ನವಲಗುಂದ : ಎಲ್ಲಾ ವಾಹನ ಚಾಲಕರು ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡಬಾರದು. ಸೀಟ್ ಬೆಲ್ಟ್, ಹೆಲ್ಮೆಟ್ ಧರಿಸಬೇಕು. ಅತೀ ವೇಗವಾಗಿ ವಾಹನ ಚಾಲನೆ ಮಾಡಬಾರದು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಪಿಎಸ್ಐ ಜನಾರ್ದನ ಭಟ್ರಳ್ಳಿ ಕರೆ ನೀಡಿದರು.
ನಗರದಲ್ಲಿ ಪೊಲೀಸ್ ಇಲಾಖೆಯಿಂದ ಭಾನುವಾರ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹದ ಜಾಥಾದಲ್ಲಿ ಮಾತನಾಡಿದರು.
ಶಾಲಾ ಮಕ್ಕಳು ರಸ್ತೆಯಲ್ಲಿ ಸಂಚರಿಸುವಾಗ ರಸ್ತೆಯ ಎಡ ಭಾಗದಲ್ಲಿ ಸಂಚರಿಸಬೇಕು. ರಸ್ತೆಗಳನ್ನು ದಾಟುವಾಗ ಅತಿ ಜಾಗರೂಕತೆಯಿಂದ ರಸ್ತೆ ದಾಟಬೇಕು. ಶಾಲಾ ವಾಹನಗಳ ಚಾಲಕರನ್ನು ನೇಮಿಸುವ ಮುನ್ನ ಅವರುಗಳ ಪೂರ್ವಾಪರವನ್ನು ಪರಿಶೀಲಿಸಬೇಕಾಗುತ್ತದೆ ಎಂದರು.
ಸಿಪಿಐ ರವಿಕುಮಾರ್ ಕಪ್ಪತ್ತನವರ ಜಾಥಾಗೆ ಚಾಲನೆ ನೀಡಿದರು.
ನಗರದ ಪ್ರಮುಖ ಬೀದಿಗಳಲ್ಲಿ ರಸ್ತೆ ಸುರಕ್ಷತಾ ಜಾಥಾ ಜರುಗಿತು. ಜಾಥಾದಲ್ಲಿ ಸಂಚಾರ ಸುರಕ್ಷತಾ ನಿಯಮಗಳ ಪಾಲನೆ ಬಗ್ಗೆ ಘೋಷಣೆಗಳನ್ನು ಕೂಗಲಾಯಿತು.