ಧಾರವಾಡ: ‘ಕೇಂದ್ರ ಸರ್ಕಾರದ ಬೆಂಬಲಬೆಲೆಯಡಿ ಹಿಂಗಾರು ಹಂಗಾಮಿನ ಎಫ್ಎಕ್ಯೂ ಗುಣಮಟ್ಟದ ಕಡಲೆಕಾಳು ಖರೀದಿ ಕೇಂದ್ರ ಆರಂಭವಾಗಿದ್ದು, ರೈತರು ನೋಂದಣಿ ಮಾಡಿಕೊಳ್ಳಲು ಮಾರ್ಚ್ 31 ಕೊನೆಯ ದಿನವಾಗಿದೆ’ ಎಂದು ಜಿಲ್ಲಾ ಕಾರ್ಯಪಡೆ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
‘ಪ್ರತಿ ಕ್ವಿಂಟಲ್ ಕಡಲೆಗೆ ₹5,335ರಂತೆ ಖರೀದಿ ಮಾಡಲಾಗುತ್ತಿದೆ. ಒಟ್ಟು 22 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ನೋಂದಾಯಿತ ರೈತರಿಂದ ಮೇ 15ರವರೆಗೆ ಕಡಲೆ ಖರೀದಿಸಲಾಗುತ್ತದೆ. ಪ್ರತಿ ರೈತರಿಂದ ಪ್ರತಿ ಎಕರೆಗೆ ಗರಿಷ್ಠ 4 ಕ್ವಿಂಟಲ್ನಂತೆ ಹಾಗೂ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್ ಖರೀದಿಸಲಾಗುವುದು. ತೇವಾಂಶ ಪ್ರಮಾಣ ಶೇ 14ಕ್ಕಿಂತ ಕಡಿಮೆ ಇರಬೇಕು’ ಎಂದು ತಿಳಿಸಿದ್ದಾರೆ.
ದಾಖಲೆಗಳು: ಆಧಾರ್ ಮೂಲ ಹಾಗೂ ನಕಲು ಪ್ರತಿ, ಕಡಲೆಕಾಳು ಬೆಳೆ ನಮೂದಾಗಿರುವ 2022-23ನೇ ಸಾಲಿನ ಪಹಣಿ ಪತ್, ಗ್ರಾಮ ಲೆಕ್ಕಾಧಿಕಾರಿ ನೀಡಿದ ಕಡಲೆಕಾಳು ಬೆಳೆಯ ದೃಢೀಕರಣ ಪತ್ರ, ಆಧಾರ್ ಜೋಡಣೆಗೊಂಡ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ.
ಗುಣಮಟ್ಟ: ಕಡಲೆಕಾಳು ಎಫ್ಎಕ್ಯೂ ಗುಣಮಟ್ಟ ಅಂದರೆ ಚೆನ್ನಾಗಿ ಒಣಗಿರಬೇಕು. ಉತ್ತಮ ಗಾತ್ರ, ಬಣ್ಣ ಮತ್ತು ಆಕಾರ ಹೊಂದಿರಬೇಕು. ಮಣ್ಣಿನಿಂದ ಪ್ರತ್ಯೇಕಿಸಿ, ಸ್ವಚ್ಛಗೊಳಿಸಿರಬೇಕು. ಕ್ರಿಮಿಕೀಟಗಳಿಂದ ಮುಕ್ತವಾಗಿರಬೇಕು.
ಸರ್ಕಾರಿ ರಜೆದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಖರೀದಿ ಕೇಂದ್ರಗಳಲ್ಲಿ ಕಡಲೆಕಾಳು ಖರೀದಿಸಲಾಗುವುದು. ಮಾಹಿತಿಗೆ 0836–2004419 ಸಂಖ್ಯೆ ಸಂಪರ್ಕಿಸಬಹುದು.