ಹುಬ್ಬಳ್ಳಿ: ‘ಪರಿಶಿಷ್ಟ ಜಾತಿಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸುವ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಸರ್ಕಾರ ಶೀಘ್ರ ಜಾರಿಗೆ ತರಬೇಕು’ ಎಂದು ಮಾಜಿ ಬಿಜೆಪಿ ಶಾಸಕ ಹಾಗೂ ಮಾದರ ಸಮಾಜದ ಮುಖಂಡ ವೀರಭದ್ರಪ್ಪ ಹಾಲಹರವಿ ಒತ್ತಾಯಿಸಿದರು.
‘ಒಳ ಮೀಸಲಾತಿ ಕುರಿತು ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪು, ಮಾದಿಗ ಸಮುದಾಯದ ವಿವಿಧ ಸಂಘಟನೆಗಳು ನಡೆಸಿಕೊಂಡು ಬಂದಿರುವ ಹೋರಾಟಕ್ಕೆ ಸಿಕ್ಕ ಜಯವಾಗಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಎಸ್.ಸಿ.ಯಲ್ಲಿ 101 ಉಪ ಜಾತಿಗಳಿದ್ದು, ಶೇ 15ರಷ್ಟು ಮೀಸಲಾತಿ ಇದೆ. ಆದರೆ, ಇದು ಕೆಲವೇ ಪ್ರಬಲ ಜಾತಿಗಳ ಪಾಲಾಗುತ್ತಾ ಬಂದಿದೆ. ಡೋಹರ, ಮಾಚಿಗಾರ, ಸಮಗಾರದಂತಹ ಅನೇಕ ಸಣ್ಣ ಜಾತಿಗಳು ಮೀಸಲಾತಿಯಿಂದ ವಂಚಿತವಾಗಿವೆ. ಇದರ ಅಸಮಾನತೆ ಪರಿಹಾರಕ್ಕೆ ಒಳ ಮೀಸಲಾತಿಯೊಂದೇ ಪರಿಹಾರ’ ಎಂದು ಅಭಿಪ್ರಾಯಪಟ್ಟರು.
‘ವರದಿ ಜಾರಿ ಕುರಿತು ಸರ್ಕಾರ ಸದನದಲ್ಲಿ ಚರ್ಚಿಸಿ ಅನುಮೋದನೆ ಪಡೆಯಬೇಕು. ಇದಕ್ಕೆ ಪಕ್ಷಾತೀತವಾಗಿ ಎಲ್ಲರೂ ಬೆಂಬಲಿಸಬೇಕು. ಆಯೋಗ ಪ್ರಸ್ತಾಪಿಸಿರುವಂತೆ ಎಡಗೈ ಜಾತಿಗಳಿಗೆ ಶೇ 6, ಬಲಗೈ ಜಾತಿಗಳಿಗೆ ಶೇ 5, ಸ್ಪೃಶ್ಯ ಜಾತಿಗಳಿಗೆ ಶೇ 3 ಹಾಗೂ ಇತರೆ ಪರಿಶಿಷ್ಟ ಜಾತಿಗಳಿಗೆ ಶೇ 1 ಮೀಸಲಾತಿ ಒದಗಿಸುವ ಬಗ್ಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಸಪ್ಪ ಎಸ್. ಮಾದರ, ಸಂತೋಷ ಅರಕೇರಿ, ವೆಂಕಟೇಶ ಎಸ್., ರವಿ ಎನ್. ಬಂಕಾಪುರ ಹಾಗೂ ಶಾಂತರಾಜ ಪೋಳ ಇದ್ದರು.