನ್ನು ಕನ್ನಡದ ಗಾಯಕರು ಹಾಡಿದ್ದಾರೆ. ಬೆಳಗಾವಿಯ ವಿಶ್ವನಾಥ ತಾಲೂಕ ಕ್ಯಾಮೆರಾಮನ್ ಆಗಿ, ಪ್ರಕಾಶ ಕಡಕೋಳ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ’ ಎಂದು ವಿವರಿಸಿದರು.
‘ಬೆಳಗಾವಿ, ಶಿರಸಿ, ಹೊನ್ನಾವರ ಸೇರಿದಂತೆ ಗೋವಾ, ಕರ್ನೂಲು ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.