ಹುಬ್ಬಳ್ಳಿ: ಇಲ್ಲಿನ ಕೋಟಿಲಿಂಗ ನಗರದ ಮಯೂರ ನೃತ್ಯ ಅಕಾಡೆಮಿಯಲ್ಲಿ ವಿದುಷಿ ಹೇಮಾ ವಾಘಮೋಡೆ ಅವರ ಬಳಿ ಭರತನಾಟ್ಯ ತರಬೇತಿ ಪಡೆಯುತ್ತಿರುವ ಅನುಷಾ ಗೌರಿ ರಂಗಪ್ರವೇಶ ಕಾರ್ಯಕ್ರಮ ಏ. 3ರಂದು ಸಂಜೆ 5.30ಕ್ಕೆ ಸವಾಯಿ ಗಂಧರ್ವ ಹಾಲ್ನಲ್ಲಿ ನಡೆಯಲಿದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೇಮಾ ‘ನಮ್ಮ ಅಕಾಡೆಮಿಯಲ್ಲಿ 15 ವರ್ಷಗಳಿಂದ ಅಂದಾಜು 600 ವಿದ್ಯಾರ್ಥಿಗಳು ಭರತನಾಟ್ಯ ತರಬೇತಿ ಪಡೆದಿದ್ದಾರೆ. ಏಳು ಜನ ಕಲಾವಿದರು ರಂಗಪ್ರವೇಶ ಮಾಡಿದ್ದಾರೆ. ಅನುಷಾ ಐದನೇ ತರಗತಿಯಿಂದಲೇ ನನ್ನ ಬಳಿ ತರಬೇತಿಗೆ ಬರುತ್ತಿದ್ದಾಳೆ. ವಿದೂಷಿ ರಮಾ ಸೊರಟೂರ ಬಳಿ ಕರ್ನಾಟಕ ಸಂಗೀತ ಕಲಿಯುತ್ತಿದ್ದು, ಜೂನಿಯರ್ ಪರೀಕ್ಷೆ ತೇರ್ಗಡೆಯಾಗಿದ್ದಾಳೆ’ ಎಂದರು.
ಅನುಷಾ ನಗರದ ಕೇಂದ್ರೀಯ ವಿದ್ಯಾಲಯ–2ರಲ್ಲಿ ಎಂಟನೆ ತರಗತಿ ಓದುತ್ತಿದ್ದು, ಅನೀಶಕುಮಾರ ಎಂ. ಹಾಗೂ ಲೀನಾ ಅನೀಶ ದಂಪತಿಯ ಪುತ್ರಿ.
ಹಿಮ್ಮೇಳದಲ್ಲಿ ಬಾಲಸುಬ್ರಹ್ಮಣ್ಯ ಶರ್ಮಾ (ಗಾಯನ), ಜಿ.ಎಸ್. ನಾಗರಾಜ (ಮೃದಂಗ), ನಿತೀಶ ಅಮ್ಮಣ್ಣಯ್ಯ (ಕೊಳಲು) ಮತ್ತು ಡಿ.ವಿ. ಪ್ರಸನ್ನಕುಮಾರ (ರಿದಂಪ್ಯಾಡ್) ಕಲಾವಿದರು ಪಾಲ್ಗೊಳ್ಳಲಿದ್ದಾರೆ.
ವಿದುಷಿ ಸುಜಾತಾ ರಾಜಗೋಪಾಲ, ನೈರುತ್ಯ ರೈಲ್ವೆಯ ಹಣಕಾಸು ವಿಭಾಗದ ಮುಖ್ಯ ಸಲಹೆಗಾರ್ತಿ ರೂಪಾ ಶ್ರೀನಿವಾಸನ್, ಹುಬ್ಬಳ್ಳಿ ಕೇಂದ್ರೀಯ ವಿದ್ಯಾಲಯ–2 ಪ್ರಾಚಾರ್ಯ ಸಾಯಿಮೋಹನ್ ಕೆ. ಅತಿಥಿಗಳಾಗಿ ಭಾಗವಹಿಸುವರು. ದಿನೇಶ ವಾಘಮೋಡೆ, ಕಿರಣ ಎಚ್.ಎಸ್, ಮಾರುತಿ ಹುಟಗಿ ಇದ್ದರು.