ಹುಬ್ಬಳ್ಳಿ: ನಮ್ಮ ಸಮಾಜಕ್ಕೆ ಪ್ರಾತಿನಿಧ್ಯ ನೀಡಲು ರಾಜ್ಯ ಬಿಜೆಪಿ ಸರ್ಕಾರ ನಿಗಮ ಸ್ಥಾಪನೆ ಮಾಡಲು ಮುಂದಾಗಿದ್ದು ಶ್ಲಾಘನೀಯ, ಅದೇ ರೀತಿ ಮರಾಠಾ ಸಮಾಜವನ್ನು ‘3ಬಿ’ ಯಿಂದ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಉತ್ತರ ಕರ್ನಾಟಕ ಕ್ಷತ್ರೀಯ ಮರಾಠಾ ಸಂಘಟನಾ ಸಮಿತಿ ಪದಾಧಿಕಾರಿಗಳು ಆಗ್ರಹಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಕೇಶವ ಯಾದವ ‘ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆ ಮಾಡಿದರೆ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಹಿಂದುಳಿದ ನಮ್ಮ ಸಮಾಜದ ಜನರಿಗೆ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಅನುಕೂಲವಾಗುತ್ತದೆ. ಈ ಬೇಡಿಕೆ ಈಡೇರಿಕೆಗಾಗಿ ಹಲವು ಬಾರಿ ಸಮಾವೇಶ, ಏಕ್ ಮರಾಠಾ, ಲಾಕ್ ಮರಾಠಾ ಎಂಬ ಕಾರ್ಯಕ್ರಮಗಳನ್ನು ಮಾಡಿದ್ದೆವು. ಮುಂದೆಯೂ ಹೋರಾಟ ಮಾಡುತ್ತೇವೆ’ ಎಂದರು.
‘ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು, ದಾವಣಗೆರೆ ಜಿಲ್ಲೆ ಹೊಸಗೇರಿಯಲ್ಲಿರುವ ಶಿವಾಜಿ ಮಹಾರಾಜರ ತಂದೆ ಶಹಾಜ ಮಹಾರಾಜರ ಸಮಾಧಿಯನ್ನು ಸರ್ಕಾರ ಪ್ರೇಕ್ಷಣೀಯ ಸ್ಥಳವಾಗಿ ರೂಪಿಸಬೇಕು’ ಎಂದು ಒತ್ತಾಯಿಸಿದರು.
ಸಮಿತಿಯ ಪ್ರಮುಖರಾದ ಎಸ್.ಎಂ. ಬಡಸ್ಕರ, ಸಿ.ಎಂ. ಕಾಳೆ, ಆರ್.ಜಿ. ಪಾಟೀಲ, ವಿ.ಡಿ. ಜಾಧವ, ನಾರಾಯಣ ವೈದ್ಯ, ಸಂತೋಷ ಕೈರೆ ಇದ್ದರು.