ಹುಬ್ಬಳ್ಳಿ:ಸರ್ಕಾರವು ಖಾಸಗಿ ಸಹಭಾಗಿತ್ವದಲ್ಲಿ ಹುಬ್ಬಳ್ಳಿಯಲ್ಲಿ ಐಟಿ ಪಾರ್ಕ್ ನಿರ್ಮಿಸಲು ನಿರ್ಧರಿಸಿದೆ ಎಂದುಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ನಗರದ ಐಟಿ ಪಾರ್ಕ್ಗೆ ಸೋಮವಾರ ಭೇಟಿ ನೀಡಿ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಟಿ ಕಂಪನಿ ಮುಖ್ಯಸ್ಥರು ಹಾಗೂ ಅಧಿಕಾರಿಗಳೊಂದಿಗೆ ಸಮಸ್ಯೆ ಆಲಿಸಿ, ಗೋಕುಲ ಮಾರ್ಗದಲ್ಲಿ ಪಾರ್ಕ್ ನಿರ್ಮಿಸಲಾಗುವುದು ಎಂದರು.
‘ಬಾಡಿಗೆಗೆ ಬರುವ ಮಳಿಗೆದಾರರ ಜೊತೆಗೆ ಅಧಿಕಾರಿಗಳು ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು. ಅವರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಮುಂದಾಗಬೇಕು. ಮಾರುಕಟ್ಟೆ ದರಕ್ಕಿಂತ ಐಟಿ ಪಾರ್ಕ್ಲ್ಲಿ ಬಾಡಿಗೆ ಕಡಿಮೆಯಿದೆ. ಸರ್ಕಾರದಿಂದಲೂ ನಿರ್ವಹಣೆಗೆ ಅನುದಾನ ನೀಡಲಾಗುತ್ತದೆ. ಅದನ್ನು ಸಾಮಾನ್ಯ ನಿರ್ವಹಣೆಗೆ ಬಳಕೆ ಮಾಡಿಕೊಳ್ಳಬಹುದು’ ಎಂದರು.
‘ಸಾಕಷ್ಟು ಐಟಿ ಕಂಪನಿಗಳು ತಮ್ಮ ಉತ್ಪನ್ನಗಳ ಉತ್ಪಾದನೆಗೆ ಹುಬ್ಬಳ್ಳಿಯನ್ನು ಆಯ್ಕೆ ಮಾಡಿಕೊಳ್ಳುತ್ತಿವೆ. ವಿಮಾನ, ರೈಲು ಸಂಪರ್ಕದ ಸೌಲಭ್ಯವೂ ಇದೆ. ಐಟಿ ಪಾರ್ಕ್ನ್ನು ಮತ್ತಷ್ಟು ಅಭಿವೃದ್ಧಿ ಮಾಡಿದರೆ, ನಗರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ’ ಎಂದು ಎಂಜಿನಿಯರ್ ಶಶಿಧರ ಶೆಟ್ಟರ್ ಹೇಳಿದರು.
ನಾಲ್ಕು ಅಂತಸ್ತಿನ ಬೃಹತ್ ಕಟ್ಟಡದಲ್ಲಿ ಅಳವಡಿಸಿರುವ ಬೆಂಕಿ ನಿರೋಧಕ(ಫೈರ್ ಸೇಫ್ಟಿ) ಹಾಳಾಗಿದೆ. ಕೆಲವು ಮಳಿಗೆಗಳು ಹಾಳಾಗಿದ್ದು, ಅವುಗಳ ದುರಸ್ತಿ ಮಾಡಬೇಕಿದೆ. ಬಾಡಿಗೆ ದರವು ಹೆಚ್ಚಾಗಿದ್ದು, ಅದನ್ನು ಕಡಿಮೆ ಮಾಡಬೇಕು ಎಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್. ಸಿದ್ಧರಾಮಪ್ಪ ಇದ್ದರು.