ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಜಾ ಸಾಗಾಟ: ಇಬ್ಬರ ಬಂಧನ, ಆರೋಪಿಗಳಿಂದ ₹97,400 ಮೌಲ್ಯದ ವಸ್ತು ವಶ

Last Updated 3 ಸೆಪ್ಟೆಂಬರ್ 2020, 12:48 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರನ್ನು ದೇಶಪಾಂಡೆನಗರದ ದೇಸಾಯಿ ವೃತ್ತದ ಚರ್ಚ್‌ ಬಳಿ ಉಪನಗರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಗದಗ ಜಿಲ್ಲೆಯ ತಿಮ್ಮಾಪೂರದ ಮಾರುತಿ ಹರನಶಿಕಾರಿ (21) ಹಾಗೂ ಚಂದಪ್ಪಹರನಶಿಕಾರಿ (25) ಬಂಧಿತರು.

‘ಆರೋಪಿಗಳಿಂದ 5 ಕೆ.ಜಿ 100 ಗ್ರಾಂ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ್ದ ಬೈಕ್ ಸೇರಿ ₹94,700 ಮೌಲ್ಯದ ವಸ್ತು ಹಾಗೂ ₹1 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ’ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಪಿ. ಕೃಷ್ಣಕಾಂತ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಹಾವೇರಿ ಜಿಲ್ಲೆಯ ಶಿಶುವಿನಾಳ ಗ್ರಾಮದ ವ್ಯಕ್ತಿಯೊಬ್ಬನಿಂದ ಗಾಂಜಾ ಖರೀದಿಸಿದ್ದ ಆರೋಪಿಗಳು, ಹುಬ್ಬಳ್ಳಿ ಮತ್ತು ಗದಗದಲ್ಲಿ ಮಾರಾಟ ಮಾಡಲು ಮುಂದಾಗಿದ್ದರು. ಈ ಕುರಿತು ಸಿಕ್ಕ ಮಾಹಿತಿ ಮೇರೆಗೆ, ಉಪನಗರ ಠಾಣೆ ಇನ್‌ಸ್ಪೆಕ್ಟರ್‌ ಎಸ್‌.ಕೆ. ಹೊಳೆಣ್ಣವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಮಾಲು ಸಮೇತ ಆರೋಪಿಗಳನ್ನು ಬಂಧಿಸಿದೆ’ ಎಂದು ಹೇಳಿದರು.

ಪಿಯುಸಿ ಓದುತ್ತಿದ್ದರು:

‘ಆರೋಪಿ ಮಾರುತಿ ಗದುಗಿನ ಖಾಸಗಿ ಕಾಲೇಜೊಂದರಲ್ಲಿ ಪಿಯುಸಿ ಓದುತ್ತಿರುವುದಾಗಿ ಹೇಳಿದ್ದಾನೆ. ಮತ್ತೊಬ್ಬ ಕೆಲಸವಿಲ್ಲದೆ ಓಡಾಡಿಕೊಂಡಿದ್ದ. ಆರೋಪಿಗಳ ವಿರುದ್ಧ ಬೇರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಇನ್‌ಸ್ಪೆಕ್ಟರ್ ಹೊಳೆಣ್ಣವರ ಮಾಹಿತಿ ನೀಡಿದರು.

ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪಿಎಸ್‌ಐಗಳಾದ ಸೀತಾರಾಮ್, ಅಶೋಕ ಬಿ.ಎಸ್‌.ಪಿ., ಸಿಬ್ಬಂದಿ ಸುನೀಲ ಪಾಂಡೆ, ಮಲ್ಲಿಕಾರ್ಜುನ ದನಿಗೊಂಡ, ಮಂಜುನಾಥ ಯಕ್ಕಡಿ, ಕರಬಸಪ್ಪ ನೆಲಗುಡ್ಡ, ಬಸವರಾಜ ಸುಣಗಾರ, ಉಮೇಶ ಹೆದ್ದೇರಿ, ರೇಣಪ್ಪ ಸಿಕ್ಕಲಗೇರ, ರವಿ ಹೊಸಮನಿ, ನಾಗರಾಜ ಬೀರಣ್ಣವರ, ಸಂತೋಷ ಅಳಗವಾಡಿ, ಮಾಬುಸಾಬ ಮುಲ್ಲಾ ಹಾಗೂ ಮಂಜು ಕಮತದ ಅವರಿಗೆ ಪೊಲೀಸ್ ಕಮಿಷನರ್ ಆರ್. ದಿಲೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT